ADVERTISEMENT

ಚಿಮುಲ್ ಫಲಿತಾಂಶ ಅತಂತ್ರ...ಅಧಿಕಾರ ಹಿಡಿಯಲು ಯತ್ನಿಸುವುದೇ ಕಾಂಗ್ರೆಸ್‌?

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 6:32 IST
Last Updated 2 ಫೆಬ್ರುವರಿ 2026, 6:32 IST
ಚಿಮುಲ್ ಚುನಾವಣಾ ಮತದಾನ ಕೇಂದ್ರವಾದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗ ಸೇರಿದ್ದ ಜನರು, ವಿವಿಧ ಪಕ್ಷಗಳ ಕಾರ್ಯಕರ್ತರು
ಚಿಮುಲ್ ಚುನಾವಣಾ ಮತದಾನ ಕೇಂದ್ರವಾದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗ ಸೇರಿದ್ದ ಜನರು, ವಿವಿಧ ಪಕ್ಷಗಳ ಕಾರ್ಯಕರ್ತರು   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ (ಚಿಮುಲ್) ಚುನಾವಣಾ ಫಲಿತಾಂಶ ಅತಂತ್ರವಾಗಿದೆ. ಅಧಿಕಾರ ಹಿಡಿಯಲು ಕಾಂಗ್ರೆಸ್ ಪಕ್ಷವು ನಾಮನಿರ್ದೇಶಿತ ಮತ್ತು ಕೆಎಚ್‌ಪಿ ಬಣದ ನಿರ್ದೇಶಕರ ಮೊರೆ ಹೋಗುವ ಸಾಧ್ಯತೆ ಇದೆ.

ಭಾನುವಾರ ಒಕ್ಕೂಟಕ್ಕೆ ಚುನಾವಣೆ ನಡೆಯಿತು. ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಿತು. ಸಂಜೆಯ ವೇಳೆಗೆ ಫಲಿತಾಂಶ ಪ್ರಕಟವಾಯಿತು. ಒಟ್ಟು 13 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಬೆಂಬಲಿತ ಆರು, ಬಿಜೆಪಿ ಜೆಡಿಎಸ್ ಮೈತ್ರಿಕೂಟ ಬೆಂಬಲಿತ ಐದು ಮತ್ತು ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬೆಂಬಲಿತ (ಕೆಎಚ್‌ಪಿ ಬಣ) ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದರು.

ಪೆರೇಸಂದ್ರ, ಶಿಡ್ಲಘಟ್ಟ, ಜಂಗಮಕೋಟೆ, ಚೇಳೂರು, ಕೈವಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಎನ್‌ಡಿಎ ಅಭ್ಯರ್ಥಿಗಳು, ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರ, ಮಂಚೇನಹಳ್ಳಿಯಲ್ಲಿ ಕೆೆಎಚ್‌ಪಿ ಬಣ ಮತ್ತು ಚಿಕ್ಕಬಳ್ಳಾಪುರ, ಗುಡಿಬಂಡೆ, ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರು ಮತ್ತು ಚಿಂತಾಮಣಿ ಮಹಿಳಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಆಯ್ಕೆಯಾದರು.

ADVERTISEMENT

ಕಾಂಗ್ರೆಸ್ ಸರ್ಕಾರ ಬೆಂಬಲಿಸಿರುವ ಗೌರಿಬಿದನೂರಿನ ಪಕ್ಷೇತರ ಶಾಸಕ ಕೆ.ಎಚ್‌.ಪುಟ್ಟಸ್ವಾಮಿಗೌಡ ಅವರ ನಿಲುವಿನತ್ತ ಚಿತ್ತವಿದೆ. ಸರ್ಕಾರಕ್ಕೆ ಬೆಂಬಲ ನೀಡಿರುವ ಕಾರಣ ಅವರು ಚಿಮುಲ್‌ನಲ್ಲಿ ಕಾಂಗ್ರೆಸ್ ಪರವಾಗಿ ನಿಲ್ಲುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಚಿಮುಲ್ ಚುನಾವಣೆಯು ಒಂದೊಂದು ಕ್ಷೇತ್ರದಲ್ಲಿ ಒಂದೊಂದು ಲೆಕ್ಕಾಚಾರಕ್ಕೆ ಕಾರಣವಾಗಿದೆ.

