ADVERTISEMENT

ಚಿಕ್ಕಬಳ್ಳಾಪುರ: ಅಕ್ರಮ ಸಾಗಾಟ, 500 ಕೆ.ಜಿ ರಕ್ತಚಂದನ ವಶ

ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಚದುಲಪುರ ಕ್ರಾಸ್ ಬಳಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 8:49 IST
Last Updated 12 ಫೆಬ್ರುವರಿ 2020, 8:49 IST
ಜಪ್ತಿ ಮಾಡಿದ ರಕ್ತಚಂದನವನ್ನು ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿ ಅರ್ಸಲನ್ ಪರಿಶೀಲಿಸಿದರು.
ಜಪ್ತಿ ಮಾಡಿದ ರಕ್ತಚಂದನವನ್ನು ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿ ಅರ್ಸಲನ್ ಪರಿಶೀಲಿಸಿದರು.   

ಚಿಕ್ಕಬಳ್ಳಾಪುರ: ನೆರೆಯ ಆಂಧ್ರಪ್ರದೇಶದಿಂದ ಬುಧವಾರ ಬೆಳಿಗ್ಗೆ ಸ್ಕಾರ್ಪಿಯೋ ವಾಹನದಲ್ಲಿ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು ₹2.50 ಲಕ್ಷ ಮೌಲ್ಯದ 500 ಕೆ.ಜಿ ರಕ್ತಚಂದನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

ಹೆದ್ದಾರಿ 7ರಲ್ಲಿ ಬಾಗೇಪಲ್ಲಿಯಿಂದ ಬೆಂಗಳೂರಿನ ಕಡೆಗೆ ಅಕ್ರಮವಾಗಿ ರಕ್ತಚಂದನದ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ ವಿಕ್ರಮ್ ನೇತೃತ್ವದ ತಂಡ ನಗರದ ಹೊರವಲಯದ ಚದುಲಪುರ ಕ್ರಾಸ್‌ ಬಳಿ ಬೆಳಿಗ್ಗೆ 8.30ರ ಸುಮಾರಿಗೆ ಕಾರ್ಯಚರಣೆಗೆ ಸಿದ್ಧತೆ ಮಾಡಿಕೊಂಡಿತ್ತು. ದೂರದಿಂದಲೇ ಅರಣ್ಯ ಇಲಾಖೆ ಸಿಬ್ಬಂದಿ ಕಂಡ ಇಬ್ಬರು ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ.

ತಮಿಳುನಾಡಿಗೆ ಸೇರಿದ ಸ್ಕಾರ್ಪಿಯೋ ವಾಹನಕ್ಕೆ ಆರೋಪಿಗಳು ಕರ್ನಾಟಕ ನೋಂದಣಿ ಸಂಖ್ಯೆ ಉಳ್ಳ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಕಳ್ಳ ಸಾಗಾಟ ನಡೆಸಿದ್ದರು ಎಂಬ ಸಂಗತಿ ಅರಣ್ಯ ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.