ADVERTISEMENT

ಚಾಮರಾಜನಗರ: ಮನವೊಲಿಕೆ ನಂತರ ಹಿಜಾಬ್ ತೆಗೆದ ವಿದ್ಯಾರ್ಥಿನಿಯರು

58 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 6:13 IST
Last Updated 28 ಮಾರ್ಚ್ 2022, 6:13 IST
   

ಚಾಮರಾಜನಗರ: ಜಿಲ್ಲೆಯ 58 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದೆ.

ಮುಸ್ಲಿಂ ಸಮುದಾಯದ ಕೆಲವು ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಕೇಂದ್ರಗಳಿಗೆ ಬಂದಿದ್ದರೂ, ಪೊಲೀಸರು, ಶಿಕ್ಷಕರು ಮನವೊಲಿಸಿದ ನಂತರ ಹಿಜಾಬ್ ತೆಗೆದು ಪರೀಕ್ಷಾ ಕೊಠಡಿಗೆ ಹೋಗಿದ್ದಾರೆ.

ಚಾಮರಾಜನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಲವು ವಿದ್ಯಾರ್ಥಿನಿಯರು ಬುರ್ಖಾ ಹಾಗೂ ಹಿಜಾಬ್ ಹಾಕಿಕೊಂಡು ಬಂದಿದ್ದರು. ಪ್ರವೇಶ ದ್ವಾರದಲ್ಲಿದ್ದ ಪೊಲೀಸ್ ಸಿಬ್ಬಂದಿ ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರದ ಆದೇಶವನ್ನು ವಿದ್ಯಾರ್ಥಿಗಳು ಹಾಗೂ ಅವರೊಂದಿಗೆ ಬಂದಿದ್ದ ಪೋಷಕರ ಗಮನಕ್ಕೆ ತಂದರು.

ADVERTISEMENT

ಕೆಲವು ವಿದ್ಯಾರ್ಥಿನಿಯರು ಕೊಠಡಿಗೆ ಹೋಗುವ ಮುನ್ನವೇ ಹಿಜಾಬ್ ತೆಗೆದರೆ, ಇನ್ನೂ ಕೆಲವರು ಕೊಠಡಿಯ ಒಳಗೂ ಹಿಜಾಬ್ ಧರಿಸಿದ್ದರು. ಪರೀಕ್ಷಾ ಸಿಬ್ಬಂದಿ ಆ ವಿದ್ಯಾರ್ಥಿನಿಯರಿಗೂ ಮನವರಿಕೆ ಮಾಡಿದ ನಂತರ ಹಿಜಾಬ್ ತೆಗೆದರು.

ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಡಿಡಿಪಿಐ ಎಸ್.ಎನ್.ಮಂಜುನಾಥ್ 'ಜಿಲ್ಲೆಯ 58 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. 56 ಕೇಂದ್ರಗಳು ಹೊಸ ವಿದ್ಯಾರ್ಥಿಗಳು ಹಾಗೂ ಎರಡು ಕೇಂದ್ರಗಳು ಖಾಸಗಿ ವಿದ್ಯಾರ್ಥಿಗಳಿಗೆ ಮೀಸಲಾಗಿವೆ. 12,271 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ' ಎಂದರು.

'ಸಮವಸ್ತ್ರ ವಿಚಾರದಲ್ಲಿ ಕೋರ್ಟ್ ಹಾಗೂ ಸರ್ಕಾರದ ಆದೇಶವನ್ನು ಪಾಲಿಸುತ್ತೇವೆ. ಹಿಜಾಬ್ ಧರಿಸಿ ಬಂದವರನ್ನು ಮನವೊಲಿಸುತ್ತೇವೆ. ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಕಾರಣಕ್ಕೆ ಪರೀಕ್ಷೆ ಬರೆಯದೆ ವಾಪಸ್ ಹೋದ ಪ್ರಕರಣ ಈವರೆಗೆ ವರದಿಯಾಗಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.