
ಯಳಂದೂರು: ‘ಶೋಷಿತ ಸಮುದಾಯದ ಜನರ ಗುಡಿಸಲನ್ನು ಗುಡಿಯಾಗಿ ಮಾಡಿಕೊಂಡು ಅಕ್ಷರ ಕಲಿಸುವ ಮೂಲಕ ಭಾರತದಲ್ಲಿ ಮನೆ ಮಾತಾದ ಸಾವಿತ್ರಿಬಾಯಿ ಫುಲೆ, ನಿಜವಾದ ಶಾರೆದೆಯಾಗಿ ಬದುಕಿದರು’ ಎಂದು ಚಿಂತಕಿ ಮಂಜುಳಾ ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ಧಾರವಾಡ ಜಿಲ್ಲಾ ಹಾಗೂ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾವಿತ್ರಿಬಾಯಿ ಫುಲೆ ಅವರ ಆದರ್ಶ ಗುಣಗಳನ್ನು ಪ್ರತಿ ಮಹಿಳೆಯರು ಅಳವಡಿಸಿಕೊಳ್ಳಬೇಕು. ಅಬಲೆಯರ ಮೇಲೆ ಶೋಷಣೆ ನಡೆಯುತ್ತಿದ್ದ ಕಾಲಘಟ್ಟದಲ್ಲಿ ಮಹಿಳೆಯರಿಗೆ ಶಿಕ್ಷಣದ ಮಹತ್ವ ತಿಳಿಸಿಕೊಟ್ಟರು. ಸಮಾಜದಲ್ಲಿ ಸ್ತ್ರೀಯರು ಕೂಡ ಪುರುಷರಷ್ಟೇ ಸಮಾನರು ಹಾಗೂ ಸಬಲರು ಎಂಬುದನ್ನು ತಿಳಿಸಿಕೊಟ್ಟ ಮಹಾತಾಯಿ ಎಂದರು.
ಶಾಸಕ ಎ.ಆರ್.ಕೃಷ್ಣಮೂರ್ತಿ, ‘ಫುಲೆ ದಂಪತಿ ಸೌಲಭ್ಯಗಳ ಕೊರತೆ ನಡುವೆಯೂ ಅಕ್ಷರ ಕಲಿಕೆಗೆ ಬದುಕು ಮುಡುಪಾಗಿಟ್ಟರು. ಅನ್ಯರು ಕಾಟ ಕೊಟ್ಟರು ಅಂಜದೆ ಅಭಾಗಿನಿಯರಿಗೆ ಶಿಕ್ಷಣ ಧಾರೆ ಎರೆದರು. ಇಂತಹವರ ಸಂಖ್ಯೆ ಅಕ್ಷಯವಾಗಬೇಕು. ಈ ದೆಸೆಯಲ್ಲಿ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು’ ಎಂದು ವಿವರಿಸಿದರು.
ಸಾವಿತ್ರಿಬಾಯಿ ಫುಲೆ ತಾಲ್ಲೂಕು ಸಂಘದ ಅಧ್ಯಕ್ಷೆ ಮಹದೇವಮ್ಮ, ಮುಖಂಡರಾದ ಪ್ರಭುಪ್ರಸಾದ್, ಬಿಇಒ ಮಾರಯ್ಯ, ಟಿಪಿಒ ಶಾಂತರಾಜ್, ಬಿಆರ್ಸಿ ಕುಮಾರಿ, ಉಪ ಪ್ರಾಂಶುಪಾಲ ನಂಜುಂಡಯ್ಯ, ಇಂದ್ರಮ್ಮ, ಜೆ.ಶ್ರೀನಿವಾಸ, ಡಾ.ಶ್ರೀಧರ್, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಸಿದ್ದರಾಜ್, ನೌಕರ ಸಂಘದ ಅಧ್ಯಕ್ಷ ಮಹೇಶ್, ಶಿಕ್ಷಕ ಸಂಘದ ಅಧ್ಯಕ್ಷ ಸೋಮಣ್ಣ, ಯೋಗೇಶ್, ಲಿಂಗರಾಜು ಮೂರ್ತಿ, ಸರಸ್ವತಿ, ಶಂಕರ್, ಸರ್ಕಲ್ ಇನ್ ಸ್ಪೆಕ್ಟರ್ ಸುಬ್ರಮಣ್ಯಂ, ಸಬ್ ಇನ್ ಸ್ಪೆಕ್ಟರ್ ಆಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.