ಬಾಗೇಪಲ್ಲಿ: ಪಟ್ಟಣದ ಬಹುತೇಕರು ಕೃಷಿಕೂಲಿಕಾರ್ಮಿಕರು ವಾಸಿಸುವ 1ನೇ ವಾರ್ಡ್ನ ಶಿರಿಡಿಸಾಯಿಬಾಬಾ ಮಂದಿರದ ಪಕ್ಕದ ಬಡಾವಣೆ ಸುಗಮವಾದ ರಸ್ತೆ, ಚರಂಡಿಗಳು ಹಾಗೂ ಸಂಚಾರದ ವ್ಯವಸ್ಥೆ ಇಲ್ಲದೇ ಕನಿಷ್ಠ ಮೂಲಸೌಲಭ್ಯಗಳಿಂದ ವಂಚಿತವಾಗಿದೆ.
ವಾರ್ಡ್ನಲ್ಲಿ 1,350 ಮತದಾರರು ಇದ್ದಾರೆ. 2,200 ಮಂದಿ ವಾಸವಾಗಿದ್ದಾರೆ. ಪಟ್ಟಣದ 23 ವಾರ್ಡ್ಗಳ ಪೈಕಿ 1ನೇ ವಾರ್ಡ್ ವಿಸ್ತೀರ್ಣದಲ್ಲಿ ಹೆಚ್ಚಾಗಿದೆ. 2005ರಲ್ಲಿ ಪುರಸಭೆಯಿಂದ ನಿವೇಶನರಹಿತರಿಗೆ ಉಚಿತವಾಗಿ ನಿವೇಶನಗಳನ್ನು ಹಂಚಿದ್ದಾರೆ. 13 ವರ್ಷಗಳು ಕಳೆದರೂ ಕನಿಷ್ಠ ಸೌಲಭ್ಯಗಳನ್ನು ನೀಡಿಲ್ಲ ಎಂಬುದು ನಿವಾಸಿಗಳು ಆರೋಪವಾಗಿದೆ.
ಮೂಲತಃ ಈ ಜಮೀನು ಪರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವಾಸಿಗಳು ಕಂದಾಯವನ್ನು ಕಟ್ಟುತ್ತಿದ್ದಾರೆ. ಪುರಸಭಾದ ಚುನಾವಣೆಯಲ್ಲಿ ಮತ ಹಾಕುತ್ತಿದ್ದಾರೆ. ಇದರಿಂದ ಅತ್ತ ಪರಗೋಡು ಗ್ರಾಮ ಪಂಚಾಯಿತಿಯವರಾಗಲಿ, ಇತ್ತ ಪುರಸಭೆಯವರಾಗಲಿ ಇಲ್ಲಿನ ನಿವಾಸಿಗಳಿಗೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಿಲ್ಲ. ನಿವೇಶನ ಪಡೆದ ನಿವೇಶನಗಳಲ್ಲಿ ಕೆಲವರು ಸಾಲ ಮಾಡಿಕೊಂಡು, ಕೆಲವರು ಆಸ್ತಿಗಳನ್ನು, ಒಡವೆ ಮಾರಿಕೊಂಡು ಮನೆಗಳನ್ನು ಕಟ್ಟಿಕೊಂಡಿದ್ದಾರೆ.
ಅನುದಾನ ಬಂದ ಮೇಲೆ ಸೌಲಭ್ಯ: ‘ಪುರಸಭಾದ ವಿಶೇಷ ಯೋಜನೆಯ ಅನುದಾನದಲ್ಲಿ ಬಡಾವಣೆಯ ಜನರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಯೋಜನೆ ಮಾಡಲಾಗಿದೆ. ಅನುದಾನ ಬಂದ ಕೂಡಲೇ ಮೊದಲ ಆದ್ಯತೆ ನೀಡಲಾಗುವುದು. ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ, ಪೈಪ್ ಲೈನ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಿಸಲಾಗುವುದು. ಸುಗಮ ಸಂಚಾರಕ್ಕೆ ರಸ್ತೆ, ಬೀದಿದೀಪಗಳನ್ನು ಹಾಕಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಪಂಕಜಾರೆಡ್ಡಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.