
ಬಾಗೇಪಲ್ಲಿ: ವಾಸ ಮಾಡಲು ಸ್ವಂತ ಸೂರು ಇಲ್ಲದ ನಿವೇಶನ ರಹಿತರು ಇದೀಗ ಅತಂತ್ರರಾಗಿ ಬಾಡಿಗೆ ಹಣ ಕಟ್ಟಲು, ಕುಟುಂಬ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ.
ದಶಕ ಕಳೆದರೂ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ನಿವೇಶನ ರಹಿತರಿಗೆ ನಿವೇಶನ ಸಿಕ್ಕಿಲ್ಲ.
ಪಟ್ಟಣದಲ್ಲಿ 25 ಸಾವಿರ ಜನಸಂಖ್ಯೆ ಇದೆ. ನ್ಯಾಷನಲ್ ಕಾಲೇಜಿನಿಂದ ಸಿವಿಲ್ ನ್ಯಾಯಾಲಯದವರೆಗೆ, ರಾಮಸ್ವಾಮಿಯಿಂದ ಕೊತ್ತಪಲ್ಲಿಯವರಿಗೆ ವ್ಯಾಪಿಸಿದೆ. ಪಟ್ಟಣದಲ್ಲಿ 23 ವಾರ್ಡ್ಗಳು ಇವೆ. ಪಟ್ಟಣದ ಹೊರವಲಯದಲ್ಲಿ ಜಿ.ವಿ.ಶ್ರೀರಾಮರೆಡ್ಡಿ, ಎನ್.ಸಂಪಂಗಿ ಮತ್ತು ಪಟ್ಟಣದ 1ನೇ ವಾರ್ಡ್ ಶಿರಿಡಿಸಾಯಿಬಾಬಾ ಮಂದಿರದ ಪಕ್ಕದಲ್ಲಿ ಬಡಾವಣೆ ಮಾಡಲಾಗಿದೆ. ಅರ್ಹ ನಿವೇಶನರಹಿತರಿಗೆ ನಿವೇಶನ, ಮನೆ ಹಂಚಿಕೆ ಆಗಿವೆ.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಾಲ್ಲೂಕಿನ ರೆಡ್ಡಿಕೆರೆಯ ಹೊರವಲಯದ 102 ಸರ್ವೆ ನಂಬರಿನಲ್ಲಿ 4 ಎಕರೆ 30 ಕುಂಟೆ, ಸರ್ವೆ 667 ರಲ್ಲಿ 3 ಎಕರೆ 32 ಕುಂಟೆ ಜಾಗವನ್ನು ನಿವೇಶನರಹಿತರಿಗೆ ನಿವೇಶನ ಹಂಚಿಕೆ ಮಾಡಲು ಅಣಿಯಾಗಿದ್ದಾರೆ. ಜಮೀನನ್ನು ಸಮತಟ್ಟು ಮಾಡಿ, ನಿವೇಶನ ಸಂಖ್ಯೆಗಳನ್ನು ಗುರುತಿಸಲಾಗಿದೆ. ಅಧಿಕಾರಿಗಳ ಮೂಲಕ ಸರ್ವೆ ಮಾಡಿ, ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಇದಲ್ಲದೆ ಚಿನ್ನೇಪಲ್ಲಿ ಗ್ರಾಮದ ಬಳಿ 20 ಎಕರೆ ಗುರುತಿಸಿ ಸರ್ಕಾರದಿಂದ ಅನುಮೋದನೆ ಮಾಡಿಸಿದ್ದಾರೆ.
ನಿವೇಶನ, ಮನೆ ಹಂಚಿಕೆ ಮಾಡುವಂತೆ ಪುರಸಭೆ ಕಚೇರಿಗೆ ಅಲೆದಾಡುತ್ತಿದ್ದೇವೆ. ನಿವೇಶನ, ಮನೆ ಹಂಚಿಕೆ ಯಾವಾಗ ಮಾಡುತ್ತಾರೆ ಎಂದರೆ ಅಧಿಕಾರಿಗಳು ಸಮರ್ಪಕವಾದ ಉತ್ತರ ನೀಡಿಲ್ಲ. ನಿವೇಶನ, ಮನೆ ಹಂಚಿಗೆ ಅನೇಕ ಬಾರಿ ಅರ್ಜಿ ಸಲ್ಲಿಸಿದ್ದೇವೆ. ಆದರೆ ನಿವೇಶನ, ಮನೆ ಹಂಚಿಕೆ ಮಾಡಿಲ್ಲ ಎಂದು ಪಟ್ಟಣದ ನಿವಾಸಿ ಅನಿತಾ ಅಳಲು ಹಂಚಿಕೊಂಡರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಸತಿರಹಿತರಿಗೆ ಸರ್ಕಾರಿ ಭೂಮಿ, ಖರಾಬು, ಗೋಮಾಳ ಸೇರಿದಂತೆ ಭೂಮಿಯಲ್ಲಿ ನಿವೇಶನ ಕಲ್ಪಿಸುವ ಯೋಜನೆ ಜಾರಿಗೊಳಿಸಿದೆ. ನಿವೇಶನ ರಹಿತರು ಪುರಸಭೆ ಮತ್ತು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳ ನಿವೇಶನ ರಹಿತರು ನಿವೇಶನ ಕಲ್ಪಿಸುವಂತೆ ಅರ್ಜಿ ಸಲ್ಲಿಸಿದರೂ, ಇದುವರೆಗೂ ಅರ್ಹ ಫಲಾನುಭವಿಗಳಿಗೆ ಸೂರು ಸಿಗದೇ ಪರದಾಡುತ್ತಿದ್ದಾರೆ.
