
ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೊಳಪಡುವ ತಾಲ್ಲೂಕಿನ ನಂಜೇದೇವನಪುರ ಗ್ರಾಮದ ಜಮೀನಿನಲ್ಲಿ ಇತ್ತೀಚೆಗೆ ಐದು ಹುಲಿಗಳು ಕಾಣಿಸಿಕೊಂಡಿವೆ. ಇದು ಸ್ಥಳೀಯರು ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ತಾಯಿ ಹುಲಿ ಹಾಗೂ ನಾಲ್ಕು ಹುಲಿ ಮರಿಗಳು ಸಮೀಪದ ಆನೆಮಡುವಿನ ಕೆರೆಯಲ್ಲಿ ನೀರು ಕುಡಿದು ತೆರಳುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ‘ಅವು ಜನ, ಜಾನುವಾರು ಮೇಲೆ ದಾಳಿ ಮಾಡುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
‘ಹುಲಿ ಹಾಗೂ ಮರಿಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಅರಣ್ಯದೊಳಗೆ ಅಳವಡಿಸಿರುವ ಕ್ಯಾಮೆರಾಗಳಲ್ಲಿ ದಾಖಲಾಗಿರುವ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ. ಎನ್ಟಿಸಿಎ ಮಾರ್ಗಸೂಚಿಯಂತೆ ಎಸ್ಒಪಿ ಪ್ರಕಾರ ಹುಲಿಗಳ ಸೆರೆಗೆ ತಂಡ ರಚನೆ ಮಾಡಲಾಗುವುದು. ಎನ್ಟಿಸಿಎ ನಾಮನಿರ್ದೇಶನ ಸದಸ್ಯ, ಚೀಫ್ ವೈಲ್ಡ್ ಲೈಫ್ ವಾರ್ಡನ್, ಆರ್ಎಫ್ಒ ಹಾಗೂ ವೈದ್ಯರನ್ನು ಒಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದೆ’ ಎಂದು ಬಿಆರ್ಟಿ ಡಿಸಿಎಫ್ ಶ್ರೀಪತಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.