ADVERTISEMENT

ಕುದೇರು ಗ್ರಾಮದಲ್ಲಿ ಗೌರಿಗೇ ಅಗ್ರಪೂಜೆ

ಗಣೇಶ ಬದಲಿಗೆ ಗೌರಿ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2018, 7:51 IST
Last Updated 12 ಸೆಪ್ಟೆಂಬರ್ 2018, 7:51 IST
ಸಂತೇಮರಹಳ್ಳಿ ಸಮೀಪವಿರುವ ಕುದೇರು ಗ್ರಾಮದ ಸ್ವರ್ಣಗೌರಿ ದೇವಸ್ಥಾನ
ಸಂತೇಮರಹಳ್ಳಿ ಸಮೀಪವಿರುವ ಕುದೇರು ಗ್ರಾಮದ ಸ್ವರ್ಣಗೌರಿ ದೇವಸ್ಥಾನ   

ಸಂತೆಮರಹಳ್ಳಿ (ಚಾಮರಾಜನಗರ ಜಿಲ್ಲೆ):ಸಮೀಪದ ಕುದೇರು ಗ್ರಾಮದಲ್ಲಿ ಭಾದ್ರಪದ ಮಾಸದಲ್ಲಿ ಗೌರಿ ಪೂಜಿಸಲಾಗುತ್ತದೆ. ಗಣೇಶನ ಹಬ್ಬದ ಬಳಿಕ ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ಗ್ರಾಮದಲ್ಲಿ ಗೌರಿಗೇ ಅಗ್ರಪೂಜೆ. ಪ್ರತಿ ಮನೆಯಲ್ಲೂ ಗೌರಿ ಮೂರ್ತಿ ಪ್ರತಿಷ್ಠಾಪಿಸಿ 12 ದಿನಗಳವರೆಗೆ ಪೂಜಿಸುವ ಸಂಪ್ರದಾಯವಿದೆ. ವಿವಿಧೆಡೆಯಿಂದ ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುವುದು ವಿಶೇಷ.

ಬುಧವಾರ ಗ್ರಾಮದ ಎಲ್ಲ ವರ್ಗದ ಜನರು ಹಬ್ಬದ ಆಚರಣೆ ಆರಂಭಿಸಿದರು. ಗೌರಿಹಬ್ಬವು ಗ್ರಾಮದಲ್ಲಿ ಸಾಮರಸ್ಯದ ಸಂಕೇತವಾಗಿದೆ. ಗ್ರಾಮದ ಮುಂಭಾಗವಿರುವ ದೊಡ್ಡಕೆರೆ ಯಮುನಾ ತಡಿಯಲ್ಲಿ ಗೌರಿಹಬ್ಬದ ದಿನದಂದು ಮರಳಿನ ಗೌರಿಮೂರ್ತಿಯನ್ನು ಸಿದ್ಧಗೊಳಿಸಲಾಗುತ್ತದೆ. ಈ ವೇಳೆ ಮಹಿಳೆಯರು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುತ್ತಾರೆ. ನಂತರ, ಉತ್ಸವ ಮೂರ್ತಿಯನ್ನು ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಐದನೇ ದಿನಕ್ಕೆ ಮರಳಿನ ಗೌರಿಯನ್ನು ಬದಲಾಯಿಸಿ ಕಡಲೆಹಿಟ್ಟಿನ ಗೌರಿಯನ್ನು ಪ್ರತಿಷ್ಠಾಪಿಸಿ ಅದಕ್ಕೆ ಚಿನ್ನದ ಕವಚ, ಆಭರಣಗಳನ್ನು ತೊಡಿಸಲಾಗುತ್ತದೆ. ಅಂದಿನಿಂದ ಆ ವಿಗ್ರಹವನ್ನು ಸ್ವರ್ಣಗೌರಿ ಎಂದು ನಾಮಕರಣ ಮಾಡಿ ಪ್ರತಿದಿನ ವಿಶಿಷ್ಟವಾಗಿ ಪೂಜೆ ಸಲ್ಲಿಸಲಾಗುತ್ತದೆ.

ADVERTISEMENT

ಮಹಿಳೆಯರು ಕಂಕಣಭಾಗ್ಯಕ್ಕಾಗಿ ಗೌರಿದೇವಿಗೆ ಮಾಂಗಲ್ಯ ಅರ್ಪಿಸುತ್ತಾರೆ. ಕೆಲ ದಂಪತಿಗಳು ಸಂತಾನ ಭಾಗ್ಯಕ್ಕಾಗಿ ಚಿನ್ನ, ಬೆಳ್ಳಿಯ ತೊಟ್ಟಿಲು ಸಮರ್ಪಿಸುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಇನ್ನೂ ಹಲವು ಹರಕೆಗಳನ್ನು ಪೂರೈಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.