ADVERTISEMENT

ಕಲ್ಯಾಣ ಮಂಟಪ ಮುಜರಾಯಿ ಸ್ವಾಧೀನಕ್ಕೆ

ಪರಿಶಿಷ್ಟರ ವಿವಾಹಕ್ಕೆ ನಿರಾಕರಣೆ, ಅಕ್ರಮ ಕಟ್ಟಡಗಳ ಸುಪರ್ದಿಗೆ ಡಿ.ಸಿ ಆದೇಶ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 4:18 IST
Last Updated 24 ನವೆಂಬರ್ 2022, 4:18 IST
ಗುಡಿಬಂಡೆ ತಾಲ್ಲೂಕು ಎಲ್ಲೋಡು ಲಕ್ಷ್ಮೀಆದಿನಾರಾಯಣ ಸ್ವಾಮಿ ದೇವಾಲಯದ ವ್ಯಾಪ್ತಿಯಲ್ಲಿನ ಬ್ರಾಹ್ಮಣರ ಸೇವಾ ಸಂಘದ ಕಟ್ಟಡವನ್ನು ಮುಜರಾಯಿ ಇಲಾಖೆ ಅಧಿಕಾರಿಗಳು ಸ್ವಾಧೀನ ಪಡಿಸಿಕೊಂಡರು
ಗುಡಿಬಂಡೆ ತಾಲ್ಲೂಕು ಎಲ್ಲೋಡು ಲಕ್ಷ್ಮೀಆದಿನಾರಾಯಣ ಸ್ವಾಮಿ ದೇವಾಲಯದ ವ್ಯಾಪ್ತಿಯಲ್ಲಿನ ಬ್ರಾಹ್ಮಣರ ಸೇವಾ ಸಂಘದ ಕಟ್ಟಡವನ್ನು ಮುಜರಾಯಿ ಇಲಾಖೆ ಅಧಿಕಾರಿಗಳು ಸ್ವಾಧೀನ ಪಡಿಸಿಕೊಂಡರು   

ಗುಡಿಬಂಡೆ: ತಾಲ್ಲೂಕಿನ ಬ್ರಾಹ್ಮಣರ ಹಳ್ಳಿಯ ಪರಿಶಿಷ್ಟ ಜಾತಿಯ ಜನರಿಗೆ ಕಲ್ಯಾಣ ಮಂಟಪ ನಿರಾಕರಣೆ ಪ್ರಕರಣದ ಹಿನ್ನೆಲೆಯಲ್ಲಿ ದೇಗುಲಗಳಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ಸುಪರ್ದಿಗೆ ಪಡೆಯಲು ಮುಜುರಾಯಿ ಇಲಾಖೆ ಮುಂದಾಗಿದೆ.

ಬ್ರಾಹ್ಮಣರಹಳ್ಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಯಲ್ಲಿ ಸರಣಿಯಾಗಿ ವರದಿಗಳು ಪ್ರಕಟವಾಗಿದ್ದವು.

ದೇಗುಲಗಳ ಜಮೀನಿನಲ್ಲಿ ಸಂಘ ಸಂಸ್ಥೆಗಳು ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರೆ ಅವುಗಳನ್ನು ವಶಕ್ಕೆ ಪಡೆಯುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಜುರಾಯಿ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಬ್ರಾಹ್ಮಣರ ಹಳ್ಳಿಯ ಪ್ರಕರಣದಿಂದ ಅಕ್ರಮ ಕಟ್ಟಡಗಳು ಸರ್ಕಾರದ ವಶಕ್ಕೆ ಹೋಗುತ್ತಿವೆ.

ADVERTISEMENT

ತಾಲ್ಲೂಕಿನ ಪುಣ್ಯಕೇತ್ರ ಎಲ್ಲೋಡು ಕೊರ್ಮಗಿರಿ ಲಕ್ಷ್ಮಿಆದಿನಾರಾಯಣಸ್ವಾಮಿ ದೇವಾಲಯದ ನಾಲ್ಕು ಕಲ್ಯಾಣ ಮಂಟಪ ಮತ್ತು ಇತರ ಕಟ್ಟಡಗಳನ್ನು ಮುಜರಾಯಿ ಇಲಾಖೆ ಸ್ವಾಧೀನಕ್ಕೆ ಪಡೆದಿದೆ. ಮುಜರಾಯಿ ಇಲಾಖೆ ಸೇರುವ ದೇವಾಲಯದಲ್ಲಿ 123 ಎಕರೆ ಜಮೀನಿನಿದೆ. ಈ ಪೈಕಿ 4 ಎಕರೆ 4 ಗುಂಟೆ ಜಾಗದಲ್ಲಿ ಸಂಘ ಸಂಸ್ಥೆಗಳು ಅನುಮತಿ ಪಡೆಯದೆ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದವು.‌

4 ಎಕರೆ 4 ಗುಂಟೆ ಜಮೀನಿನಲ್ಲಿ ದೇವರ ಹೆಸರಿನಲ್ಲಿ ಅನೇಕ ವರ್ಷಗಳಿಂದ ಕೆಲವರು ಖಾಸಗಿ ಟ್ರಸ್ಟ್‌ ಕಟ್ಟಿಕೊಂಡು ಕಲ್ಯಾಣ ಮಂಟಪ್ಪ ನಿರ್ಮಿಸಿ ಬಾಡಿಗೆಗೆ ನೀಡುತ್ತಿದ್ದರು. ದೇವಸ್ಥಾನದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಬ್ರಾಹ್ಮಣರ ಕಲ್ಯಾಣ ಮಂಟಪ, ದೇವಾಂಗ ಕಲ್ಯಾಣ ಮಂಟಪ ಹಾಗೂ ಎರಡು ಆರ್ಯವೈಶ್ಯ ಕಲ್ಯಾಣ ಮಂಟಪವನ್ನು ವಶಪಡಿಸಿಕೊಳ್ಳಲಾಗಿದೆ.

ರಾಜಸ್ವ ನಿರೀಕ್ಷಕ ಲಕ್ಷ್ಮೀನಾರಾಯಣ, ಗ್ರಾಮ ಲೆಕ್ಕಾಧಿಕಾರಿ ಮುನಿರಾಜು, ಪೊಲೀಸ್ ಸಿಬ್ಬಂದಿ ಕಲ್ಯಾಣ ಮಂಟಪಗಳಿಗೆ ಬೀಗ ಹಾಕಿದರು.

ಆಕ್ರಮವಾಗಿ ನಿರ್ಮಿಸಿರುವ ಕಲ್ಯಾಣ ಮಂಟಪಗಳ ತೆರವಿಗೆ ಜಿಲ್ಲಾಧಿಕಾರಿ ಜುಲೈ 8 ರಂದು ಆದೇಶಿಸಿದ್ದರು. ಆದೇಶದ ಪ್ರಕಾರ ಒತ್ತುವರಿ ಮಾಡಿಕೊಂಡ 4 ಎಕರೆ 4 ಗುಂಟೆ ಜಾಗದಲ್ಲಿ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಇಲಾಖೆ ಅಧಿಕಾರಿಗಳು 4 ಕಟ್ಟಡಗಳಿಗೆ ಬೀಗಹಾಕಿ ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆಯಲಾಗಿದೆ. ಸಾರ್ವಜನಿಕರ ಅನುಕೊಲಕ್ಕಾಗಿ ಇಲಾಖೆಯಿಂದ ಬಾಡಿಗೆಗೆ ನೀಡಲು ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ತಹಶೀಲ್ದಾರ್ ಸಿಗ್ಬತ್‌ವುಲ್ಲಾ
ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.