ADVERTISEMENT

ಚಿಕ್ಕಬಳ್ಳಾಪುರ: ಶಾಲಾ ಮುಗಿದ ಬಳಿಕ ವಿದ್ಯಾರ್ಥಿಗಳ ಮನೆಗೆ ಶಿಕ್ಷಕರ ಭೇಟಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ತಯಾರಿ ಮೇಲೆ ನಿಗಾ

ಪಿ.ಎಸ್.ರಾಜೇಶ್
Published 20 ನವೆಂಬರ್ 2025, 2:18 IST
Last Updated 20 ನವೆಂಬರ್ 2025, 2:18 IST
ಬಾಗೇಪಲ್ಲಿ ತಾಲ್ಲೂಕಿನ ಪುಟ್ಟಪರ್ತಿ ಗ್ರಾಮದ ವಿದ್ಯಾರ್ಥಿಗಳ ಮನೆಗೆ ತೆರಳಿ ಮಕ್ಕಳ ಕಲಿಕೆ ಬಗ್ಗೆ ಪೋಷಕರ ಜತೆ ಚರ್ಚಿಸುತ್ತಿರುವ ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸಿಬ್ಬಂದಿ
ಬಾಗೇಪಲ್ಲಿ ತಾಲ್ಲೂಕಿನ ಪುಟ್ಟಪರ್ತಿ ಗ್ರಾಮದ ವಿದ್ಯಾರ್ಥಿಗಳ ಮನೆಗೆ ತೆರಳಿ ಮಕ್ಕಳ ಕಲಿಕೆ ಬಗ್ಗೆ ಪೋಷಕರ ಜತೆ ಚರ್ಚಿಸುತ್ತಿರುವ ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸಿಬ್ಬಂದಿ   

ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ಎಸ್‍ಎಸ್‍ಎಲ್ ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗೆ ಮಾರ್ಗದರ್ಶನ ನೀಡಲು ತಾಲ್ಲೂಕಿನ ಘಂಟಂವಾರಿಪಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಪ್ರತಿ ದಿನ ಸಂಜೆ ಮಕ್ಕಳ ಮನೆಗೆ ಭೇಟಿ ನೀಡಿ ಸಮಾಲೋಚನೆ ಮಾಡುತ್ತಿದ್ದಾರೆ.

ಘಂಟಂವಾರಿಪಲ್ಲಿ ಶಾಲೆಯಲ್ಲಿ ಕಾಶಾಪುರ, ಕೊಂಡರೆಡ್ಡಿಪಲ್ಲಿ, ಅಬಕವಾರಿಪಲ್ಲಿ, ಆದಿಗಾನಹಳ್ಳಿ ಹಾಗೂ ಹೊಸಹುಡ್ಯ ಗ್ರಾಮಗಳ 50 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿಯಲ್ಲಿದ್ದಾರೆ. ಇವರಲ್ಲಿ ಹೆಚ್ಚಿನ ಮಕ್ಕಳು ಕೃಷಿ, ಕೂಲಿಕಾರ್ಮಿಕರ ಹಾಗೂ ಮಧ್ಯಮ ವರ್ಗದ ಕುಟುಂಬದಿಂದ ಬಂದವರು.

ಪರೀಕ್ಷೆ ತಯಾರಿಗೆ ಶಾಲೆಯಲ್ಲಿ ಬೆಳಗ್ಗೆ, ಸಂಜೆ ಹೆಚ್ಚುವರಿ ತರಗತಿ ಮಾಡುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಗುಂಪುಚರ್ಚೆ ನಡೆಯುತ್ತದೆ.

ADVERTISEMENT

ಮುಖ್ಯಶಿಕ್ಷಕಿ ಜಿ.ರಾಮಸುಬ್ಬಮ್ಮ ತಮ್ಮ ಶಿಕ್ಷಕ ಸಿಬ್ಬಂದಿಯೊಂದಿಗೆ ಸಂಜೆ ಸಂಜೆ 7ಕ್ಕೆವಿದ್ಯಾರ್ಥಿಗಳ ಮನೆಗೆ ತೆರಳುತ್ತಾರೆ. ರಾತ್ರಿ 9.30ರವರೆಗೆ ಮಕ್ಕಳ ಕಲಿಕೆಯ ಬಗ್ಗೆ ಪೋಷಕರೊಂದಿಗೆ ಸಮಾಲೋಚನೆ ನಡೆಸುತ್ತಾರೆ. ಶಿಕ್ಷಕರ ಈ ಕೆಲಸಕ್ಕೆ ಪೋಷಕರಿಂದಲೂ ಸಹಕಾರ ದೊರೆಯುತ್ತಿದೆ. 

