ADVERTISEMENT

ಚಿಕ್ಕಬಳ್ಳಾಪುರ | ಅಪಘಾತ ಪ್ರಕರಣಗಳು: 5 ವರ್ಷದಲ್ಲಿ ಒಂದೂವರೆ ಸಾವಿರ ಬಲಿ

ಡಿ.ಎಂ.ಕುರ್ಕೆ ಪ್ರಶಾಂತ
Published 17 ಡಿಸೆಂಬರ್ 2025, 5:19 IST
Last Updated 17 ಡಿಸೆಂಬರ್ 2025, 5:19 IST
ಕುಶಾಲ್ ಚೌಕ್ಸೆ
ಕುಶಾಲ್ ಚೌಕ್ಸೆ   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ನಿತ್ಯವೂ ಒಂದಲ್ಲಾ ಒಂದು ಕಡೆಯಲ್ಲಿ ರಸ್ತೆ ಅಪಘಾತದಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೆಲವರು ಶಾಶ್ವತವಾಗಿ ಕೈ, ಕಾಲು ಕಳೆದುಕೊಂಡರೆ ಮತ್ತಷ್ಟು ಮಂದಿ ಗಾಯಾಳುಗಳಾಗುತ್ತಿದ್ದಾರೆ. 

2021ರಿಂದ 2025ರ ಇಲ್ಲಿಯವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಅಪಘಾತಗಳಿಂದ 1,577 ಜನರು ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ ಒಟ್ಟು 4,049 ರಸ್ತೆ ಅಪಘಾತ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಪಘಾತ ಪ್ರಕರಣಗಳ ಅಂಕಿ ಅಂಶಗಳು ಅಪಘಾತಗಳ ಭೀಕರತೆ ಸಾರುತ್ತಿವೆ. ಇವು ರಸ್ತೆಗಳಲ್ಲ, ಸಾವಿನ ದಾರಿಗಳು ಎನಿಸಿವೆ.

2023ರಲ್ಲಿ ರಸ್ತೆ ಅಪಘಾತದಿಂದ 1,113, 2024ರಲ್ಲಿ 758 ಮತ್ತು 2025ರಲ್ಲಿ 900 ಜನರು ಗಾಯಗೊಂಡಿದ್ದಾರೆ.  

ADVERTISEMENT

ನಿರ್ಲಕ್ಷ್ಯದ‌ ಚಾಲನೆ, ಚಾಲನೆ ಕೌಶಲ ಇಲ್ಲದಿದ್ದರೂ ಚಾಲನೆ ಮಾಡಿದ್ದರಿಂದ, ರಸ್ತೆ ಸರಿ ಇಲ್ಲದಿದ್ದರಿಂದ, ರಸ್ತೆ, ಹೆದ್ದಾರಿಗಳಲ್ಲಿ ಸೂಕ್ತ ಸರ್ವಿಸ್ ರಸ್ತೆಗಳು, ಸೂಚನಾ ಫಲಕಗಳು ಇಲ್ಲದಿರುವುದು, ಸಾರಿಗೆ ನಿಯಮಗಳ ಉಲ್ಲಂಘನೆಯ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ..ಹೀಗೆ ನಾನಾ ಕಾರಣಗಳಿಂದ ಅಪಘಾತಗಳು ಸಂಭವಿಸುತ್ತಿವೆ. 

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ಕೂಗಳತೆಯ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 44ರ ಅಕ್ಕಪಕ್ಕ ಸಮರ್ಪಕವಾಗಿ ಇಂದಿಗೂ ಸರ್ವಿಸ್ ರಸ್ತೆಗಳು ಇಲ್ಲ. ಹೆದ್ದಾರಿ ಅಕ್ಕಪಕ್ಕದ ಗ್ರಾಮಸ್ಥರು, ವಾಹನ ಸವಾರರು ಜೀವಭಯದಲ್ಲಿ ಹೆದ್ದಾರಿ ದಾಟಬೇಕಿದೆ. ಹೆದ್ದಾರಿಗಳಲ್ಲಿ ಮಾರ್ಗಸೂಚಿ ಫಲಕಗಳು, ಅಪಘಾತ ವಲಯಗಳ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ನೀಡುವ ಜಾಗೃತಿ ಫಲಕಗಳು ಸಹ ಇಲ್ಲ.

ರಾಷ್ಟ್ರೀಯ ಹೆದ್ದಾರಿ 44, ಶಿರಾ, ಮುಳಬಾಗಿಲು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ  264ರಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇವುಗಳ ಜೊತೆಗೆ ನಾಲ್ಕೈದು ರಾಜ್ಯ ಹೆದ್ದಾರಿಗಳನ್ನು ಹೊಂದಿದೆ.

ಕನಸಾಗಿಯೆ ಉಳಿದ ಟ್ರಕ್ ಟರ್ಮಿನಲ್: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಿನ ಬೆಳೆಗಾದರೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ವಾಹನ ಸವಾರರಿಂದ ಕೂಡ ಸರ್ಕಾರಗಳ ಬೊಕ್ಕಸಕ್ಕೆ ವಾರ್ಷಿಕ ಕೊಟ್ಯಾಂತರ ಟೋಲ್ ವಸೂಲಿ ಆಗುತ್ತದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಇನ್ನೂ ಟ್ರಕ್ ಟರ್ಮಿನಲ್ ನಿರ್ಮಾಣದ ಕನಸು ಈಡೇರಿಲ್ಲ.

