
ಗೌರಿಬಿದನೂರು: ತಾಲ್ಲೂಕಿನ ಮೇಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಳ್ಯ ಗ್ರಾಮದಲ್ಲಿರುವ ಕೋಳಿ ಫಾರ್ಮ್ನಿಂದ ನೊಣಗಳ ಹಾವಳಿ ಹೆಚ್ಚಾಗಿದೆ.
ನೊಣಗಳ ಹೆಚ್ಚಳದಿಂದ ಸುತ್ತಮುತ್ತಲಿನ ಗ್ರಾಮಗಳ ಜನರು ಮತ್ತು ಜಾನುವಾರುಗಳಿಗೆ ರೋಗ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೋಳಿಫಾರ್ಮ್ನಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ನೊಣಗಳ ಹಾವಳಿಯನ್ನು ತಡೆಯಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಮತ್ತು ಅಖಿಲ ಕರ್ನಾಟಕ ರೈತ ಸಂಘಟನೆ ಪದಾಧಿಕಾರಿಗಳು ಶುಕ್ರವಾರ ಕೋಳಿ ಫಾರ್ಮ್ ಎದುರು ಪ್ರತಿಭಟನೆ ನಡೆಸಿದರು.
ಸಂಘದ ತಾಲ್ಲೂಕು ಸಂಚಾಲಕ ರವಿಚಂದ್ರ ರೆಡ್ಡಿ ಮಾತನಾಡಿ, ಮೇಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೊಣಗಳ ಕಾಟ ಮಿತಿಮೀರಿದೆ. ಗ್ರಾಮಸ್ಥರು, ಮಕ್ಕಳು ಮತ್ತು ವಯೋವೃದ್ಧರು ರೋಗದ ಭೀತಿ ಎದುರಿಸುತ್ತಿದ್ದಾರೆ. ಮನೆ ಮತ್ತು ಜಮೀನುಗಳಲ್ಲಿ ಕೆಲಸ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಕೋಳಿ ಫಾರ್ಮ್ ಅನ್ನು ಶುಚಿಯಾಗಿಡಬೇಕು ಎಂಬ ಪಂಚಾಯಿತಿ ಅಧಿಕಾರಿಗಳು ನೀಡಿದ ನೋಟಿಸ್ಗೆ ಮಾಲೀಕರು ಕಿಮ್ಮತ್ತು ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಫಾರ್ಮ್ಗೆ ಬೀಗ ಜಡಿಯಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ತಹಶೀಲ್ದಾರ್ ಅರವಿಂದ್ ಮತ್ತು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೆ. ಹೊನ್ನಯ್ಯ, ಕೋಳಿ ಫಾರ್ಮ್ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲದೆ, ನೊಣಗಳು ಉತ್ಪತ್ತಿಯಾಗದಂತೆ ಫಾರ್ಮ್ನಲ್ಲಿ ಸ್ವಚ್ಛತೆ ಕಾಪಾಡಬೇಕು. ಒಂದು ವಾರದೊಳಗೆ ಸುತ್ತಮುತ್ತಲಿನ ಎಲ್ಲ ಹಳ್ಳಿಗಳಲ್ಲಿ ಔಷಧ ಸಿಂಪಡಿಸಬೇಕು. ನೊಣಗಳು ಹಳ್ಳಿಗಳ ಕಡೆಗೆ ಬರದಂತೆ ಕ್ರಮ ಕೈಗೊಳ್ಳಬೇಕು ಎಂದು ಫಾರ್ಮ್ ಮಾಲೀಕರಿಗೆ ಸೂಚಿಸಿದರು.
ಇದೇ ವೇಳೆ ಗ್ರಾಮಾಂತರ ಠಾಣೆ ಉಪ ನಿರೀಕ್ಷಕ ರಮೇಶ್ ಗುಗ್ಗರಿ, ಎಕೆಆರ್ಎಸ್ ಪದಾಧಿಕಾರಿ ಅಂಜನರೆಡ್ಡಿ , ಅಂಜಿನಪ್ಪ, ಗಂಗರಾಜು, ಬಾಲಚಂದ್ರರೆಡ್ಡಿ , ಮಂಜುನಾಥ, ಆನಂದರೆಡ್ಡಿ, ಪ್ರವೀಣ್ ಕುಮಾರ್, ಸುರೇಶ್ ಮತ್ತು ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.