ಮತ ಎಣಿಕೆ ಪೂರ್ಣಗೊಳಿಸಿ ಕೇಂದ್ರದಿಂದ ಹೊರ ಬರುತ್ತಿದ್ದಂತೆಯೇ ವಿಜೇತರ ಬೆಂಬಲಿಗರು ತಮ್ಮ ನಾಯಕನನ್ನು ಹೊತ್ತು ಬಿಬಿ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಜಯಕಾರ ಹಾಕಿದರು.

ಬಿರುಸಿನ ಮತದಾನ:

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಿತು. 13 ಕ್ಷೇತ್ರಗಳಿಂದ ಒಟ್ಟು 952 ಮತದಾರರು ಇದ್ದು 951 ಮತಗಳು ಚಲಾವಣೆಯಾದವು. ಕಾಲೇಜು ಮುಂಭಾಗದ ಹಾದು ಹೋಗಿರುವ ಬಿಬಿ ರಸ್ತೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಭಾರಿ ಸಂಖ್ಯೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ಮುಖಂಡರು ಸೇರಿದ್ದರು. ಅಭ್ಯರ್ಥಿಗಳು ಬಸ್‌ಗಳಲ್ಲಿ ಡೆಲಿಗೇಟ್‌ಗಳನ್ನು ಮತದಾನ ಕೇಂದ್ರಕ್ಕೆ ಕರೆ ತಂದರು. 

ಐದು ಸ್ಥಾನ ನಾಮನಿರ್ದೇಶನ

ಸರ್ಕಾರದ ನಾಮನಿರ್ದೇಶಕರು ಎನ್‌ಡಿಡಿಬಿ ಪ್ರತಿನಿಧಿ ಕೆಎಂಎಫ್ ಪ್ರತಿನಿಧಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಪಶುಸಂಗೋಪನಾ ಇಲಾಖೆ ಮತ್ತು ಸಹಕಾರ ಇಲಾಖೆಯ ಪ್ರತಿನಿಧಿಯು ಚಿಮುಲ್ ನಿರ್ದೇಶಕರಾಗುತ್ತಾರೆ. ಈ ಮೂಲಕ ಚಿಕ್ಕಬಳ್ಳಾಪುರ ಒಕ್ಕೂಟವು 18 ನಿರ್ದೇಶಕರನ್ನು ಹೊಂದಲಿದೆ. ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿರುವ ಕಾರಣ ನಾಮನಿರ್ದೇಶಿತ ಐದು ಸ್ಥಾನಗಳು ಕಾಂಗ್ರೆಸ್ ಪರವಾಗಿರಲಿವೆ. ಈ ಎಲ್ಲ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿಯುವ ಸಾಧ್ಯತೆ ಇದೆ.

ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಪೆರೇಸಂದ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಫಲಿತಾಂಶ ಹೊರ ಬೀಳುತ್ತಲೆ ಹೊರಬಂದ ಪೆರೇಸಂದ್ರ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಆರ್.ರಾಜಣ್ಣ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಕಿಡಿಕಾರಿದರು.  ‘ಸ್ಥಳೀಯ ಶಾಸಕರೇ ನನ್ನ ಸೋಲಿಸಿದ್ದಾರೆ. ಕಾಂಗ್ರೆಸ್ ಮತಗಳನ್ನೇ ನನಗೆ ಹಾಕಿಸಲು ಬಿಡಲಿಲ್ಲ. ನನ್ನ ಅಭ್ಯರ್ಥಿ ಮಾಡಿದ್ದು ಸಚಿವರು. ಕನಿಷ್ಠ 50 ಮತಗಳು ನನಗೆ ಬರಬೇಕಾಗಿತ್ತು. ಶಾಸಕರ ಬಣ ಸಂಪೂರ್ಣವಾಗಿ ನನಗೆ ಕೈ ಕೊಟ್ಟಿದೆ’ ಎಂದು ಕಿಡಿಕಾರಿದರು. ಮತ್ತೊಂದು ಕಡೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬೆಂಬಲಿತರಾಗಿ ಗೆಲುವು ಸಾಧಿಸಿದ ಎನ್‌.ಸಿ. ವೆಂಕಟೇಶ್ ‘ನನ್ನ ಕೆಲಸ ನೋಡಿ ಸಚಿವ ಡಾ.ಎಂ.ಸಿ.ಸುಧಾಕರ್ ಟಿಕೆಟ್ ನೀಡಿದರು. ಅವರಿಗೆ ಆಭಾರಿ. ಶಾಸಕ ಬಹಳ ದೊಡ್ಡ ಮನುಷ್ಯ. ಎರಡೂವರೆ ವರ್ಷದ ಹಿಂದೆ ಚಿಕ್ಕಬಳ್ಳಾಪುರದ ಒಂದು ದಾರಿ ಊರು ಗೊತ್ತಿರಲಿಲ್ಲ. ನಾವು ಪ್ರದೀಪ್ ಅವರಿಗೆ ಟಿಕೆಟ್ ಕೊಡಿಸಬೇಕು ಆಗ್ರಹಿಸಿ ಟಿಕೆಟ್ ಕೊಡಿಸಿದೆವು. ಅವರ ಗೆಲುವಿಗೆ ಶ್ರಮಿಸಿದೆವು. ಆದರೆ ನನ್ನ ವಿರುದ್ಧ ಕೆಲಸ ಮಾಡಿದರು. ಡೆಲಿಗೇಟ್‌ಗಳನ್ನು ಹೈಜಾಕ್ ಮಾಡಿ ಕೋಲಾರದಲ್ಲಿ ಇಟ್ಟರು’ ಎಂದು ದೂರಿದರು. ಪೆರೇಸಂದ್ರದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗೆ ಶಾಸಕರು ಕೆಲಸ ಮಾಡಿಲ್ಲ. ಅಲ್ಲಿ ಅವರು ಕೆಲಸ ಮಾಡಿದ್ದರೆ ಕಾಂಗ್ರೆಸ್ ಗೆಲ್ಲುತ್ತಿತ್ತು ಎಂದರು.

