ಶಿಡ್ಲಘಟ್ಟ: ಶಿಡ್ಲಘಟ್ಟದಲ್ಲಿ ಓದಿ, ಬೆಳೆದು ಬೆಂಗಳೂರಿನ ವಾಹನ ಸಂಚಾರ ವ್ಯವಸ್ಥೆಯ ಯೋಜನಾ ಸಂಚಾಲಕರಾಗಿದ್ದ ಎಚ್.ಎಲ್.ಶಶಿಧರ್ ಈಗ ನ್ಯೂಜಿಲೆಂಡ್ ದೇಶದ ಆಕ್ಲೆಂಡ್ ನಗರದಲ್ಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಅವರು ಅಲ್ಲಿನ ಸ್ಥಿತಿಗತಿಗಳ ಕುರಿತು ಕೆಲವು ಸಂಗತಿಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.
ನ್ಯೂಜಿಲೆಂಡ್ ದೇಶದಲ್ಲಿ ಈಗ 1,386 ಜನ ಸೋಂಕಿತರಿದ್ದಾರೆ. 15 ಜನ ಆಸ್ಪತ್ರೆಯಲ್ಲಿದ್ದಾರೆ. ಅವರಲ್ಲಿ 5 ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. ಇದುವರೆಗೂ ಈ ದೇಶದಲ್ಲಿ 58,746 ಪರೀಕ್ಷೆಗಳನ್ನು ನಡೆಸಲಾಗಿದೆ. ದಿನಕ್ಕೆ ಮೂರರಿಂದ ನಾಲ್ಕು ಸಾವಿರ ಟೆಸ್ಟ್ಗಳನ್ನು ಮಾಡುತ್ತಿದ್ದಾರೆ. ನಾಲ್ಕು ಮಂದಿ ವೃದ್ಧರು ಈ ರೋಗದಿಂದ ಮೃತಪಟ್ಟಿದ್ದಾರೆ.
ಎರಡು ವಾರಗಳಿಂದ ನಾವೆಲ್ಲರೂ ಮನೆಗಳಲ್ಲಿಯೇ ಇದ್ದೇವೆ. ನಿತ್ಯ ಉಪಯೋಗಿ ದಿನಸಿ ವಸ್ತುಗಳನ್ನು ತರಲು ಎರಡು ಮೂರು ಬಾರಿ ಮಾತ್ರ ನಾನು ಹೊರಗೆ ಹೋಗಿದ್ದೆನಷ್ಟೆ. ಲಾಕ್ಡೌನ್ಗೆ ಮುಂಚೆ ಭಾರತೀಯ ದಿನಸಿ ವಸ್ತುಗಳು ಸಿಗುವ ಅಂಗಡಿಗೆ ಹೋಗಿದ್ದೆ. ನಾವು ತಿನ್ನುವ ಸೋನಾ ಮಸೂರಿ, ಆಂಧ್ರ ಪೊನಿ ಎಂಬ ಅಕ್ಕಿ ಖಾಲಿಯಾಗಿತ್ತು ಎಂದು ಹೇಳಿದರು.
ಸೂಪರ್ ಮಾರ್ಕೆಟ್ಗಳು ಮಾತ್ರ ತೆರೆದಿವೆ. ಅಲ್ಲಿ ಎರಡು ಮೀಟರ್ ಅಂತರ ಕಾಯ್ದುಕೊಂಡೇ ನಿಂತ ದೊಡ್ಡ ಸಾಲುಗಳಿರುತ್ತವೆ. ನಾನು ಮತ್ತು ನನ್ನ ಹೆಂಡತಿ ಮನೆಯಿಂದಲೇ ಕಚೇರಿಯ ಕೆಲಸ ಮಾಡುತ್ತಿದ್ದೇವೆ. ಮಕ್ಕಳಿಗೂ ಆನ್ ಲೈನ್ ಮೂಲಕವೇ ಪಾಠ ನಡೆಯುತ್ತಿದೆ ಎಂದು ತಿಳಿಸಿದರು.
ಸೋನಾ ಮಸೂರಿ, ತೊಗರಿಬೇಳೆ, ಉದ್ದಿನಬೇಳೆ ಖಾಲಿಯಾಗಿವೆ. ಭಾರತ, ಮಲೇಶಿಯಾ, ಸಿಂಗಾಪೂರ್ ಕಡೆಯಿಂದ ಯಾವುದೇ ಸರಕು ಸಾಗಣೆ ಈ ಕಡೆಗೆ ಬರುತ್ತಿಲ್ಲ. ಅಕಸ್ಮಾತ್ ಬಂದರೂ ಸಾಮಾನು ಸರಂಜಾಮು ಇಳಿಸಿಕೊಳ್ಳಲು ಜನವಿಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.