ರಾಮನಗರ: ‘ನಗರಸಭೆಯಲ್ಲಿ ಅವ್ಯವಹಾರ ಹೆಚ್ಚಾಗಿದೆ. ಕುಮಾರಸ್ವಾಮಿ ಅವರ ಸಹಾಯಕರು, ಗನ್ ಮ್ಯಾನ್ಗಳಿಗೆ ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ’ ಎಂದು ಚನ್ನಪಟ್ಟಣದ ಜೆಡಿಎಸ್ ಮುಖಂಡಸಿಂಗರಾಜಿಪುರ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಚನ್ನಪಟ್ಟಣದ ಜೆಡಿಎಸ್ ಮುಖಂಡರ ಗುಂಪುಗಾರಿಕೆ ಹಾಗೂ ಎಚ್.ಡಿ. ಕುಮಾರಸ್ವಾಮಿ ಕುಟುಂಬದ ರಾಜಕಾರಣಕ್ಕೆ ಬೇಸತ್ತು ನಾನು ಜೆಡಿಎಸ್ ತೊರೆಯುತ್ತಿದ್ದೇನೆ’ ಎಂದು ಸಿಂಗರಾಜಿಪುರ ರಾಜಣ್ಣ
ತಿಳಿಸಿದರು.
‘1983ರಲ್ಲಿ ಕಾಂಗ್ರೆಸ್ ಹಿಡಿತದಲ್ಲಿದ್ದ ಸಹಕಾರ ಸಂಘಗಳಿಗೆ 2021 ರವರಗೆ 40 ವರ್ಷಗಳ ಕಾಲ ಅವಿರೋಧವಾಗಿ ಆಯ್ಕೆ ನಡೆಯುತ್ತ ಬಂದಿದೆ. ಆದರೆ ಜಯಮುತ್ತು ಪಿತೂರಿಯಿಂದ ಸಂಘಕ್ಕೆ ಚುನಾವಣೆ ನಡೆಸಿದರು. ನಮ್ಮ ಪಕ್ಷದವರು ಚುನಾವಣೆ ಎದುರಿಸಲು ಹಣ ಖರ್ಚು ಮಾಡಬೇಕಾಯಿತು’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
‘ಚನ್ನಪಟ್ಟಣದಿಂದ ಗೆದ್ದ ಕುಮಾರಸ್ವಾಮಿ, ಹಲವು ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕದ ಭರವಸೆ ನೀಡಿದ್ದು ಹುಸಿಯಾಯಿತು. ಪಕ್ಷದ ಮುಖಂಡರಿಗೆ ಯಾವುದೇ ಸ್ಥಾನಮಾನ ನೀಡಲಿಲ್ಲ. ಅಭಿವೃದ್ದಿ ವಿಷಯವಾಗಿಯೂ ಸ್ಪಂದನೆ ಸಿಗಲಿಲ್ಲ. ಭೂನ್ಯಾಯ ಮಂಡಳಿ, ಬಗರ್ ಹುಕ್ಕುಂ ಸಮಿತಿಗಳಿಗೆ ಕನಿಷ್ಠ ಸದಸ್ಯರನ್ನು ನೇಮಕ ಮಾಡಲಾಗಲಿಲ್ಲ’ ಎಂದು ಹೇಳಿದರು.
‘ನಗರಸಭೆಯಲ್ಲಿ ಅವ್ಯವಹಾರ ಹೆಚ್ಚಾಗಿದೆ. ಕುಮಾರಸ್ವಾಮಿ ಅವರ ಸಹಾಯಕರು, ಗನ್ ಮ್ಯಾನ್ಗಳಿಗೆ ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಎಚ್.ಡಿ.ದೇವೇಗೌಡರ ನಂತರದಲ್ಲಿ ಜೆಡಿಎಸ್ ಪಕ್ಷದ ಅಸ್ತಿತ್ವವೇ ಇರುವುದಿಲ್ಲ’ ಎಂದ ಅವರು, ಮುಂದಿನ ರಾಜಕೀಯ ನಡೆ ಕುರಿತು ಸದ್ಯದಲ್ಲೇ ತಿಳಿಸುವುದಾಗಿ ಹೇಳಿದರು.
ರಾಜಣ್ಣ ಬೆಂಬಲಿಗರಾದ ಗೋವಿಂದಹಳ್ಳಿ ಕೃಷ್ಣೇಗೌಡ, ಭೂಹಳ್ಳಿ ಮಹದೇವಯ್ಯ, ಕಲ್ಲಾಪುರ ರಾಜು, ಜಯರಾಮಯ್ಯ, ಮುನೀರ್, ಪುಟ್ಟಸ್ವಾಮಣ್ಣ, ಶಂಕರ್, ಗಂಗಾಧರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.