ಶಾಲಾ ಮುಖ್ಯಶಿಕ್ಷಕಿ ಜಿ.ರಾಮಸುಬ್ಬಮ್ಮ, ಶಿಕ್ಷಕರಾದ ಜಿ.ವಿ.ಚಂದ್ರಶೇಖರ್, ಕೆ.ಬಿ.ಆಂಜನೇಯರೆಡ್ಡಿ, ನಾರಾಯಣಸ್ವಾಮಿ, ಸಂಧ್ಯಾ ಮುಂತಾದವರು ಪ್ರತಿ ವಿದ್ಯಾರ್ಥಿ ಓದಿನ ಮೇಲೆ ನಿಗಾ ಇಟ್ಟಿದ್ದಾರೆ. 

ಪರೀಕ್ಷೆ ಮುಗಿಯುವವರೆಗೂ ಮಕ್ಕಳನ್ನು ಟಿ.ವಿ.,ಧಾರಾವಾಹಿ, ಮೊಬೈಲ್, ಸಿನಿಮಾಗಳಿಂದ ದೂರ ಇರಿಸಬೇಕು. ಪರೀಕ್ಷೆಗಳು ಹತ್ತಿರ ಬರುವುದರಿಂದ ಕೆಲಸ ನೀಡದೆ ಓದಿಸಬೇಕು. ಮಕ್ಕಳು ಏಕಾಗ್ರತೆಯಿಂದ ಓದುವ ಪರಿಸರವನ್ನು ಮನೆಯಲ್ಲಿ ನಿರ್ಮಿಸಬೇಕು ಎಂದು ಪೋಷಕರಿಗೆ ಮನವರಿಕೆ ಮಾಡುತ್ತಿದ್ದೇವೆ ಎಂದು ಮುಖ್ಯಶಿಕ್ಷಕಿ ಜಿ.ರಾಮಸುಬ್ಬಮ್ಮ ತಿಳಿಸಿದರು.

ಕಳೆದ ಶೈಕ್ಷಣಿಕ ವರ್ಷದ ಮೂರು ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳಲ್ಲಿ ಬಾಗೇಪಲ್ಲಿ ತಾಲ್ಲೂಕು ಪ್ರಥಮ ಸ್ಥಾನ ಪಡೆದಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬಾಗೇಪಲ್ಲಿ, ಚೇಳೂರು ತಾಲ್ಲೂಕುಗಳ ಎಲ್ಲಾ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಜತೆ ಪರೀಕ್ಷಾ ಫಲಿತಾಂಶದ ಬಗ್ಗೆ ಸಭೆ ಮಾಡಿ ಚರ್ಚಿಸಲಾಗಿದೆ. ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಮಕ್ಕಳ ಪರೀಕ್ಷಾ ತಯಾರಿ ಬಗ್ಗೆ ಗಮನ ಹರಿಸಿರುವುದು ಶ್ಲಾಘನೀಯ ಎಂದು ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಶಾಲೆಯಲ್ಲಿ ಮಕ್ಕಳಿಗೆ ಕಲಿಸುವ ಜತೆ ಶಿಕ್ಷಕರು ಮನೆಗೆ ಭೇಟಿ ನೀಡಿ ಪೋಷಕರ ಜತೆ ಚರ್ಚೆ ಮಾಡಿ ಮಕ್ಕಳ ಕಲಿಕೆಗೆ ವಿಶೇಷ ಗಮನ ಹರಿಸಿರುವುದು ಶ್ಲಾಘನೀಯ.
– ಆದಿನಾರಾಯಣಪ್ಪ ಪುಟ್ಟಪರ್ತಿ, ಪೋಷಕ

ಶೇ 100 ಫಲಿತಾಂಶ ಗುರಿ

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುನ್ನ ಮೊದಲ ಹಂತದಲ್ಲಿ ವಿಶೇಷ ತರಗತಿ ಮಾಡಲಾಗಿದೆ. ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಲಾಗಿದೆ. ಈ ಬಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಫಲಿತಾಂಶ ಶೇ 100ರಷ್ಟು ಸಾಧಿಸುವ ಗುರಿ ಇದೆ ಎಂದು ಶಾಲಾ ಮುಖ್ಯಶಿಕ್ಷಕಿ ಜಿ.ರಾಮಸುಬ್ಬಮ್ಮ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.