ಬೆಂಗಳೂರು-ಹೈದ್ರಾಬಾದ್ ನಡುವೆ ಗೂಡ್ಸ್‌ ವಾಹನಗಳು, ಸಿಮೆಂಟ್ ಬಲ್ಕರ್‌ಗಳು ಅತ್ಯಧಿಕವಾಗಿ ಸಂಚರಿಸುತ್ತವೆ. ಆದರೆ ಚಾಲಕರಿಗೆ ರಾತ್ರಿ ವೇಳೆ ವಿಶ್ರಾಂತಿ ಪಡೆಯಲು ಟ್ರಕ್ ಟರ್ಮಿನಲ್ ನಿರ್ಮಾಣವಿಲ್ಲ. ವಾಹನ ಚಾಲಕರು ಹೆದ್ದಾರಿ ಬದಿಗಳಲ್ಲಿ ಸಿಕ್ಕ ಸಿಕ್ಕ ಕಡೆ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಹೆದ್ದಾರಿಗಳಲ್ಲಿ ಅಕಸ್ಮಿಕವಾಗಿ ರಸ್ತೆ ಅಪಘಾತಗಳು ಸಂಭವಿಸಿ ಅಮಾಯಕರು ಅಸುನೀಗಬೇಕಿದೆ.  

ಚಿಕ್ಕಬಳ್ಳಾಪುರ ಮಾತ್ರವಲ್ಲದೇ ಕನಿಷ್ಠ ತಾಲೂಕು ಕೇಂದ್ರಗಳಲ್ಲಿ ಕೂಡ ಲಾರಿ ಮತ್ತಿತರ ಟ್ರಕ್‌ಗಳ ನಿರ್ಮಾಣಕ್ಕೆ ಟರ್ಮಿನಲ್ ತಲೆ ಎತ್ತಿಲ್ಲ. ದಶಕಗಳ ಹಿಂದೆಯೆ ಚಿಂತಾಮಣಿ ನಗರದ ರಾಮಕುಂಟೆ ಬಳಿ ಟ್ರಕ್ ಟರ್ಮಿನಲ್ ನಿರ್ಮಾಣ ಜಾಗ ಗುರುತಿಸಿದ್ದರೂ ಫಲ ಸಿಗಲಿಲ್ಲ. ಟ್ರರ್ಮಿನಲ್ ನಿರ್ಮಾಣಕ್ಕೆ ಗುರುತಿಸಿದ್ದ ಜಾಗ ಖಾಲಿ ಬಿದ್ದಿದೆ.  

ಚಿಕ್ಕಬಳ್ಳಾಪುರ ಕೃಷಿ ಪ್ರಧಾನ ಜಿಲ್ಲೆ. ಬೆಂಗಳೂರಿಗೆ ಸಮೀಪದಲ್ಲಿ ಇದೆ. ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟ, ಈಶಾ ಯೋಗ ಕೇಂದ್ರಕ್ಕೆ ವಾಹನಗಳಲ್ಲಿ ಬರುವವರ ಸಂಖ್ಯೆಯೇ ಅಧಿಕ. ವಾರಾಂತ್ಯದ ದಿನಗಳಲ್ಲಿ ರಸ್ತೆಗಳಲ್ಲಿ ಸಂಚಾರ ದಟ್ಟಣೆಯೂ ಹೆಚ್ಚಿರುತ್ತವೆ. ಈ ಪರಿಣಾಮ ಕೂಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ ಎನ್ನಬಹುದು.

ರಸ್ತೆ ಅಪಘಾತಗಳಲ್ಲಿ ಜಿಲ್ಲೆಯಲ್ಲಿ ಚಿಂತಾಮಣಿ ಮೊದಲು ಸ್ಥಾನದಲ್ಲಿ ಇದೆ. ಚಿಂತಾಮಣಿ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ವಾಹನಗಳ ಅಪಘಾತ ಸಂಭವಿಸುತ್ತದೆ ‌ಎಂದು ಜಿಲ್ಲೆಯ ಪೊಲೀಸ್ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.  

ಅಪಘಾತ ಸ್ಥಳಗಳ ಗುರುತು

ಜಿಲ್ಲೆಯಲ್ಲಿ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪೊಲೀಸ್ ಇಲಾಖೆ 29 ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿದೆ. ಈ ಪೈಕಿ 16 ಸ್ಥಳಗಳನ್ನು ಸಹ ಸರಿಪಡಿಸಲಾಗಿದೆ. ರಾಜ್ಯ ಹೆದ್ದಾರಿಗಳಲ್ಲಿ 11 ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ.  

ರಾಷ್ಟ್ರೀಯ ಹೆದ್ದಾರಿಯಷ್ಟೇ ಅಲ್ಲ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳಲ್ಲಿಯೂ ಅಪಘಾತಗಳು ನಡೆಯುತ್ತಿರುವುದು ಪೊಲೀಸರನ್ನು ನಿದ್ದೆಗೆಡಿಸಿದೆ. ಈ ಕಾರಣದಿಂದ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಹೊಸದಾಗಿ 253 ಅಪಘಾತ ಸ್ಥಳಗಳನ್ನು ಗುರುತಿಸಿದೆ.  

‘ನಿಯಮ ಪಾಲನೆ; ಅಪಘಾತ ತಡೆ’

ನಾಗರಿಕರು ಸಹ ರಸ್ತೆ ನಿಯಮಗಳನ್ನು ಪಾಲಿಸಬೇಕು. ತಿರುವುಗಳಲ್ಲಿ ಅತಿಯಾದ ವೇಗದ ಚಾಲನೆ ಒಳ್ಳೆಯದಲ್ಲ. ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿದರೆ ದೊಡ್ಡ ಪ್ರಮಾಣದಲ್ಲಿಯೇ ಅಪಘಾತಗಳನ್ನು ತಡೆಯಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.