ಚಿಂತಾಮಣಿ: ರಾಜ್ಯದ ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ₹100 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಇದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷ ರಘುನಾಥ್ ಹೇಳಿದರು.
ತಾಲ್ಲೂಕಿನ ಕೋನಕುಂಟ್ಲು ಗ್ರಾಮದಲ್ಲಿ ಭಾನುವಾರ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಒಂದು ತಿಂಗಳಲ್ಲಿ ₹35 ಲಕ್ಷ ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ದೇಣಿಗೆಯ ರೂಪದಲ್ಲಿ ₹100 ಕೋಟಿ ಸಂಗ್ರಹಿಸುತ್ತೇವೆ. ಬ್ರಾಹ್ಮಣ ಮಹಾಸಭದಲ್ಲಿ ₹6.5ಕೋಟಿ ಠೇವಣಿ ಇದೆ. ಇದರಿಂದ ಬರುವ ಬಡ್ಡಿಯಲ್ಲಿ ಬಡ ಬ್ರಾಹ್ಮಣರಿಗೆ ಮತ್ತು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ಈ ಹಣದಿಂದ ನೂತನ ವಿದ್ಯಾಸಂಸ್ಥೆಗಳನ್ನು ಸ್ಥಾಪನೆ ಮಾಡಿ ಸಮಾಜದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಲಾಗುವುದು. ಸಮುದಾಯಕ್ಕೆ ಸಹಕಾರಿಯಾಗುವಂತಹ ಇನ್ನೂ ಹಲವಾರು ಯೋಜನೆ ಹಮ್ಮಿಕೊಳ್ಳುವ ಇರಾದೆ ಇದೆ. ಇದಕ್ಕಾಗಿ ಬ್ಯಾಂಕಿನಲ್ಲಿ 2 ಖಾತೆ ತೆರೆಯಲಾಗಿದೆ.
ರಾಜ್ಯ ಸರ್ಕಾರ ನಡೆಸಿರುವ ಜಾತಿ ಗಣತಿಯಲ್ಲಿ ಬ್ರಾಹ್ಮಣರ ಸಂಖ್ಯೆಯನ್ನು ಸಮರ್ಪಕವಾಗಿ ನಮೂದು ಮಾಡಿಲ್ಲ. ಬ್ರಾಹ್ಮಣ ಸಮಾಜವು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸದೃಢವಾದರೆ ಮಾತ್ರ ಸಮುದಾಯವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮಹಾಸಭಾದ ಬೈಲದಲ್ಲಿ ಅನೇಕ ನ್ಯೂನತೆಗಳಿದ್ದು, ಸರಿಪಡಿಸಲು ಉಪಾಧ್ಯಕ್ಷ ಲಕ್ಷ್ಮೀಕಾಂತ್ಗೆ ಜವಾಬ್ದಾರಿ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಮಹಾಸಭಾದಲ್ಲಿ ಒಂದು ಗ್ರಂಥಾಲಯ ತೆರೆಯುವ ಚಿಂತನೆ ಇದೆ ಎಂದರು.
ಜಿಲ್ಲಾ ಪ್ರತಿನಿಧಿ ಪ್ರಕಾಶ್, ವಕೀಲ ಬಿ.ಆರ್.ಶ್ರೀನಾಥ್, ಯೋಗೀಶ್ವರ ಯಾಜ್ಞವಲ್ಕ್ಯ ಟ್ರಸ್ಟ್ ಅಧ್ಯಕ್ಷ ನಾಗರಾಜ ಮಾತನಾಡಿದರು.
ಬ್ರಾಹ್ಮಣ ಸಂಘದ ಜಿಲ್ಲ ಘಟಕದ ಅಧ್ಯಕ್ಷ ನಾಗಭೂಷಣ್, ತಾಲ್ಲೂಕು ಅಧ್ಯಕ್ಷ ಗೋಪಾಲಕೃಷ್ಣ, ವಕೀಲ ಚಂದ್ರಶೇಖರ್, ಪದಾಧಿಕಾರಿಗಳಾದ ಪುರುಷೋತ್ತಮ್, ನರಸಿಂಹಪ್ರಸಾದ್, ರಾಂಜಿಗುರು, ನರಸಿಂಹಮೂರ್ತಿ, ಮುರಳಿಕೃಷ್ಣ, ಟಿ.ಎಲ್ ಅನಂತ, ಆನಂದ್, ಟಿ.ಎಸ್.ನಾಗರಾಜ, ಮಂಜುಳ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.