ADVERTISEMENT

ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ಅನ್ಯಾಯ; ಆರೋಪ

ಸುತ್ತೋಲೆಗಳ ಮೂಲಕ ಕಾಯ್ದೆ ದುರ್ಬಲಗೊಳಿಸುತ್ತಿರುವ ಸರ್ಕಾರ–ಮಹದೇವಸ್ವಾಮಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 3:46 IST
Last Updated 14 ಸೆಪ್ಟೆಂಬರ್ 2022, 3:46 IST
ಚಾಮರಾಜನಗರಕ್ಕೆ ಮಂಗಳವಾರ ಭೇಟಿ ನೀಡಿದ ಎಸ್‌ಸಿ ಎಸ್‌ಟಿ ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷ ಮಹದೇಸ್ವಾಮಿ ಅವರನ್ನು ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಸನ್ಮಾನಿಸಿದರು
ಚಾಮರಾಜನಗರಕ್ಕೆ ಮಂಗಳವಾರ ಭೇಟಿ ನೀಡಿದ ಎಸ್‌ಸಿ ಎಸ್‌ಟಿ ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷ ಮಹದೇಸ್ವಾಮಿ ಅವರನ್ನು ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಸನ್ಮಾನಿಸಿದರು   

ಚಾಮರಾಜನಗರ: ರಾಜ್ಯ ಸರ್ಕಾರವು ಎಸ್‌ಸಿ ಎಸ್‌ಟಿ ಗುತ್ತಿಗೆದಾರರಿಗೆ ಅನ್ಯಾಯ ಮಾಡುತ್ತಾ ಬಂದಿದ್ದು, ಗುತ್ತಿಗೆ ನೀಡಿಕೆಯಲ್ಲಿ ಮೀಸಲಾತಿ ನಿಯಮವನ್ನು ಪಾಲನೆ ಮಾಡುತ್ತಿಲ್ಲ. ವಿವಿಧ ಸುತ್ತೋಲೆಗಳ ಮೂಲಕ ಪಾರದರ್ಶಕ ಕಾಯ್ದೆಯನ್ನು ಸರ್ಕಾರ ದುರ್ಬಲಗೊಳಿಸುತ್ತಿದೆ ಎಂದು ರಾಜ್ಯ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಮಂಗಳವಾರ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು,‘ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ಅನುಕೂಲಕಲ್ಪಿಸುವ ಉದ್ದೇಶದಿಂದ 2017ರಲ್ಲಿ ರಾಜ್ಯ ಸರ್ಕಾರ ₹50 ಲಕ್ಷ ಮೊತ್ತದ ಯೋಜನೆಗಳಲ್ಲಿ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ಮೀಸಲಾಯಿತಿ ನೀಡುವುದಕ್ಕಾಗಿ ಕಾಯ್ದೆಗೆ ತಿದ್ದುಪಡಿ ತಂದಿತ್ತು. ನಂತರ ಬಂದ ಸರ್ಕಾರ ಮೀಸಲಾತಿ ನಿಯಮವನ್ನು ಅನುಸರಿಸುತ್ತಿಲ್ಲ. ಸುತ್ತೋಲೆಗಳ ಮೂಲಕ ದುರ್ಬಲ ಮಾಡುತ್ತಿದೆ’ ಎಂದು ದೂರಿದರು.

‘₹2 ಕೋಟಿವರೆಗಿನ ಮೊತ್ತದ ಕಾಮಗಾರಿಗಳನ್ನು ನೇರವಾಗಿ ಕೆಐಆರ್‌ಡಿಎಲ್‌ಗೆ ವಹಿಸುವ ಸಂಬಂಧ ನಿಯಮ ತಿದ್ದುಪಡಿ ಮಾಡಲಾಗಿದೆ. ಎಸ್‌ಸಿ ಎಸ್‌ಟಿ ಗುತ್ತಿಗೆದಾರರಿಗೆ ಮೀಸಲಾತಿ ಸಿಗಬಾರದು ಎಂಬ ಉದ್ದೇಶದಿಂದಲೇ ಈ ರೀತಿ ಮಾಡಲಾಗಿದೆ. ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯ ಅಡಿಯಲ್ಲಿ ಕೈಗೊಳ್ಳುವ ಕಾಮಗಾರಿಗಳು ₹10 ಕೋಟಿ ‌ವೆಚ್ಚದ್ದಾಗಿರಬೇಕು ಎಂಬ ಸುತ್ತೋಲೆ ಸರ್ಕಾರ ಹೊರಡಿಸಿದೆ. ಅಲ್ಲದೇ ನಗರಸಭೆಗಳ ವ್ಯಾಪ್ತಿಯಲ್ಲಿ ಕೈಗೊಳ್ಳುವ ಕಾಮಗಾರಿಗಳನ್ನು ಎರಡು ಪ್ಯಾಕೇಜ್‌ ಮಾಡಬಹುದು ಎಂದು ಸುತ್ತೋಲೆ ಹೊರಡಿಸಲಾಗಿದೆ. ವಿವಿಧ ಮೊತ್ತದ ಕಾಮಗಾರಿಗಳನ್ನು ಒಟ್ಟು ಗೂಡಿಸಿ ಪ್ಯಾಕೇಜ್‌ ಟೆಂಡರ್‌ ಮಾಡಿ, ಎಸ್‌ಸಿ ಎಸ್‌ಟಿ ಗುತ್ತಿಗೆದಾರರಿಗೆ ಕಾಮಗಾರಿ ಸಿಗದಂತೆ ಮಾಡುವುದು ಇದರ ಉದ್ದೇಶ’ ಎಂದು ಆರೋಪಿಸಿದರು.

