ಕನ್ನಡ ಸಾಹಿತ್ಯ ಸಮ್ಮೇಳನ
ಚಿಂತಾಮಣಿ: ಜಿಲ್ಲೆಯ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೇ 27 ಮಂಗಳವಾರ, 28 ಬುಧವಾರ ಚಿಕ್ಕಬಳ್ಳಾಪುರದ ಬೆಂಗಳೂರು ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ವಿ.ಶ್ರೀನಿವಾಸನ್ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆಯುತ್ತಿರುವ ಸಮ್ಮೇಳನವು 27 ರಂದು ಬೆಳಗ್ಗೆ ಧ್ವಜಾರೋಹಣ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆಯೊಂದಿಗೆ ಆರಂಭವಾಗಲಿದೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ರಾಷ್ಟ್ರ ಧ್ವಜಾರೋಹಣ, ಶಾಸಕ ಪ್ರದೀಪ್ ಈಶ್ವರ್ ನಾಡಧ್ವಜ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೋಡಿರಂಗಪ್ಪ ಪರಿಷತ್ತಿನ ಧ್ವಜಾರೋಹಣ ನೆರವೇರಿಸುತ್ತಾರೆ. ಅಂಬೇಡ್ಕರ್ ಭವನದ ಬಳಿ ಸಮ್ಮೇಳನದ ಸರ್ವಾಧ್ಯಕ್ಷ ಗೋಪಾಲಗೌಡ ಕಲ್ವಮಂಜಲಿ ಸಮ್ಮೇಳಾನಾಧ್ಯಕ್ಷರ ಮೆರವಣಿಗೆಗೆ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡುತ್ತಾರೆ ಎಂದರು.
ಕನ್ನಡಭವನದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಉದ್ಘಾಟನೆ ನಡೆಯಲಿದೆ. ಸಂಗಪ್ಪ ಶಿವರಾಜ ತಂಗಡಗಿ, ಸಂಸದ ಡಾ.ಕೆ.ಸುಧಾಕರ್, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸಾಹಿತಿಗಳು ಭಾಗವಹಿಸುತ್ತಾರೆ.
ಮಧ್ಯಾಹ್ನ ಸಮಸಮಾಜ ನಿರ್ಮಾಣದಲ್ಲಿ ವಚನ ಸಾಹಿತ್ಯ, ಕವಿಗೋಷ್ಠಿ ಮತ್ತು ಕನ್ನಡ ದೀಪ ಧ್ವನಿಸುರಳಿ ಬಿಡುಗಡೆ, ಸಂಜೆ ಸಂಗೀತ ನೃತ್ಯಸಂಜೆ, ರಾತ್ರಿ 7 ರಿಂದ 8.30 ರವರೆಗೆ ರಾಷ್ಟ್ರಕವಿ ಕುವೆಂಪು ವಿರಚಿತ ಮಹಾರಾತ್ರಿ ನಟಕ ಪ್ರದರ್ಶನವಿರುತ್ತದೆ ಎಂದು ಹೇಳಿದರು.
ಬುಧವಾರ ಬೆಳಗ್ಗೆ 9.30 ರಿಂದ 10.30 ರವರೆಗೆ 5ನೇ ಗೋಷ್ಠಿ ಕನ್ನಡ ಸಂಸ್ಕೃತಿಗೆ ಡಾ.ರಾಜಕುಮಾರ್ ಕೊಡುಗೆ, 10.30 ರಿಂದ 12 ಗಂಟೆಯವರೆಗೆ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸವಾಲು, ಮಧ್ಯಾಹ್ನ 12 ರಿಂದ 1.30 ರವರೆಗೆ ಕೆಳಸ್ತರದ ಹೆಣ್ಣುಮಕ್ಕಳ ಸ್ಥಿತಿಗತಿ ಮತ್ತು ಸಬಲೀಕರಣ, 2.30 ರಿಂದ 4ರವರೆಗೆ ಕನ್ನಡ ಗೀತೆಗಳ ಗಾಯನ ನಡೆಯಲಿದೆ.
ನಂತರ ಸಮ್ಮೇಳನದ ನಿರ್ಣಯ ಮಂಡನೆ, ಸಮಾರೋಪ ಸಮಾರಂಭ ಮತ್ತು ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.