
ಚಿಕ್ಕಬಳ್ಳಾಪುರ: ನಗರದ ಕನ್ನಡ ಭವನದಲ್ಲಿ ರಂಗ ಕಹಳೆ ಸಂಸ್ಥೆಯು ಹಮ್ಮಿಕೊಂಡಿದ್ದ ಕುವೆಂಪು ನಾಟಕೋತ್ಸದ ಸಮಾರೋಪ ಸೋಮವಾರ ನಡೆಯಿತು. ‘ಶೂದ್ರ ತಪಸ್ವಿ’ ನಾಟಕ ಪ್ರದರ್ಶನದೊಂದಿಗೆ ನಾಟಕೋತ್ಸವಕ್ಕೆ ತೆರೆ ಬಿದ್ದಿತು.
ಸಮಾರೋಪದಲ್ಲಿ ಮಾತನಾಡಿದ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಕನ್ನಡ ರಂಗಭೂಮಿಗೆ ತನ್ನದೇ ಆದ ಶಕ್ತಿ ಇದೆ. ಪ್ರಪಂಚದಲ್ಲಿ ಯಾವ ಭೂಮಿಯಲ್ಲಿ ಹುಟ್ಟದಷ್ಟು ಸಂತರು, ದಾರ್ಶನಿಕರು, ತತ್ವಪದಕಾರರು, ಶರಣರು, ಜ್ಞಾನಿಗಳು ಕನ್ನಡ ನಾಡಿನಲ್ಲಿ ಹುಟ್ಟಿದ್ದಾರೆ ಎಂದರು.
ಮಹಾನ್ ಮೇರು ವ್ಯಕ್ತಿತ್ವದ ಹೆಸರಿನಲ್ಲಿ ನಡೆಯುತ್ತಿರುವ ಈ ನಾಟಕೋತ್ಸವ ಪ್ರಮುಖವಾದುದು. ಬಾಲ್ಯದಿಂದ ಇಲ್ಲಿಯವರೆಗೆ ನಮ್ಮ ಮನಸ್ಸಿನ ಪಟಲದಲ್ಲಿ ಕುವೆಂಪು ಅವರು ಆಗಾಗ್ಗೆ ಬಂದು ಹೋಗುತ್ತಾರೆ. ಅವರು ವಿಶ್ವಮಾನವ ಧರ್ಮವನ್ನು ಹುಟ್ಟು ಹಾಕಿದರು ಎಂದು ಪ್ರಶಂಸಿಸಿದರು.
ಕುವೆಂಪು ಅವರು ನಮ್ಮ ಅಸ್ಮಿತೆ ಮತ್ತು ಮಾರ್ಗದರ್ಶಕರು. ಅವರ ಅನೇಕ ನಾಟಕಗಳ ಶೀರ್ಷಿಕೆಯನ್ನು ನೋಡಿದರೆ ಅವು ಬಿತ್ತನೆಯ ಬೀಜಗಳು. ಕುವೆಂಪು ವಿಶ್ವಮಾನವ ಸಂದೇಶವನ್ನು ನಾವು ಮಕ್ಕಳಿಗೆ ಹೇಳಬೇಕಾಗಿದೆ ಎಂದರು.
ಮಂಗಳನಾಥ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ, ನಾಟಕೋತ್ಸವದ ಸಂಚಾಲಕ ಓಹಿಲೇಶ್ ಲಕ್ಷ್ಮಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.