ADVERTISEMENT

ಬಿಆರ್‌ಟಿ: ಕಾಡಾನೆ ತುಳಿದು ವ್ಯಕ್ತಿ ಮೃತ್ಯು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 12:13 IST
Last Updated 5 ನವೆಂಬರ್ 2020, 12:13 IST
   

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವಲಯದ ವ್ಯಾಪ್ತಿಗೆ ಬರುವ ಹೊಂಗಲವಾಡಿ ಗ್ರಾಮದಲ್ಲಿ ಕಾಡಾನೆ ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಗ್ರಾಮದ ಗುರುಸ್ವಾಮಿ (55) ಮೃತಪಟ್ಟವರು. ಅವರು ಬುಧವಾರ ಕಾಡಂಚಿನ ಪ್ರದೇಶದಲ್ಲಿ ಹಸುಗಳನ್ನು ಮೇಯಲು ಬಿಟ್ಟಿದ್ದರು. ಹಸುಗಳು ಬಾರದೇ ಇದ್ದಾಗ ಅವುಗಳನ್ನು ಹುಡುಕುವುದಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಆನೆ ದಾಳಿ ಮಾಡಿದೆ ಎನ್ನಲಾಗಿದೆ.

ಗುರುಸ್ವಾಮಿ ಅವರು ರಾತ್ರಿ ಮನೆಗೆ ಬಾರದೇ ಇದ್ದುದರಿಂದ ಆತಂಕಕೊಂಡ ಮನೆಯವರು ಗುರುವಾರ ಬೆಳಿಗ್ಗೆ ಕಾಡಂಚಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ. ಕಾಲುವೆಯೊಂದರ ಬಳಿಮೃತದೇಹ ಪತ್ತೆಯಾಗಿದೆ. ಕೆ.ಗುಡಿ ವಲಯದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‌ಕುಮಾರ್‌ ಅವರು, ‘ಆನೆ ದಾಳಿಯಿಂದಲೇ ವ್ಯಕ್ತಿ ಮೃತಪಟ್ಟಿದ್ದಾರೆ. ಆದರೆ, ಜಮೀನಿನಲ್ಲಿ ಅಥವಾ ಕಾಡಿನಲ್ಲಿ ದಾಳಿ ಮಾಡಿದೆಯೇ ಎಂಬುದು ಗೊತ್ತಾಗಿಲ್ಲ. ಆರ್‌ಎಫ್‌ಒ ಅವರ ವರದಿ ಬಂದ ನಂತರ ತಿಳಿಯಲಿದೆ’ ಎಂದು ಹೇಳಿದರು.

ಚಾಮರಾಜನಗರ ಪೂರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.