ADVERTISEMENT

ಮೊಬೈಲ್‌ ಆನ್‌ ಆಗಿ ಸ್ಫೋಟ!: ಸಚಿವ ಸುಧಾಕರ್‌

ಸ್ಫೋಟಕ ನಾಶಪಡಿಸಲು ಹೋದಾಗ ಅನಾಹುತ: ಸಚಿವ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 4:04 IST
Last Updated 24 ಫೆಬ್ರುವರಿ 2021, 4:04 IST
ಸ್ಫೋಟದಲ್ಲಿ ಮೃತಪಟ್ಟ ಹಿರೇನಾಗವೇಲಿ ನಿವಾಸಿ ರಾಮು ಅವರ ಪತ್ನಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸುಧಾಕರ್ ಸಾಂತ್ವನ ಹೇಳಿದರು
ಸ್ಫೋಟದಲ್ಲಿ ಮೃತಪಟ್ಟ ಹಿರೇನಾಗವೇಲಿ ನಿವಾಸಿ ರಾಮು ಅವರ ಪತ್ನಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸುಧಾಕರ್ ಸಾಂತ್ವನ ಹೇಳಿದರು   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಹಿರೇನಾಗವೇಲಿ ಜಿಲೆಟಿನ್ ಸ್ಫೋಟ ಪ್ರಕರಣ ಸಂಬಂಧ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದು, ತಪ್ಪಿತಸ್ಥರು ಯಾರೇ ಆಗಿದ್ದರೂ ಕಠಿಣ ಶಿಕ್ಷೆಯಾಗಲಿದೆ ಎಂದು ಹೇಳಿದ್ದಾರೆ.

‘ಈ ಕ್ವಾರಿಯನ್ನು ಫೆ.7ರಂದು ಮುಚ್ಚಿಸಲಾಗಿತ್ತು. ಅಂದಿನಿಂದ ಕ್ವಾರಿ ಚಾಲನೆಯಲ್ಲಿರಲಿಲ್ಲ. ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಆದರೆ 'ಭ್ರಮರವರ್ಷಿಣಿ' ಕ್ವಾರಿ ಮಾಲೀಕರು ಜಿಲೆಟಿನ್‌ಗಳನ್ನು ಎಲ್ಲಿಯೋ ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆ. ಪೊಲೀಸ್ ಇಲಾಖೆ ಎರಡು ದಿನಗಳಿಂದ ಕ್ವಾರಿ ಬಳಿ ಪರಿಶೀಲನೆ ನಡೆಸಿದ್ದು, ಬಹುಶಃ ಇದಕ್ಕೆ ಹೆದರಿ ಅಕ್ರಮವಾಗಿ ಸಂಗ್ರಹಿಸಿದ್ದ ಜಿಲೆಟಿನ್ ಅನ್ನು ಗುಡಿಬಂಡೆ ತಾಲ್ಲೂಕಿನ ಕಾಡು ಪ್ರದೇಶದಲ್ಲಿ ಬಿಸಾಡಲು ಟಾಟಾ ಏಸ್ ಹಾಗೂ ಬೈಕ್ ಮೂಲಕ ಒಟ್ಟು 7 ಜನ ಬಂದಿದ್ದರು’ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

‘ಬಾಂಬ್ ಸ್ಕ್ವಾಡ್ ಮಾಹಿತಿಯಂತೆ ಸ್ಫೋಟಕಗಳನ್ನು ಕಾಡು ಪ್ರದೇಶದಲ್ಲಿ ಬಿಸಾಡಲು ಬಂದಿದ್ದ ವೇಳೆ ಮೊಬೈಲ್‌ ಫೋನ್‌ ಆನ್ ಆಗಿ ಸ್ಫೋಟ ಸಂಭವಿಸಿರಬಹುದು ಅಥವಾ ಸಿಗರೇಟ್ ಸೇದುವ ವೇಳೆ ಸ್ಫೋಟಗೊಂಡಿದೆ ಎಂದು ಬಾಂಬ್ ಸ್ವ್ಕಾಡ್ ಪ್ರಾಥಮಿಕ ವರದಿ ನೀಡಿದ್ದಾರೆ. ಈ ಸ್ಫೋಟದಲ್ಲಿ ಒಟ್ಟು 6 ಜನ ಸಾವನ್ನಪ್ಪಿದ್ದಾರೆ’ ಎಂದು ಸಚಿವರು ಮಾಹಿತಿ ನೀಡಿದರು.

ADVERTISEMENT

‘ಯಾರು ಅಕ್ರಮವಾಗಿ ಸ್ಫೋಟಕಗಳನ್ನು ಸರಬರಾಜು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಆದರೆ ಜೀವ ಉಳಿಸಲು ಸಾಧ್ಯವಾಗುವುದಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಕ್ವಾರಿ ಸ್ಫೋಟ ಪ್ರಕರಣದ ನಂತರ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತು. ಅದರ ಭಾಗವಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಮಾಡಲಾಗಿತ್ತು. ಇದಕ್ಕೆ ಹೆದರಿ ಈ ರೀತಿ ಸ್ಫೋಟಗಳನ್ನು ಸಾಗಿಸಲು ಹೋಗಿ ಈ ದುರಂತ ನಡೆದಿದೆ. ಮಾಲೀಕರೇ ಈ ಪ್ರಕರಣದ ಮೊದಲ ಆರೋಪಿಗಳು, ಅವರ ಮೂಲಕವೇ ಸ್ಫೋಟಕಗಳು ಬಂದಿರುತ್ತವೆ. ಇಂದು ಬಲಿಯಾದವರು ನತದೃಷ್ಟರು’ ಎಂದು ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.