ಚಾಮರಾಜನಗರ: ತಾಲ್ಲೂಕಿನ ಬ್ಯಾಡಮೂಡ್ಲು ಗ್ರಾಮದ ಮಾರಿಗುಡಿ ಹತ್ತಿರ ಜಮೀನಿನಲ್ಲಿ ಹುರುಳಿ ಕೀಳುತ್ತಿದ್ದ ರೈತರೊಬ್ಬರ ಮೇಲೆ ಮಂಗಳವಾರ ಬೆಳಿಗ್ಗೆ ಕಾಡು ಹಂದಿಯೊಂದು ದಾಳಿ ಮಾಡಿದೆ. ಗಾಯಗೊಂಡಿರುವ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕ್ಕಮೋಳೆ ಗ್ರಾಮದ ಬಸವರಾಜು (40) ಗಾಯಗೊಂಡ ರೈತ. ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಬಸವರಾಜು ಅವರು ಪತ್ನಿ ಪುಟ್ಟನಂಜಮ್ಮ, ನಾದಿನಿ ಮಂಗಳಮ್ಮ ಜೊತೆಗೂಡಿ ಬೆಳಿಗ್ಗೆ ತಮ್ಮ ಜಮೀನಿನಲ್ಲಿ ಹುರುಳಿ ಗಿಡಗಳನ್ನು ಕೀಳುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಕಾಡು ಹಂದಿಯೊಂದು ಏಕಾಏಕಿ ಅವರ ಮೇಲೆ ದಾಳಿ ನಡೆಸಿತು. ಹಂದಿಯ ಕೋರೆ ತಗುಲಿ ಅವರ ಹೊಟ್ಟೆ ಹಾಗೂ ಬಲಗಾಲಿನ ತೊಡೆ ಭಾಗಕ್ಕೆ ಗಾಯಗಳಾಗಿವೆ.
ಬಸವರಾಜು ಅವರು ಜೋರಾಗಿ ಕಿರುಚಾಡಿದಾಗ ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು ಬಂದು ಹಂದಿಯನ್ನು ಓಡಿಸಿದರು. ಗಾಯಗೊಂಡಿದ್ದ ಬಸವರಾಜು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಚಾಮರಾಜನಗರ ಪೂರ್ವ ಠಾಣೆಯಲ್ಲಿ (ರಾಮಸಮುದ್ರ) ಪ್ರಕರಣ ದಾಖಲಾಗಿದೆ.
ಪರಿಹಾರಕ್ಕೆ ಆಗ್ರಹ: ‘ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಆಗಾಗ್ಗೆ ಕಾಡುಪ್ರಾಣಿಗಳು ದಾಳಿ ನಡೆಸುತ್ತಿದ್ದು, ಇದರಿಂದ ಜಮೀನಿಗೆ ಹೋಗಲು ಭಯವಾಗುತ್ತಿದೆ. ದಾಳಿಗೆ ಒಳಗಾಗಿರುವ ಬಸವರಾಜು ಅವರಿಗೆ ಅರಣ್ಯ ಇಲಾಖೆ ಪರಿಹಾರ ಕೊಡಿಸಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.