ಚಿಂತಾಮಣಿ: ಕರ್ನಾಟಕ ಪ್ರದೇಶ ಬಲಿಜ ಸಂಘದಿಂದ ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳಿಗೆ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಔಷಧಿ, ಆಮ್ಲಜನಕ ಸಾಂದ್ರಕ ಮತ್ತಿತರ ಪರಿಕರಗಳನ್ನು ನೀಡುತ್ತಿರುವುದಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಔಷಧಿ ಮತ್ತು ಆರೋಗ್ಯ ಪರಿಕರಗಳನ್ನು ತಾಲ್ಲೂಕು ವೈದ್ಯಾಧಿಕಾರಿಗೆ ಹಸ್ತಾಂತರಿಸಿ ಮಾತನಾಡಿದರು.
ಕೋವಿಡ್ ಮೊದಲನೇ ಅಲೆಯ ಸಮಯದಲ್ಲಿ ಕಿಟ್ಗಳನ್ನು ನೀಡುತ್ತಿದ್ದೆವು. ಆಸ್ಪತ್ರೆಗಳಿಗೆ ಅವಶ್ಯಕತೆ ಇರುವ ಕಡೆ ಆಮ್ಲಜನಕ ಸಾಂದ್ರಕ, ವಿಟಮಿನ್-ಸಿ, ಮಲ್ಟಿಮೀಟರ್ ವಿಶೇಷವಾಗಿ ಮಕ್ಕಳಿಗೆ ಜಿಂಕೋವಿಟ್ ಸಿರಫ್ ರೋಗನಿರೋದಕ ಶಕ್ತಿ ವೃದ್ಧಿಸುವಂತಹ ಔಷಧಿಗಳನ್ನು ನೀಡಲಾಗುತ್ತಿದೆ ಎಂದರು.
ಕೆಲವೊಂದು ಕಡೆ ಆಮ್ಲಜನಕ ಕೊರತೆಯಿಂದ ತೊಂದರೆಯಾಗುತ್ತಿದೆ ಎಂದು ಆಮ್ಲಜನಕ ಸಾಂದ್ರಕ ನೀಡಲಾಗುತ್ತಿದೆ. ಯಾವುದೇ ರೀತಿಯ ಸಿಲಿಂಡರ್ ಸಂಪರ್ಕವಿಲ್ಲದೆ ಇದ್ದ ಕಡೆಯಲ್ಲಿ ಗಾಳಿಯಿಂದ ಆಮ್ಲಜನಕವನ್ನು ಉತ್ಪತ್ತಿ ಮಾಡಿಕೊಂಡು ಸೊಂಕಿತರಿಗೆ ನೀಡುವ ಮೂಲಕ ಆರೋಗ್ಯ ಕಾಪಾಡುತ್ತದೆ ಎಂದು ತಿಳಿಸಿದರು.
ತಾಲ್ಲೂಕು ಬಲಿಜ ಜನಾಂಗ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಿನಾರಾಯಣ ರೆಡ್ಡಿ ಮಾತನಾಡಿ, ಈಗಾಗಲೇ ಹಲವಾರು ಸಂಘಗಳಿಂದ ಆಸ್ಪತ್ರೆಗೆ ಬೇಕಾಗಿರುವ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಇಂತಹ ಸಮಯದಲ್ಲಿ ಮಾಡುವ ಧಾನ ಧರ್ಮಕ್ಕೆ ಬೆಲೆ ಕಟ್ಟಲಾಗದು. ಇತರೆ ಸಂಘಸಂಸ್ಥೆಗಳು ಸಹ ಉದಾರವಾಗಿ ಸಹಾಯ ಮಾಡಬೇಕು. ಸರ್ಕಾರದ ನಿಯಮಗಳನ್ನು ತಪ್ಪದೇ ಪಾಲನೆ ಮಾಡಬೇಕು ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ ಪರಿಕರ ಮತ್ತು ಔಷಧಿಗಳನ್ನು ಸ್ವೀಕರಿಸಿ ಸಂಘ ಹಾಗೂ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.
ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್, ಆನೇಕಲ್ ತಿಮ್ಮಯ್ಯ ಚಾರಿಟಬಲ್ ಟ್ರಸ್ಟಿ ದಿವಾಕರ್, ಕರ್ನಾಟಕ ಪ್ರದೇಶ ಬಲಿಜ ಸಂಘದ ನಿರ್ದೇಶಕ ಸತ್ಯನಾರಾಯಣ, ದೇವಳಂ ಶಂಕರ್, ಮಂಜುನಾಥ್, ವೆಂಕಟೇಶ್, ತಾಲ್ಲೂಕು ಸಂಘದ ಉಪಾಧ್ಯಕ್ಷ ಕಾಗತಿ ಮಧು, ಕಾರ್ಯದರ್ಶಿ ಕುಂಟಿಗಡ್ಡೆ ಲಕ್ಷ್ಮಣ್, ಕುಂಟಿಗಡ್ಡೆ ಶಿವಣ್ಣ, ಕೈವಾರ ಶ್ರೀನಿವಾಸನ್, ಚಲಂ, ಕಾಗತಿ ಗ್ರಾಮ ಪಂಚಾಯಿತಿ ಸದಸ್ಯೆ ರಾಧಿಕಾ ಮಧು, ಸಮುದಾಯದ ಎಸ್.ವಿ.ವೆಂಕಟೇಶ್, ಗೋವಿಂದ, ಚಂದ್ರಮೋಹನ್ ಗಾಂಧಿ, ಎ.ಪಿ.ಎಂ.ಸಿ ಚಲಪತಿ, ಪಟಾಕಿ ಮುನಿಶಾಮಿ, ಚೊಕ್ಕಹಳ್ಳಿ ರವಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.