ಗುಂಡ್ಲುಪೇಟೆ: ಹುಲಿ ದಾಳಿಗೆ ಹಸುವೊಂದು ಗಾಯಗೊಂಡಿರುವ ಘಟನೆ ತಾಲೂಕಿನ ತೆರಕಣಾಂಬಿ ಬಳಿಯ ಬಪರ್ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ತೆರಕಣಾಂಬಿ ಗ್ರಾಮದ ಪುಟ್ಟಸ್ವಾಮಿ ಎಂಬುವವರಿಗೆ ಸೇರಿದ ಹಸು ಇದಾಗಿದ್ದು, ಶನಿವಾರ ಎಂದಿನಂತೆ ದನಗಳನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಪೊದೆಯಲ್ಲಿ ಅಡಗಿದ್ದ ಹುಲಿ ಹಸುವಿನ ಮೇಲೆರಗಿದೆ. ಜೊತೆಯಲ್ಲಿ ಮೇಯುತ್ತಿದ್ದ ಉಳಿದ ಹಸುಕರುಗಳು ಬೆದರಿ ಓಡುವಾಗ ದನಗಾಹಿ ಪುಟ್ಟಸ್ವಾಮಿ ಜೋರಾಗಿ ಕೂಗಿದಾಗ ಹುಲಿ ಹಸುವನ್ನು ಬಿಟ್ಟು ಮರೆಯಾಗಿದೆ.
ಹಸುವಿನ ಭುಜ, ಹೊಟ್ಟೆಯ ಎರಡು ಭಾಗದಲ್ಲಿ ಹುಲಿ ಉಗುರಿನಿಂದ ಆಳವಾದ ಗಾಯವಾಗಿವೆ. ಹಸುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಈ ಭಾಗದಲ್ಲಿ ಜಿಂಕೆ ಸಂತತಿ ಕಡಿಮೆಯಾಗಿದ್ದು, ಈಗ ಹುಲಿ ಹಸುವಿನ ಮೇಲೆರಗಲು ಕಾರಣವಾಗಿದೆ. ಸಂರಕ್ಷಿತ ಅರಣ್ಯ ಪ್ರದೇಶವದಲ್ಲಿ ರೈತರ ಜಮೀನುಗಳಲ್ಲೂ ಹುಲಿ ಸಂಚರಿಸುತ್ತಿದೆ. ಆದ್ದರಿಂದ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.