ADVERTISEMENT

ಚಿಂತಾಮಣಿ: ಕುರುಟಹಳ್ಳಿ ವೀರಾಂಜನೇಯ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 5:09 IST
Last Updated 3 ಫೆಬ್ರುವರಿ 2026, 5:09 IST
ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿಯಲ್ಲಿ ಭಾನುವಾರ ನಡೆದ ವೀರಾಂಜನೇಯ ರಥೋತ್ಸವ
ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿಯಲ್ಲಿ ಭಾನುವಾರ ನಡೆದ ವೀರಾಂಜನೇಯ ರಥೋತ್ಸವ   

ಚಿಂತಾಮಣಿ: ತಾಲ್ಲೂಕಿನ ಕುರುಟಹಳ್ಳಿಯಲ್ಲಿ ನೆಲೆಸಿರುವ ವೀರಾಂಜನೇಯ ರಥೋತ್ಸವವು ಭಾನುವಾರ ವಿಜೃಂಭಣೆ ಹಾಗೂ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ದೇವಾಲಯದಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆಗಳು ನಡೆದವು. ಬೆಳಗ್ಗೆ ಕಲಶಾರಾಧನೆ, ಅಭಿಷೇಕ, ಹೋಮ, ಅಷ್ಟಾವಧಾನ ಸೇವೆ, ಪೂರ್ಣಾಹುತಿ, ಬಲಿಹರಣ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮಧ್ಯಾಹ್ನ 1.30ಕ್ಕೆ ರಾಮಚಂದ್ರ ಸಮೇತ ಹನುಮಂತನ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾಗಿ ಕರೆತಂದು ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು.

ಅರ್ಚಕವೃಂದದವರು ರಥದಲ್ಲಿ ಮತ್ತೊಮ್ಮೆ ಅಲಂಕಾರ ಪೂಜೆ ನೆರವೇರಿಸಿದರು. ವಿಜಯಪುರದ ಬಸವ ಮಠದ ಮಹದೇವ ಮತ್ತು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಂ ರಥೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತರು ರಥ ಎಳೆದರು.

ADVERTISEMENT

ಗ್ರಾಮದ ಪ್ರತಿ ಮನೆಯವರು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು. ನೂರಾರು ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ರಥವನ್ನು ಕಣ್ತುಂಬಿಕೊಂಡರು. ರಥಕ್ಕೆ ಧವನ, ಬಾಳೆಹಣ್ಣನ್ನು ಸಮರ್ಪಿಸಿದರು.

ಅನೇಕ ಜಾನಪದ ಕಲಾತಂಡಗಳು ರಥೋತ್ಸವಕ್ಕೆ ಮೆರಗು ನೀಡಿದವು. ನಾಡಿನ ಜಾನಪದ ಸಂಸ್ಕೃತಿ ಪ್ರತಿಬಿಂಬಿಸುವ ತಮಟೆ, ಕೋಲಾಟ, ಗಾರುಡಿಗೊಂಬೆ ಕುಣಿತ, ಪೂಜಾ ಕುಣಿತ ಸೇರಿದಂತೆ ಹಲವಾರು ತಂಡಗಳು ಸಾರ್ವಜನಿಕರಿಗೆ ರಸದೌತಣ ನೀಡಿದವು.

ಗ್ರಾಮದ ಮತ್ತು ಸುತ್ತಮುತ್ತಲ ಗ್ರಾಮದವರು ಟ್ರ್ಯಾಕ್ಟರ್‌ಗಳಲ್ಲಿ ತಂದು ಪಾನಕ, ಕೋಸುಂಬರಿ, ಮಜ್ಜಿಗೆ ವಿತರಿಸಲಾಯಿತು. 

ನಗರ ಹಾಗೂ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಆಗಮಿಸಿದ್ದರು. ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಜನರು ವೀರಾಂಜನೇಯ ದರ್ಶನ ಪಡೆಯುತ್ತಿದ್ದರು.

ಬೆಳಗ್ಗೆ ಚಿಂತಾಮಣಿಯ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ಗಾಯನ, ಜನಪದ ಕಲಾವಿದ ಜಿ.ಮುನಿರೆಡ್ಡಿ ಕಾರ್ಯಕ್ರಮ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾತ್ರಿ ಗ್ರಾಮಸ್ಥರಿಂದ ದಾನ, ಶೂರ, ವೀರ ಕರ್ಣ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.

ದೇವಾಲಯದ ಟ್ರಸ್ಟ್ ಅಧ್ಯಕ್ಷ ರಾಧಾಕೃಷ್ಣ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಕುರುಟಹಳ್ಳಿ ವೀರಾಂಜನೇಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.