ADVERTISEMENT

ಚಿಮುಲ್ ಚುನಾವಣೆ: ಇಂದಿನಿಂದ ಉಮೇದುವಾರಿಕೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 6:06 IST
Last Updated 19 ಜನವರಿ 2026, 6:06 IST
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಜಿಲ್ಲಾ ಒಕ್ಕೂಟದ ಆಡಳಿತ ಮಂಡಳಿಗೆ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಚುನಾವಣೆಗೆ ತೀವ್ರ ಪೈಪೋಟಿಯು ಏರ್ಪಟ್ಟಿದ್ದು, ಅಭ್ಯರ್ಥಿಗಳ ಆಯ್ಕೆಯಲ್ಲಿ ಎಲ್ಲ ಪಕ್ಷಗಳಿಂದ ಕಸರತ್ತು ನಡೆಯುತ್ತಿದೆ.

ಈಗಾಗಲೇ ಪ್ರಕ್ರಿಯೆ ನಿರ್ವಹಣೆಯ ವೇಳಾಪಟ್ಟಿ ಹಾಗೂ ಮತದಾರ ಪಟ್ಟಿಯು ಪ್ರಕಟಗೊಂಡಿದ್ದು ಜ.19 ರಿಂದ ಉಮೇದುವಾರಿಕೆ ಸಲ್ಲಿಕೆ ಪ್ರಾರಂಭವಾಗಿದೆ. ಮುಂಬರುವ 5 ವರ್ಷಗಳ ಆಡಳಿತದ ಅವಧಿಗೆ 13 ಕ್ಷೇತ್ರಗಳ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಇದರ ನಡುವೆ ರಾಜಕೀಯೇತರ ಸಹಕಾರಿ ಕ್ಷೇತ್ರದ ಚುನಾವಣೆಗೆ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯ ಕಸರತ್ತಿನಲ್ಲಿ ತೊಡಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಕೈಪಡೆ, ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನೊಳಗೊಂಡ ಸಭೆಗಳು ಬಿರುಸಿನಿಂದ ನಡೆಯುತ್ತಿವೆ.

ADVERTISEMENT

ಆಕಾಂಕ್ಷಿಗಳ ನಡುವಿನ ಪರಸ್ಪರ ಪೈಪೋಟಿಯಿಂದ ಕೊನೆ ಕ್ಷಣದವರೆಗೂ ಚರ್ಚಿಸಿ, ನಿಲುವುಗಳು ಬದಲಾಗುವ, ಅಂತಿಮವಾಗಿ ತೀರ್ಮಾನಿಸುವ ಸಾಧ್ಯತೆಯ ಮಾತುಗಳು ಕೇಳಿ ಬಂದಿವೆ. ಚಿಮುಲ್‌ಗೆ ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ತಡವಾಗಿ ಚುನಾವಣೆ ನಡೆಯುತ್ತಿದ್ದು ಒಕ್ಕೂಟದ ಆಡಳಿತಾವಧಿ ಮುಗಿಯುತ್ತಿದ್ದಂತೆ ಮಾಜಿ ನಿರ್ದೇಶಕರು, ಸಹಕಾರ ಕ್ಷೇತ್ರದಲ್ಲಿನ ಸ್ಥಳೀಯ ಪ್ರಭಾವಿಗಳು ಆಯಾ ವ್ಯಾಪ್ತಿಯಲ್ಲಿ ಅಖಾಡವನ್ನು ಎದುರಿಸುವ ನಿರೀಕ್ಷೆ ಹೊಂದಿದ್ದರು.

ಆದರೆ ಪ್ರಾರಂಭದಲ್ಲಿ ನೂತನ ಒಕ್ಕೂಟ ಪ್ರತ್ಯೇಕತೆಯ ಗೊಂದಲ, ಜಿಲ್ಲೆಯಲ್ಲಿನ ಕ್ಷೇತ್ರಗಳ ವಿಂಗಡಣೆ ಸೇರಿದಂತೆ ನಾನಾ ಪ್ರಕ್ರಿಯೆಗಳ ಹೆಸರಿನಲ್ಲಿ ವಿಳಂಬ ಮಾಡಲಾಗಿದೆ. ಇದರ ನಡುವೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿರುವುದರ ನಡುವೆ ಬಿರುಸಿನ ಸಭೆಗಳು ನಡೆಯುತ್ತಿದ್ದು ಮೊದಲ ಹಂತದಲ್ಲಿ ಆಕಾಂಕ್ಷಿಗಳ ಪಟ್ಟಿಯ ತುಲನೆಯಾಗಿದೆ.

