ADVERTISEMENT

ಮಧುಮಲೆ ಅರಣ್ಯದಲ್ಲಿ ಆನೆ ದಾಳಿ, ಸ್ಕೂಟರ್‌ ಸವಾರ ಪಾರು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 15:10 IST
Last Updated 22 ಅಕ್ಟೋಬರ್ 2020, 15:10 IST
ರಸ್ತೆಯಲ್ಲಿ ಬಿದ್ದಿರುವ ಸ್ಕೂಟರ್‌ ಬಳಿಯೇ ಆನೆ ನಿಂತಿರುವುದು (ವಿಡಿಯೊ ಚಿತ್ರ)
ರಸ್ತೆಯಲ್ಲಿ ಬಿದ್ದಿರುವ ಸ್ಕೂಟರ್‌ ಬಳಿಯೇ ಆನೆ ನಿಂತಿರುವುದು (ವಿಡಿಯೊ ಚಿತ್ರ)   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ಮಸಿನಗುಡಿ– ತೆಪ್ಪಕಾಡು ರಸ್ತೆಯಲ್ಲಿ ಸಲಗವೊಂದು ದ್ವಿಚಕ್ರವಾಹನ ಸವಾರರೊಬ್ಬರ ಮೇಲೆ ಗುರುವಾರ ದಾಳಿ ಮಾಡಿದ್ದು, ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಗಂಡಾನೆಯು ದಾಳಿ ನಡೆಸುವ ಸಂದರ್ಭದಲ್ಲಿ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಜೀಪೊಂದನ್ನು ಏರಿ ಸವಾರ ಪಾರಾಗಿದ್ದಾರೆ. ದಾಳಿ ನಡೆಸಿದ ನಂತರವೂ ಆನೆ ರಸ್ತೆ ಬದಿಯಲ್ಲೇ ನಿಂತಿತ್ತು. ಸವಾರರನ್ನು ರಕ್ಷಿಸಿದ ಜೀಪಿನಲ್ಲಿದ್ದವರು ಘಟನೆಯನ್ನು ಚಿತ್ರೀಕರಣ ಮಾಡಿದ್ದಾರೆ.

ರಸ್ತೆಯಲ್ಲಿ ಬಿದ್ದಿದ್ದ ಸ್ಕೂಟರ್‌ ಅನ್ನು ತೆಗೆಯುವುದಕ್ಕಾಗಿ, ಜೀಪಿನಲ್ಲಿ ಇದ್ದವರು ರಸ್ತೆಯಲ್ಲಿ ದೊಡ್ಡ ವಾಹನಗಳನ್ನು ತಡೆದು ಸ್ಕೂಟರ್‌ ಬಳಿ ನಿಲ್ಲಿಸುವಂತೆ ಮನವಿ ಮಾಡಿದರೂ ಕೆಲವರು ಸ್ಪಂದಿಸಲಿಲ್ಲ. ಅಂತಿಮವಾಗಿ ಬೊಲೆರೊದಲ್ಲಿ ಬಂದವರು, ರಸ್ತೆಯಲ್ಲಿದ್ದ ಸ್ಕೂಟರ್‌ ಅನ್ನು ಅಲ್ಲಿಂದ ತೆಗೆದರು.

ADVERTISEMENT

ಘಟನೆ ನಡೆದಿರುವುದನ್ನು ಸ್ಥಳೀಯ ವಲಯ ಅರಣ್ಯಅಧಿಕಾರಿ ದಯಾನಂದನ್‌ ಅವರು ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.

‘ಇಂತಹ ಘಟನೆಗಳು ರಾತ್ರಿ ಸಂಚಾರ ಮಾಡುವವರಿಗೆ ಹೆಚ್ಚು ಆಗುತ್ತದೆ. ರಸ್ತೆ ಬದಿಯಲ್ಲಿ ಆನೆ ಇನ್ನಿತರ ಕಾಡು ಪ್ರಾಣಿಗಳು ಇದ್ದಾಗ ದೂರದಲ್ಲಿಯೇ ವಾಹನಗಳನ್ನು ನಿಧಾನ ಮಾಡಬೇಕು. ಪ್ರಾಣಿಗಳು ರಸ್ತೆ ದಾಟುವ ಭರದಲ್ಲಿ ದಾಳಿ ಮಾಡುವ ಸಂಭವ ಹೆಚ್ಚಿರುತ್ತದೆ’ ಎಂದು ಅವರು ಹೇಳಿದ್ದಾರೆ.

ಘಟನೆಯ ವಿಡಿಯೊ ಯೂನೈಟೆಡ್‌ ಕನ್ಸರ್ವೇಶನ್‌ ಫೇಸ್‌ಬುಕ್ ಪುಟದಲ್ಲಿಪ್ರಕಟವಾಗಿವೆ. ವಿಡಿಯೊವನ್ನು ಕೆಳಗಿನ ಲಿಂಕ್ ಬಳಸಿ ನೋಡಬಹುದು.

https://facebook.com/groups/195208298046043?view=permalink&id=673469773553224&sfnsn=wiwspwa

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.