ADVERTISEMENT

ಗೌರಿಬಿದನೂರು | ಸಂಕಷ್ಟದಲ್ಲಿ ಕೈಹಿಡಿದ ಕಲೆ, ನಿತ್ಯ ₹ 5,000 ಸಂಪಾದನೆ

ಎ.ಎಸ್.ಜಗನ್ನಾಥ್
Published 22 ಮೇ 2020, 20:00 IST
Last Updated 22 ಮೇ 2020, 20:00 IST
ನಾಮಫಲಕಗಳ ಬರವಣಿಗೆಯಲ್ಲಿ ನಿರತರಾದ ಚಿತ್ರಕಲಾ ಶಿಕ್ಷಕ ಜಗದೀಶ್
ನಾಮಫಲಕಗಳ ಬರವಣಿಗೆಯಲ್ಲಿ ನಿರತರಾದ ಚಿತ್ರಕಲಾ ಶಿಕ್ಷಕ ಜಗದೀಶ್   

ಗೌರಿಬಿದನೂರು: ಲಾಕ್‌ಡೌನ್‌ನಿಂದಾಗಿ ತರಗತಿಗಳು ನಡೆಯದೆ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ಖಾಸಗಿ ಶಾಲೆ ಶಿಕ್ಷಕ ಜಗದೀಶ್‌, ಚಿತ್ರಕಲೆಯನ್ನು ಬಳಸಿಕೊಂಡು ನಿತ್ಯ ₹ 5,000 ಸಂಪಾದಿಸುತ್ತಿದ್ದಾರೆ.

ಲಾಕ್‌ಡೌನ್‌ ನಂತರ ಮನೆಯಲ್ಲೆ ಇರಬೇಕಾದ ಪರಿಸ್ಥಿತಿ ಎದುರಾದಾಗ ಜಗದೀಶ್ ಅವರಿಗೆ ಕುಟುಂಬ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಾಯಿತು. ಅದುವರೆಗೆ ಪ್ರವೃತ್ತಿಯಾಗಿದ್ದ ಚಿತ್ರಕಲೆಯನ್ನೆ ವೃತ್ತಿಯಾಗಿಸಿಕೊಂಡರು. ನಿತ್ಯ ನಗರ ಮತ್ತು ಗ್ರಾಮೀಣ ಭಾಗಗಳಿಗೆ ತೆರಳಿ‌ ಗೋಡೆ ಬರಹ ಹಾಗೂ ಚಿತ್ರ ‌ಬಿಡಿಸುವ ಮೂಲಕ ಬದುಕು ರೂಪಿಸಿಕೊಳ್ಳಲು ಮುಂದಾದರು.

ನಿತ್ಯ ಕನಿಷ್ಠ 7- 8 ನಾಮಫಲಕ ಬರೆಯುತ್ತಾ ದಿನಕ್ಕೆ ₹ 5,000 ಗಳಿಸುತ್ತಿದ್ದಾರೆ.

ADVERTISEMENT

ಶಾಲೆ, ಕಾಲೇಜು ದಿನಗಳಿಂದಲೂ ಚಿತ್ರಕಲೆಯತ್ತ ಒಲವಿದ್ದ ಜಗದೀಶ್‌ ಬಿಡುವಿನ ವೇಳೆಯಲ್ಲಿ ಚಿತ್ರಕಲೆಯಲ್ಲಿ ಸಕ್ರಿಯವಾಗುತ್ತಿದ್ದರು. ಶಿಕ್ಷಕರಾಗಿ ವಿದ್ಯಾರ್ಥಿಗಳಿಗೂ ಚಿತ್ರಕಲೆ ಕುರಿತು ಆಸಕ್ತಿ ಬೆಳೆಸುತ್ತಿದ್ದಾರೆ

ಕೊರೊನಾ ಜಾಗೃತಿ: ತಾಲ್ಲೂಕಿನಲ್ಲಿ ಕೋವಿಡ್‌– 19 ಜಾಗೃತಿ ಮೂಡಿಸಲು ನಗರದ ಪ್ರಮುಖ ವೃತ್ತ, ಕೆಲ ವಾರ್ಡ್‌ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರನಾ ವೈರಸ್‌ ಚಿತ್ರ ಬರೆದು ಜಾಗೃತಿ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಸರ್ಕಾರವು ಲಾಕ್‌ಡೌನ್‌ ಅವಧಿಯಲ್ಲಿ ನರೇಗಾ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿದೆ. ಇದರಿಂದ ನಾಮಫಲಕ ಬರೆಯುವ ಕಲಾವಿದರಿಗೆ ಅವಕಾಶಗಳು‌ ಹೆಚ್ಚಿವೆ. ಇದರಿಂದಾಗಿ ಜಗದೀಶ್‌ ಅವರಿಗೂ ಅವಕಾಶಗಳ ಬಾಗಿಲು ತೆರೆದಿದೆ.

*
ಕೊರೊನಾ ಮುಂಜಾಗೃತೆಯೊಂದಿಗೆ ನಿತ್ಯ ನಮಫಲಕ ಬರಹದಲ್ಲಿ ನಿರತನಾಗಿದ್ದೇನೆ. ಸಾಕಷ್ಟು ಅವಕಾಶಗಳು ಹುಡುಕಿ‌ಬರುತ್ತಿವೆ. ಕುಟುಂಬ ನಿರ್ವಹಣೆಗೂ ಸಹಕಾರಿಯಾಗಿದೆ.
- ಜಾಲಿ ಜಗದೀಶ್, ಶಿಕ್ಷಕ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.