ಇದೀಗ ವೈಯಕ್ತಿಕ ವರ್ಚಸ್ಸು, ಬಲಾಢ್ಯತೆ, ಸಂಘಟನೆ, ಎದುರಾಳಿಗಳ ಯೋಜನೆ ಸೇರಿದಂತೆ ನಾನಾ ಲೆಕ್ಕಾಚಾರದಲ್ಲಿ ಅಂತಿಮ ಅಭ್ಯರ್ಥಿಗಳ ಹೆಸರನ್ನು ಘೋಷಿಸುವ ಕೆಲಸದಲ್ಲಿ ತೊಡಗಲಾಗಿದೆ. ಸದ್ಯ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 84, ಪೆರೇಸಂದ್ರ ಕ್ಷೇತ್ರ 86, ಮಂಚೇನಹಳ್ಳಿ 72, ಗೌರಿಬಿದನೂರು 75, ಗುಡಿಬಂಡೆ 66, ಕೈವಾರ 71, ಚಿಂತಾಮಣಿ ಕಸಬಾ 77, ಚೇಳೂರು, 74, ಬಾಗೇಪಲ್ಲಿ 64, ಶಿಡ್ಲಘಟ್ಟ 80, ಜಂಗಮಕೋಟೆ 81, ಚಿಕ್ಕಬಳ್ಳಾಪುರ ಮಹಿಳಾ ಮೀಸಲು 62, ಚಿಂತಾಮಣಿ ಮಹಿಳಾ ಮೀಸಲು 60 ಮತ ಸೇರಿ ಒಟ್ಟು 952 ಮತಗಳಿವೆ.

ಚಿಮುಲ್ ಚುನಾವಣೆಗೆ ಅರ್ಹ ಹಾಗೂ ಅನರ್ಹರ ಮತದಾರ ಪಟ್ಟಿಯನ್ನು ಜಿಲ್ಲಾಧಿಕಾರಿ ಕಚೇರಿ, ಒಕ್ಕೂಟದ ಶಿಬಿರ ಕಚೇರಿ ಹಾಗೂ ಕೇಂದ್ರ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ 952 ಅರ್ಹ ಹಾಗೂ 47 ಅನರ್ಹ ಮತದಾರರಿದ್ದಾರೆ. ಹೀಗೆ ಗುರುತಿಸುವ ಪೂರ್ವದಲ್ಲಿ ಆಯಾ ವ್ಯಾಪ್ತಿಯಲ್ಲಿ ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿತ್ತು. ಸಂಘದ ನಿಯಮಾನುಸಾರ ನಿರಂತರ ಪ್ರಕ್ರಿಯೆಯಲ್ಲಿ ತೊಡಗಿರುವವರಿಗೆ ಮತದಾನದ ಹಕ್ಕು ಸಿಕ್ಕಿದೆ.

ಈ ಹಿಂದೆ ಅವಿಭಜಿತ ಕೋಲಾರ ಜಿಲ್ಲಾ ಒಕ್ಕೂಟದ ವ್ಯಾಪ್ತಿಯಲ್ಲಿ ಗುರುತಿಸಿಕೊಳ್ಳಲಾಗಿತ್ತು. ಇದರ ನಡುವೆ ನಿಯಮಾನುಸಾರ ಸಂಪನ್ಮೂಲ ಹಂಚಿಕೆ, ಹಾಲು ಉತ್ಪಾದಕರ ಸಹಕಾರ ಸಂಘಗಳ ರಚನೆ ಸೇರಿದಂತೆ ವಿವಿಧ ಪ್ರಕ್ರಿಯೆಗಳೊಂದಿಗೆ ವಿಭಜಿಸಲಾಗಿದೆ. ಅದರಂತೆ ಪ್ರತ್ಯೇಕ ಜಿಲ್ಲೆಯಲ್ಲಿನ ಆಡಳಿತ ಮಂಡಳಿ ರಚನೆಗೆ ಚುನಾವಣೆ ನಡೆಸಲಾಗುತ್ತಿದೆ.

ಇದರಿಂದ ಯಾವುದೇ ಲೋಪಗಳಿಗೆ ಅವಕಾಶ ನೀಡದಿರಲು ಜಿಲ್ಲಾಧಿಕಾರಿ ಜಿ.ಪ್ರಭು ಮಾರ್ಗದರ್ಶನದಲ್ಲಿ ಒಕ್ಕೂಟದ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್ ನೇತೃತ್ವದಲ್ಲಿ ನಿರಂತರ ಸಭೆಗಳನ್ನು ಕೈಗೊಂಡು ಸಿಬ್ಬಂದಿಗೆ ಅಗತ್ಯ ಸಲಹೆ ಸೂಚನೆ ನೀಡಲಾಗಿದೆ.

ಚುನಾವಣೆ ಪ್ರಕ್ರಿಯೆ
ಜ. 19 ರಿಂದ ಜ. 22 ನಾಮಪತ್ರ ಸ್ವೀಕಾರ, ಜ. 23 ನಾಮಪತ್ರ ಪರಿಶೀಲನೆ, ಜ. 24 ಉಮೇದುವಾರಿಕೆ ಪಡೆಯಲು ಅವಕಾಶ, ಜ. 27 ಮಾದರಿ ಮತಪತ್ರ ಪ್ರಕಟಣೆ, ಫೆ.1 ರಂದು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಬಳಿಕ ಚುನಾವಣಾ ಫಲಿತಾಂಶವನ್ನು ಘೋಷಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.