ADVERTISEMENT

ಗೌರಿಬಿದನೂರು: ಭಾರಿ ಮಳೆ, ಫಸಲು ಕೈತಪ್ಪುವ ಭೀತಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 5:48 IST
Last Updated 10 ಅಕ್ಟೋಬರ್ 2021, 5:48 IST
ಗೌರಿಬಿದನೂರು ತಾಲ್ಲೂಕು ರಮಾಪುರ ಬಳಿ ರಸ್ತೆಗೆ ಉರುಳಿದ ಜಾಲಿ‌ಮರ
ಗೌರಿಬಿದನೂರು ತಾಲ್ಲೂಕು ರಮಾಪುರ ಬಳಿ ರಸ್ತೆಗೆ ಉರುಳಿದ ಜಾಲಿ‌ಮರ   

ಗೌರಿಬಿದನೂರು: ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಿಗ್ಗೆ ಉತ್ತಮ ಮಳೆಯಾಗಿದೆ. ಕೆರೆ, ಕುಂಟೆಗಳು ನೀರಿನಿಂದ ತುಂಬಿವೆ.

ಕಳೆದ ಒಂದೂವರೆ ತಿಂಗಳಿನಿಂದ ಮಳೆಯಿಲ್ಲದೆ ಪರಿತಪಿಸುತ್ತಿದ್ದ ರೈತರು ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಆತಂಕಗೊಂಡಿದ್ದಾರೆ. ಅತ್ಯಲ್ಪ ಮಳೆಯಲ್ಲಿ ಬೆಳೆದು ನಿಂತಿದ್ದ ಮುಸುಕಿನ ‌ಜೋಳ, ರಾಗಿ ಹಾಗೂ ನೆಲಗಡಲೆ ‌ಬೆಳೆಗಳು ಕೈಗೆಟುಕದಂತಾಗಿವೆ.

ಪ್ರತೀ ಜಮೀನಿನಲ್ಲಿ ಮಳೆ ನೀರು ಶೇಖರಣೆಯಾಗಿದೆ. ಇದರಿಂದಾಗಿ ಫಸಲಿನ ಜತೆಗೆ ಜಾನುವಾರುಗಳಿಗೆ ಮೇವು ಕೂಡ ದೊರೆಯದ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಗೌರಿಬಿದನೂರು ‌ನಗರದಲ್ಲಿ 2.2 ಮಿ.ಮೀ, ಹೊಸೂರಿನಲ್ಲಿ 7.2 ಮಿ.ಮೀ, ಡಿ.ಪಾಳ್ಯದಲ್ಲಿ 88 ಮಿ.ಮೀ, ವಾಟದಹೊಸಹಳ್ಳಿ ಯಲ್ಲಿ 34 ಮಿ.ಮೀ, ಮಂಚೇನಹಳ್ಳಿಯಲ್ಲಿ 68 ಮಿ.ಮೀ, ತೊಂಡೇಬಾವಿ ಯಲ್ಲಿ 9 ಮಿ.ಮೀ ಹಾಗೂ ತಿಪ್ಪಗಾನಹಳ್ಳಿಯಲ್ಲಿ 12.4 ಮಿ‌.ಮೀ ಮಳೆಯಾಗಿದೆ.

ಮಂಚೇನಹಳ್ಳಿ ಹಾಗೂ ಡಿ.ಪಾಳ್ಯ ಹೋಬಳಿ ವ್ಯಾಪ್ತಿಯಲ್ಲಿನ ಬಹುತೇಕ ಕೆರೆಗಳು ಕೋಡಿ ಬಿದ್ದಿವೆ. ಇದರಿಂದ ಹರಿದು‌ ಹೊರಬರುವ ನೀರು ಉತ್ತರ ಪಿನಾಕಿನಿ ನದಿ‌ ಸೇರಿದ ಪರಿಣಾಮವಾಗಿ ನದಿಯು ಮೈದುಂಬಿ‌ ಹರಿಯುತ್ತಿದೆ‌. ಶನಿವಾರ ಕಿಂಡಿ ಅಣೆಕಟ್ಟಿನ ಮೂಲಕ ನಗರಕ್ಕೆ ಸಮೀಪವಾಗಿ ನದಿಯಲ್ಲಿ‌ ನೀರು ಹರಿಯುತ್ತಿದ್ದು ಇದನ್ನು ನೋಡಲು ಜನರು ತಂಡೋಪತಂಡವಾಗಿ ಪಿನಾಕಿನಿ ನದಿಯತ್ತ ಬಂದರು.

ದಶಕಗಳಿಂದ ಕ್ಷೀಣಿಸಿದ್ದ ಅಂತರ್ಜಲದಿಂದ ಬತ್ತಿದ್ದ ಕೊಳವೆ ಬಾವಿಗಳಲ್ಲಿ ಹೊಸ ನೀರು ಬಂದು ಅಂತರ್ಜಲದ ಮಟ್ಟ ವೃದ್ಧಿಯಾಗಿದೆ. ಸುಮಾರು ಎರಡು ದಶಕಗಳಿಂದ ಕಾಣದ ನೀರು ಪಿನಾಕಿನಿ ನದಿಯಲ್ಲಿ ಹರಿದಿವೆ.

ಕುಂಟೆಗಳು, ಚೆಕ್ ಡ್ಯಾಂಗಳು‌, ತಗ್ಗು ಪ್ರದೇಶಗಳು ಮಳೆ ನೀರಿನಿಂದ ಆವೃತವಾಗಿವೆ. ಅಲ್ಲಲ್ಲಿ ರಸ್ತೆ ಬದಿಯಲ್ಲಿನ ಮರಗಳು ಉರುಳಿ ಬಿದ್ದಿದ್ದ ಪರಿಣಾಮವಾಗಿ ಸಂಚಾರಕ್ಕೆ ತೊಂದರೆಯಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.