ಚಿಕ್ಕಬಳ್ಳಾಪುರ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಇಡುವಂತೆ ಹೇಳಿದ್ದಾರೆ. ಅನ್ನಪೂರ್ಣೇಶ್ವರಿ ಹೆಸರಿಡುವುದು ತಪ್ಪೇನೂ ಇಲ್ಲ. ಇಂದಿರಾ ಗಾಂಧಿ, ಸೇರಿದಂತೆ ನಮ್ಮೆಲ್ಲರಿಗೂ ತಾಯಿ ಅನ್ನಪೂರ್ಣೇಶ್ವರಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ತಾಲ್ಲೂಕಿನ ನಂದಿಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಸರು ಬದಲಾವಣೆ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ಸಹ ಕೈಗೊಂಡಿಲ್ಲ ಎಂದರು.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲಿಸಿಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಹೆಸರಿಟ್ಟಿರುವುದಕ್ಕೆ ಈಗಲಾದರೂ ಭಾರತೀಯರಾದ ನಾವು ಸಂತೋಷ ಪಡಬೇಕು. ಧ್ಯಾನಚಂದ್ ಅಪ್ಪಟ ದೇಶಪ್ರೇಮಿ. ಅಂತಹವರ ಹೆಸರು ಇಟ್ಟಿರುವುದು ತಪ್ಪಾಗಿ ಕಾಣಿಸಿದರೆ ಅಂತಹವರು ಕ್ಷಮೆಗೆ ಅರ್ಹರಲ್ಲ ಎಂದು ಹೇಳಿದರು.
ಸಂಭಾವ್ಯ ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಈಗಾಗಲೇ ಕ್ರಮವಹಿಸಿದ್ದೇವೆ. ಕೇರಳ, ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ವಿಧಿಸಿದ್ದೇವೆ. ರಾಜ್ಯದಲ್ಲಿ ರಾತ್ರಿ 9ರ ನಂತರ ಕರ್ಫ್ಯೂ ಜಾರಿಗೊಳಿಸಿದ್ದೇವೆ. ಕೋವಿಡ್ ಪರೀಕ್ಷೆಗಳನ್ನು ಸಹ ಹೆಚ್ಚಿಸಿದ್ದೇವೆ. ಅಂತರರಾಜ್ಯದಿಂದ ರೈಲುಗಳ ಮೂಲಕ ರಾಜ್ಯಕ್ಕೆ ಬರುವವರ ಬಗ್ಗೆ ವಿಶೇಷ ಗಮನವಹಿಸಿದ್ದೇವೆ. ಅವರು ಕಡ್ಡಾಯವಾಗಿ ಸೋಂಕು ಪರೀಕ್ಷೆಯ ವರದಿ ತರಬೇಕು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.