
ಶಿಡ್ಲಘಟ್ಟ: ನಮ್ಮ ನಾಡು ಕರ್ನಾಟಕದ ಸಂಕೇತವಾಗಿ ಹಳದಿ ಹಾಗೂ ಕೆಂಪು ಬಣ್ಣದ ಬಾವುಟವಿದೆ. ನವೆಂಬರ್ ತಿಂಗಳು ರಾಜ್ಯದ ಎಲ್ಲೆಡೆ ಹಳದಿ, ಕೆಂಪು ಬಣ್ಣದ ಕನ್ನಡ ಧ್ವಜ ರಾರಾಜಿಸಲಿದೆ.
ಕನ್ನಡ ಲೇಖಕ ಮತ್ತು ಕನ್ನಡಪರ ಹೋರಾಟಗಾರ ಮಾ ರಾಮಮೂರ್ತಿ ಕನ್ನಡ ಪಕ್ಷ ಎಂಬ ಕನ್ನಡ ಪರ ಪಕ್ಷಕ್ಕಾಗಿ ರಚಿಸಿದ ಕೆಂಪು ಮತ್ತು ಹಳದಿ ಧ್ವಜವು 1960 ರಿಂದ ನಾಡಧ್ವಜ ಎಂಬ ಅನಧಿಕೃತ ಸ್ಥಾನಮಾನ ಹೊಂದಿತ್ತು. ಈ ಧ್ವಜಕ್ಕೆ ಅಧಿಕೃತ ಮಾನ್ಯತೆ ದೊರೆಯದಿದ್ದರೂ ಕನ್ನಡಿಗರು, ಕನ್ನಡಪರ ಹೋರಾಟಗಾರರು ಇದನ್ನು ರಾಜ್ಯದ ಹೆಮ್ಮೆಯ ಸಂಕೇತವಾಗಿ ಅಳವಡಿಸಿಕೊಂಡಿದ್ದಾರೆ.
ಕನ್ನಡದ ಬಾವುಟ ಕೇವಲ ಬಣ್ಣದ ಬಾವುಟವಲ್ಲ, ಅದು ಕನ್ನಡಿಗರ ಭಾವೈಕ್ಯದ ಸಂಕೇತ. ಚಿನ್ನದ ಬೀಡು, ರೇಷ್ಮೆಯ ನಾಡನ್ನು ಸಂಪತ್ತಿನ ಪ್ರತಿನಿಧಿಯಾಗಿ ಹಳದಿ ಬಣ್ಣ ಸೂಚಿಸಿದರೆ, ಫಲವತ್ತಾದ ಕೆಂಪು ಮಣ್ಣು, ವೀರತ್ವ, ಔದಾರ್ಯ ಮತ್ತು ಖನಿಜ ಸಂಪತ್ತನ್ನು ಕೆಂಪು ಬಣ್ಣ ಪ್ರತಿನಿಧಿಸುತ್ತದೆ.
ಈ ಧ್ವಜದ ಬಣ್ಣ ನಮ್ಮ ನಾಡಲ್ಲಿ ಎಲ್ಲೆಲ್ಲೂ ಇದೆ. ಜನಪದದಲ್ಲಿ, ಹಕ್ಕಿಯಲ್ಲಿ, ಚಿಟ್ಟೆಯಲ್ಲಿ, ಹಣ್ಣಲ್ಲಿ, ಮಗುವಿನ ಕಣ್ಣಲ್ಲಿ, ಹೂವಲ್ಲಿ...ನೋಡುವ ಕಣ್ಣು ಮತ್ತು ಮನಸ್ಸು ಕನ್ನಡವಾದರೆ, ಎಲ್ಲೆಲ್ಲಿ ನೋಡಿದರೂ ನಾಡಬಾವುಟ.
ಜನಪದ ಉತ್ಸವ, ಆಚರಣೆಗಳಲ್ಲಿ, ಹಕ್ಕಿಯಲ್ಲಿ, ಚಿಟ್ಟೆಯಲ್ಲಿ ಮೈದುಂಬಿಕೊಂಡ ಪರಿ ಕ್ಯಾಮೆರಾ ಕಣ್ಣಲ್ಲಿ ದಾಖಲಾಗಿದೆ. ಹಕ್ಕಿ, ಚಿಟ್ಟೆ, ಹೆಣ್ಣುಮಕ್ಕಳ ಜಾನಪದ ನರ್ತನದಲ್ಲಿ ಮೂಡಿ ಬಂದ ಕನ್ನಡ ಬಣ್ಣದ ಸೊಗಸಿಗೆ ಇಲ್ಲಿವೆ ಸಾಕ್ಷ್ಯಗಳು..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.