ಗುಂಡ್ಲುಪೇಟೆ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಹೇರಲಾಗಿರುವ ದಿಗ್ಬಂಧನದಿಂದಾಗಿ ಬಡ ಹಾಗೂ ಕೂಲಿ ಕಾರ್ಮಿಕರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದು ನಿಜ. ಆದರೆ, ಇದರಿಂದಾಗಿ ಒಂದಷ್ಟು ಕುಟುಂಬಗಳುನೆಮ್ಮದಿಯಿಂದಿವೆ.
ಹೇಗೆ ಅಂತ ಕೇಳುತ್ತಿದ್ದೀರಾ? ದಿಗ್ಬಂಧನ ಹೇರಿಕೆಯ ನಂತರ ಜಿಲ್ಲೆಯಾದ್ಯಂತ ಮದ್ಯದ ಅಂಗಡಿಗಳು ಮುಚ್ಚಿವೆ. ಕೆಲವು ಕಡೆಗಳಲ್ಲಿ ಕದ್ದು ಮುಚ್ಚಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆಯಾದರೂ ಎಲ್ಲರಿಗೂ ಸಲೀಸಾಗಿ ಸಿಗುತ್ತಿಲ್ಲ. ಹೀಗಾಗಿ, ಮದ್ಯಪ್ರಿಯರ ಕುಟುಂಬಗಳ ಮಹಿಳೆಯರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ತಾಲ್ಲೂಕಿನ ಮದ್ಯಪ್ರಿಯರಿಗೆ ಪ್ರತಿ ದಿನ ಸೂರ್ಯೋದಯಕ್ಕೂ ಮುಂಚೆಯೇ ಮದಿರೆ ಸಿಗಬೇಕು. ಇಲ್ಲದಿದ್ದರೆ ಕೈ ನಡುಕ ಬರುತ್ತದೆ, ಕೆಲಸ ಮಾಡಲು ಆಗುವುದಿಲ್ಲ ಎಂಬ ನೆಪಗಳನ್ನೆಲ್ಲ ಒಡ್ಡುತ್ತಿದ್ದರು. ಕೂಲಿ ಮಾಡಿ ಸಂಪಾದಿಸಿದ ಹಣವನ್ನೆಲ್ಲ ಕುಡಿತಕ್ಕೆ ವ್ಯಯಿಸುತ್ತಿದ್ದರು. ಮನೆಯಲ್ಲಿ ಸದಸ್ಯರೊಂದಿಗೆ ದಿನಾ ಜಗಳವಾಡಿ ಇಡೀ ಮನೆಯ ನೆಮ್ಮದಿ ಹಾಳು ಮಾಡುತ್ತಿದ್ದರು.
ಇದೀಗ ಕೊರೊನಾ ವೈರಸ್ ಎಂಬ ಮಾರಿ ಎಲ್ಲ ಕುಡುಕರನ್ನು ಕಟ್ಟಿ ಹಾಕಿದೆ. ಆದಾಯ ಇಲ್ಲದಿದ್ದರೂ ಸ್ವಲ್ಪ ನೆಮ್ಮದಿ ಇದೆ ಎಂದು ಮಹಿಳೆಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿರುವ ಮದ್ಯದಂಗಡಿಗಳು ಯಾವಾಗಲೂ ಬೆಳಿಗ್ಗೆಯೇ ತೆರೆಯುವುತ್ತಿದ್ದವು. ಕುಡಿತದ ಚಟ ಹೊಂದಿರುವವರು ಬೆಳಿಗ್ಗೆಯಿಂದಲೇ ಮದ್ಯ ಸೇವನೆ ಮಾಡುತ್ತಿದ್ದರು. ಆರೋಗ್ಯ ಕೆಡಿಸಿಕೊಂಡು ಆಗಾಗ ಆಸ್ಪತ್ರೆಗೆ ಹೋಗಬೇಕಾದ ಸ್ಥಿತಿ ಇತ್ತು. ಈಗ ಅದಕ್ಕೆಲ್ಲ ಕಡಿವಾಣ ಬಿದ್ದಿದೆ’ ಎಂಬುದು ಮಹಿಳೆಯರ ಮಾತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.