ADVERTISEMENT

‘ಪ್ಯಾಕೇಜ್‌ ಟೆಂಡರ್‌ ವಿರುದ್ಧ ನಮ್ಮ ಸಂಘದ ಕಲಬುರ್ಗಿ ಘಟಕ ಹೈಕೋರ್ಟ್‌ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಟೆಂಡರ್‌ ರದ್ದುಗೊಳಿಸಿದೆ ಎಂದರು.

₹1 ಕೋಟಿಗೆ ಹೆಚ್ಚಿಸಿ: ‘ಈಗ ₹50 ಲಕ್ಷದ ಮೊತ್ತದ ಕಾಮಗಾರಿಗಳಿಗೆ ಮಾತ್ರ ಮೀಸಲಾತಿ ಇದೆ. ಇದನ್ನು ₹1 ಕೋಟಿವರೆಗೆ ಹೆಚ್ಚಿಸಬೇಕು ಎಂಬುದು ನಮ್ಮ ಬೇಡಿಕೆ. ಬಜೆಟ್‌ನಲ್ಲೂ ಈ ಸಂಬಂಧ ಘೋಷಣೆ ಮಾಡಲಾಗಿದೆ. ಆದರೆ, ಇದುವರೆಗೂ ಜಾರಿಯಾಗಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಲೂ ಈ ಸಂಬಂಧದ ಕಡತ ಅವರ ಬಳಿಗೆ ಹೋಗಿತ್ತು. ಬಸವರಾಜ ಬೊಮ್ಮಾಯಿ ಅವರಿಗೂ ಹೋಗಿತ್ತು. ಈ ಬಗ್ಗೆ ಚರ್ಚೆ ಮಾಡಬೇಕು ಎಂದು ಬೊಮ್ಮಾಯಿ ಅವರು ಕಡತದಲ್ಲಿ ಬರೆದು ಹಣಕಾಸು ಇಲಾಖೆಗೆ ವಾಪಸ್‌ ಕಳುಹಿಸಿದ್ದಾರೆ. ಬಿಜೆಪಿ ಸರ್ಕಾರ ಎಸ್‌ಸಿ, ಎಸ್‌ಟಿ ಜನಾಂಗದ ಮೇಲೆ ದೌರ್ಜನ್ಯ ಮಾಡಿಕೊಂಡು ಬರುತ್ತಿದೆ’ ಎಂದು ಮಹದೇವಸ್ವಾಮಿ ದೂರಿದರು.

ಸಂಘದ ಜಿಲ್ಲಾಧ್ಯಕ್ಷ ಎಂ.ಎಸ್.ಮಾದಯ್ಯ, ರಾಜ್ಯ ಖಜಾಂಚಿ ಹೇಮಂತ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಯ್ಯ, ಉಪಾಧ್ಯಕ್ಷ ಜಗದೀಶ್, ತಾಲ್ಲೂಕು ಅಧ್ಯಕ್ಷ ಬಂಗಾರು, ಸದಸ್ಯ ಸಿ.ಕೆ.ಮಂಜುನಾಥ್‌ ಇದ್ದರು.

---

ರಾಜ್ಯ ಸರ್ಕಾರದ ಗುತ್ತಿಗೆದಾರರ ಸಂಘ ಮಾಡಿರುವ ಶೇ 40ರಷ್ಟು ಕಮಿಷನ್‌ ಆರೋಪದಲ್ಲಿ ನಿಜಾಂಶವಿದೆ
ಮಹದೇವಸ್ವಾಮಿ, ಎಸ್‌ಸಿ ಎಸ್‌ಟಿ ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.