ADVERTISEMENT

ಕೆರೆಯಂಚಿನಲ್ಲಿ ಮಕ್ಕಳಿಗೆ ಪರಿಸರ ಪಾಠ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 3:29 IST
Last Updated 9 ಜನವರಿ 2021, 3:29 IST
ಶಿಡ್ಲಘಟ್ಟ ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕೆರೆಯಂಚಿನಲ್ಲಿ ಪರಿಸರ ಪಾಠ ನಡೆಸಲಾಯಿತು
ಶಿಡ್ಲಘಟ್ಟ ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕೆರೆಯಂಚಿನಲ್ಲಿ ಪರಿಸರ ಪಾಠ ನಡೆಸಲಾಯಿತು   

ಶಿಡ್ಲಘಟ್ಟ: ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮಕ್ಕಳನ್ನು ಶಾಲೆಯಿಂದ ಹೊರಗೆ ಸ್ವಚ್ಛಂದ ಪರಿಸರದೆಡೆಗೆ ಕರೆದೊಯ್ದು ಪರಿಸರ ಪಾಠ ಮಾಡಿದರು.

ಗೌಡನ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲೆಯ ಸಮೀಪದಲ್ಲಿರುವ ಕೆರೆಯ ಬಳಿ ಶುಕ್ರವಾರ ಹೋಗಿದ್ದರು. ಕೆರೆಗೆ ಭೇಟಿ ನೀಡುವ ಹಕ್ಕಿಗಳು, ಬಟ್ಟೆ ಒಗೆಯಲು ಬರುವ ಸ್ಥಳೀಯರು, ವಿವಿಧ ಜಲಚರಗಳು ಮುಂತಾದವುಗಳನ್ನು ತೋರಿಸಿ ವಿವರಿಸಿದ ಶಿಕ್ಷಕರು ಮಕ್ಕಳಿಗೆ ಕೆರೆಯ ಅಗತ್ಯದ ಬಗ್ಗೆ ಮನಮುಟ್ಟುವಂತೆ ತಿಳಿಸಿದರು.

ಶಿಕ್ಷಕರಾದ ಪಿ.ಸುದರ್ಶನ್, ವಿ.ಎಂ.ಮಂಜುನಾಥ್, ಎಚ್.ಬಿ.ರೂಪ, ಎಸ್.ಎ.ನಳಿನಾಕ್ಷಿ ಅವರು ಮಕ್ಕಳಿಗೆ ಹಳ್ಳ, ಕುಂಟೆ, ಕೆರೆ, ಸರೋವರ, ಸಾಗರಗಳು, ಮಳೆಮಾರುತಗಳು, ಜಲ, ಚಕ್ರ, ವಾಯು ಮಾಲಿನ್ಯ, ಜಲಮಾಲಿನ್ಯ, ಶಬ್ದ ಮಾಲಿನ್ಯದ ಬಗ್ಗೆ ಹಾಗೂ ಕೆರೆಗಳು ಹಳ್ಳಿಗಳ ಜೀವ ನಾಡಿಗಳು, ಕೆರೆಗಳಲ್ಲಿ ನೀರಿದ್ದರೆ ಅಂತರ್ಜಲ ಹೆಚ್ಚಳ, ಕರೆಗಳಿಂದ ಕೃಷಿಗೆ ಆಗುವ ಅನುಕೂಲಗಳ ಬಗ್ಗೆ ಮಾಹಿತಿಗಳನ್ನು ನೀಡಿದರು.

ADVERTISEMENT

‘ಕೊರೊನಾದಿಂದ ಬಂಧಿಯಾಗಿದ್ದ ಮಕ್ಕಳಿಗೆ ಈ ದಿನದ ಭೇಟಿ ತುಂಬಾ ಸಂತೋಷ ಕೊಟ್ಟಿದೆ. ಮುಂದೆ ಇದೇ ರೀತಿ ಶಿಕ್ಷಕರ ಸಹಕಾರದಿಂದ ಮಕ್ಕಳಿಗೆ ಕ್ರಿಯಾತ್ಮಕ ಚಟುವಟಿಕೆಗಳನ್ನು ಕೈಗೊಂಡು ಮಕ್ಕಳ ಪ್ರಗತಿಗಾಗಿ ಶ್ರಮಿಸುತ್ತೇವೆ’ ಎಂದು ಮುಖ್ಯ ಶಿಕ್ಷಕ ಎಂ.ದೇವರಾಜ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.