ADVERTISEMENT

ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದ ಸನಿಹ ನೀರುಗಂಟಿಯ ಬರ್ಬರ ಹತ್ಯೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 16:09 IST
Last Updated 26 ಜೂನ್ 2020, 16:09 IST
ಬೈಕ್‌ನಲ್ಲಿ ಕುಳಿತ ಭಂಗಿಯಲ್ಲಿ ಪತ್ತೆಯಾದ ಶವ. ಒಳಚಿತ್ರದಲ್ಲಿ ಮಹದೇವಪ್ರಸಾದ್
ಬೈಕ್‌ನಲ್ಲಿ ಕುಳಿತ ಭಂಗಿಯಲ್ಲಿ ಪತ್ತೆಯಾದ ಶವ. ಒಳಚಿತ್ರದಲ್ಲಿ ಮಹದೇವಪ್ರಸಾದ್   

ಮಹದೇಶ್ವರ ಬೆಟ್ಟ: ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನೀರು ಸರಬರಾಜು ವಿಭಾಗದಲ್ಲಿ ಪಂಪ್ ಆಪರೇಟರ್‌ ಆಗಿ (ನೀರುಗಂಟಿ) ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ತಾಳಬೆಟ್ಟದ ತಿರುವಿನಲ್ಲಿ ಗುರುವಾರ ಸಂಜೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಬೆಟ್ಟದ ನಿವಾಸಿ ಮಹದೇವಪ್ರಸಾದ್‌ ಅಲಿಯಾಸ್‌ ಪುನಿ (28) ಕೊಲೆಯಾದವರು.

ಆಯುಧದಿಂದ ತಲೆಗೆ ಬಲವಾಗಿ ಹೊಡೆದು ಕೊಲ್ಲಲಾಗಿದ್ದು, ರಸ್ತೆಯಲ್ಲಿ ನಿಂತಿರುವ ಬೈಕ್‌ನಲ್ಲಿ ಕುಳಿತು ಎದುರಿಗೆ ಬಾಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ADVERTISEMENT

ಮಹದೇವಪ್ರಸಾದ್‌ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಮೈಸೂರಿನಲ್ಲಿದ್ದ ಪತ್ನಿ ನೋಡುವುದಕ್ಕಾಗಿ ಗುರುವಾರ ಸಂಜೆ ನಾಲ್ಕು ಗಂಟೆ ಸಮಯಕ್ಕೆ ಬೈಕ್‌ನಲ್ಲಿ ಬೆಟ್ಟದಿಂದ ಹೊರಟಿದ್ದರು ಎನ್ನಲಾಗಿದೆ.

‘ತಾಳಬೆಟ್ಟ ಸಮೀಪದ ಮೊದಲನೇ ತಿರುವಿನಲ್ಲಿ ಕೃತ್ಯ ನಡೆದಿದೆ. ದುಷ್ಕರ್ಮಿ ಗಳು ಆಯುಧದಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ. ಬೈಕ್‌ನಲ್ಲಿ ಕುಳಿತ ಸ್ಥಿತಿಯಲ್ಲೇ ಶವ ಇತ್ತು’ ಎಂದು ಮಹದೇಶ್ವರ ಬೆಟ್ಟದ ಇನ್‌ಸ್ಪೆಕ್ಟರ್‌ ಬಿ.ಮಹೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವೈಯಕ್ತಿಕ ದ್ವೇಷ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಶುಕ್ರವಾರ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಿಗದಿಯಾಗಿತ್ತು. ಹುಂಡಿ ಎಣಿಕೆ ಮುಗಿದ ನಂತರ ಮೈಸೂರಿಗೆ ತೆರಳುವಂತೆ ಮಹದೇವಪ್ರಸಾದ್‌ ಪೋಷಕರು ಹಾಗೂ ಗೆಳೆಯರು ಹೇಳಿದ್ದರು. ಆದರೆ ಹುಂಡಿ ಎಣಿಕೆ ಆರಂಭವಾಗುವ ಹೊತ್ತಿಗೆ ಬರುವುದಾಗಿ ಹೇಳಿ ಹೋಗಿದ್ದರು ಎಂಬುದು ತಿಳಿಬಂದಿದೆ.

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ ಹದ್ದಣ್ಣವರ್‌, ಡಿವೈಎಸ್‌ಪಿ ನವೀನ್‌ ಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.