ಸ್ವಂತ ನಿವೇಶನದಲ್ಲಿ ಮನೆ ನಿರ್ಮಿಸಿ ವಾಸ ಮಾಡಬೇಕು ಎಂದು ಸಾವಿರಾರು ಮಂದಿ ನಿವೇಶನ, ಮನೆರಹಿತರು ಕಾಯುತ್ತಿದ್ದಾರೆ. ಸ್ವಂತ ಸೂರಿಗಾಗಿ ಪುರಸಭೆ, ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಅರ್ಜಿ ಸಲ್ಲಿಸಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಆದರೆ ಅರ್ಹ ಫಲಾನುಭವಿಗಳಿಗೆ ನಿವೇಶನ ಭಾಗ್ಯ ದೊರೆಯದೇ ಅನಿವಾರ್ಯವಾಗಿ ಬಾಡಿಗೆ ಮನೆಗಳಲ್ಲಿ ವಾಸ ಮಾಡುವ ಸ್ಥಿತಿ ಇದೆ.
ಮಕ್ಕಳ ವಿದ್ಯಾಭ್ಯಾಸಕ್ಕೆ, ಸಣ್ಣಪುಟ್ಟ ವ್ಯಾಪಾರಕ್ಕೆ ಆಂಧ್ರಪ್ರದೇಶದ ಗಡಿಗೆ ಹೊಂದಿದ ಪಟ್ಟಣಕ್ಕೆ ವಿವಿಧ ಕಡೆಗಳಿಂದ ಜನರು ಬರುತ್ತಾರೆ. 40 ವರ್ಷಗಳ ಹಿಂದೆ ವ್ಯಾಪಾರ ಮಾಡಿದವರು, ಹಮಾಲಿಯವರು, ತಿಂಡಿತಿನಿಸುಗಳ ವ್ಯಾಪಾರಸ್ಥರು ಪಟ್ಟಣಕ್ಕೆ ವಲಸೆ ಬಂದಿದ್ದಾರೆ. ಸಣ್ಣಪುಟ್ಟ ವ್ಯಾಪಾರ, ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕುಟುಂಬಗಳ ನಿರ್ವಹಣೆ, ಮಕ್ಕಳ ಓದು, ಚಿಕಿತ್ಸೆ ಸೇರಿದಂತೆ ಬಾಡಿಗೆ ಮನೆಗಳಿಗೆ ಸಾವಿರಾರು ರೂಪಾಯಿ ನೀಡಿ ಇಂದಿಗೂ ನಿವೇಶನ, ಮನೆ ಇಲ್ಲದೆ ಪರಿತಪಿಸುತ್ತಿದ್ದಾರೆ.
ಗ್ರಾಮದಿಂದ ವಲಸೆ ಬಂದು ಪಟ್ಟಣದಲ್ಲಿ ಕೂಲಿಕೆಲಸ ಮಾಡುತ್ತಿದ್ದೇವೆ. ನಿವೇಶನಕ್ಕೆ ಅರ್ಜಿ ಸಲ್ಲಿಸಿ ವರ್ಷ ಕಳೆದಿವೆ. ಅಧಿಕಾರಿಗಳು ಬಂದು ಸರ್ವೆ ಮಾಡಿದ್ದಾರೆ. ನಮ್ಮಂತಹ ಅರ್ಹವಾದ ಕೂಲಿಕಾರ್ಮಿಕರಿಗೆ ಅಧಿಕಾರಿ, ಜನಪ್ರತಿನಿಧಿಗಳು ಮನೆ ವಿತರಣೆ ಮಾಡಬೇಕು ಎಂದು ಪಟ್ಟಣದ ನಿವಾಸಿ ವೆಂಕಟೇಶ್ ಮನವಿ ಮಾಡಿದರು.
2012ರಲ್ಲಿ ಜಿ.ವಿ.ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಪಟ್ಟಣದ ನಿವೇಶನರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಪುರಸಭೆಗೆ ಅರ್ಜಿ ಸಲ್ಲಿಸಿ ವರ್ಷ ಕಳೆದಿದೆ. ಈವರೆಗೂ ನಿವೇಶನ ಹಂಚಿಕೆ ಮಾಡಿಲ್ಲ ಎಂದು ಪುರಸಭಾ ಮಾಜಿ ಸದಸ್ಯ ಜಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ನಿವೇಶನ, ಮನೆರಹಿತ ಅರ್ಹ ಫಲಾನುಭವಿಗಳ ಪಟ್ಟಿ, ನಿವೇಶನಗಳ ಹಂಚಿಕೆ ಸಂಖ್ಯೆಗಳನ್ನು ಗುರುತಿಸಲಾಗಿದೆ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನಿವೇಶನ, ಮನೆ ಹಂಚಿಕೆ ಮಾಡಲಿದ್ದಾರೆ ಎಂದು ಪುರಸಭೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಸಣ್ಣ ಕೊಠಡಿಯಲ್ಲಿ ವಾಸ
ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದೇವೆ. ಸ್ವಂತ ಸೂರು ಇಲ್ಲ. ಬಾಡಿಗೆ ಮನೆಯ ಸಣ್ಣ ಕೊಠಡಿಯಲ್ಲಿ ವಾಸ. ಮಕ್ಕಳು ಮೊಮ್ಮಕ್ಕಳು ಮನೆಗೆ ಬಂದರೆ ಕೂರಲು ಮಲಗಲು ಜಾಗ ಇಲ್ಲ. ಅವರು ನಮ್ಮ ಮನೆಗೆ ಬರಲು ಹಿಂಜರಿಯುತ್ತಾರೆ. ಸರ್ಕಾರ ನಿವೇಶನ ಹಂಚಿಕೆ ಮಾಡಬೇಕು ಎಂದು ಪಟ್ಟಣದ ನಿವಾಸಿ ದಿಲ್ಶಾದ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.