ಭಾರಿ ಅಂತರದಿಂದ ಗೆಲುವು

ಚಿಂತಾಮಣಿ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಶ್ವತ್ಥನಾರಾಯಣಬಾಬು ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಈ ಕ್ಷೇತ್ರದಲ್ಲಿ 77 ಮತಗಳಿದ್ದು ಎಲ್ಲವೂ ಚಲಾವಣೆಯಾಗಿವೆ. ಈ ಪೈಕಿ ಬಾಬು 70 ಮತ ಪಡೆದರು. ಪ್ರತಿಸ್ಪರ್ಧಿ ಶ್ರೀನಿವಾಸಪ್ಪ ಐದು ಮತ ಪಡೆದರೆ ಎರಡು ಮತಗಳು ತಿರಸ್ಕೃತವಾಗಿದ್ದವು. ಪೆರೇಸಂದ್ರ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೆ.ವಿ.ನಾಗರಾಜ್ 72 ಮತ ಪಡೆದರೆ ಅವರ ಪ್ರತಿಸ್ಪರ್ಧಿ ಕೆ.ಆರ್.ರಾಜಣ್ಣ 12 ಮತ ಪಡೆದರು. ಈ ಇಬ್ಬರು ನಾಯಕರು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. 

ಲಘು ಲಾಠಿ ಚಾರ್ಜ್‌

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದ ಬಿಬಿ ರಸ್ತೆಯಲ್ಲಿ ಕಾರ್ಯಕರ್ತರ ಘರ್ಷಣೆ ಹಿನ್ನೆಲೆಯಲ್ಲಿ ಲಘು ಲಾಠಿ ಪ್ರಹಾರ ನಡೆಯಿತು. ಮಧ್ಯಾಹ್ನ ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಈ ವೇಳೆ ರಸ್ತೆ ಬಂದ್ ಆಗುವ ರೀತಿಯಲ್ಲಿ ಜನರು ಜಮಾಯಿಸಿದ್ದರು.  ಆಗ ಡಿವೈಎಸ್‌ಪಿ ರವಿಕುಮಾರ್ ಚದುರುವಂತೆ ಮನವಿ ಮಾಡಿದರು. ಜನರು ಕದಲದಿದ್ದಾಗ ಲಘು ಲಾಠಿ ಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಿದರು. ಇಬ್ಬರು ಡಿವೈಎಸ್‌ಪಿ ನಾಲ್ಕು ಸಿಪಿಐ 12 ಪಿಎಸ್ ಐ ಸೇರಿದಂತೆ 215 ಪೊಲೀಸ್ ಸಿಬ್ಬಂದಿ ಬಂದೋಬಸ್ತ್‌ಗೆ ನೇಮಕವಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.