ADVERTISEMENT

ಮುರುಗಮಲ್ಲ ದರ್ಗಾ ಆಧುನೀಕರಣಕ್ಕೆ ₹65 ಕೋಟಿ ಯೋಜನೆ: ಡಾ.ಎಂ.ಸಿ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 6:29 IST
Last Updated 8 ಸೆಪ್ಟೆಂಬರ್ 2025, 6:29 IST
<div class="paragraphs"><p>ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಗ್ರಾಮದ ದರ್ಗಾಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹ್ಮದ್‌ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು</p></div>

ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಗ್ರಾಮದ ದರ್ಗಾಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹ್ಮದ್‌ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು

   

ಚಿಂತಾಮಣಿ: ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಾಜಾನ್, ಬಾವಾಜಾನ್ ದರ್ಗಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ₹65 ಕೋಟಿ ವೆಚ್ಚದ ವಿಸ್ತೃತ ಯೋಜನೆ ರೂಪಿಸಲಾಗಿದ್ದು, ಈ ವರ್ಷ ₹32 ಕೋಟಿ ಮಂಜೂರಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ತಾಲ್ಲೂಕಿನ ಮುರುಗಮಲ್ಲ ಗ್ರಾಮದಲ್ಲಿ ನಡೆಯುತ್ತಿರುವ ಉರುಸ್ ಅಂಗವಾಗಿ ಭಾನುವಾರ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.

ADVERTISEMENT

ಮಕ್ಕಾ-ಮದೀನ ಮಾದರಿಯಲ್ಲಿ ಆಧುನಿಕ ಶೈಲಿ, ವಿನ್ಯಾಸದ ನೀಲ ನಕ್ಷೆ ಸಿದ್ಧಪಡಿಸಲಾಗಿದೆ. ಯೋಜನೆಯ ಮಾಹಿತಿಯನ್ನು ಸಾಕ್ಷ್ಯಚಿತ್ರದ ಮೂಲಕ ಮುಖಂಡರಿಗೆ ತೋರಿಸಿ ನಕ್ಷೆ ತಯಾರಿಸಲಾಗಿದೆ. ಮೊದಲ ಕಂತಿನಲ್ಲಿ ₹32 ಕೋಟಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ. ಶೀಘ್ರದಲ್ಲೇ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.

‘ದರ್ಗಾವನ್ನು ಅಭಿವೃದ್ಧಿಪಡಿಸಬೇಕು ಎಂದು ಬಹಳ ವರ್ಷಗಳ ಹಿಂದೆಯೇ ಕನಸು ಕಂಡಿದ್ದೆ. ರಾಜಕೀಯ ಹಿನ್ನಡೆ ಕಂಡಿದ್ದರಿಂದ 10 ವರ್ಷ ಕಳೆದು ಹೋಯಿತು. ಈ ಬಾರಿ ಶಾಸಕನಾದ ಕೂಡಲೇ ಕಾರ್ಯೋನ್ಮುಖನಾಗಿ ಸಚಿವ ಜಮೀರ್ ಅಹ್ಮದ್ ಖಾನ್, ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಮತ್ತಿತರ ಸಹಕಾರದಿಂದ ಅಂತರರಾಷ್ಟ್ರೀಯ ಮಟ್ಟದ ದರ್ಗಾ ರೂಪಿಸಲು ಸತತವಾಗಿ ಪ್ರಯತ್ನಿಸಿ ಸರ್ಕಾರದಿಂದ ಮಂಜೂರಾತಿ ಮಾಡಿಸಿದ್ದೇನೆ’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಮಾತನಾಡಿ, ರಾಜ್ಯದ ಯಾವ ಭಾಗದ ದರ್ಗಾಗೂ ಇಷ್ಟೊಂದು ದೊಡ್ಡಮಟ್ಟದ ಅನುದಾನ ಹಿಂದೆ ಮಂಜೂರಾಗಿಲ್ಲ, ಮುಂದೆ ಮಂಜೂರಾಗುವುದು ಕಷ್ಟ. ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಪ್ರಯತ್ನ ಗಮನಿಸಿ ಮಂಜೂರಾತಿ ನೀಡಲಾಗಿದೆ. ಅವರಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಮಹ್ಮದ್ ಅನೀಫ್, ಗಂಡ್ರಗಾನಹಳ್ಳಿ ಶ್ರೀರಾಮರೆಡ್ಡಿ, ಅನ್ಸರ್ ಖಾನ್, ರಾಜಣ್ಣ, ಮೂರ್ತಿ, ಶಂಕರಪ್ಪ, ಸುಹೇಲ್ ಅಹ್ಮದ್, ಅಮಾನುಲ್ಲಾ, ಜಬೀವುಲ್ಲಾ, ಆರೀಫ್ ಖಾನ್, ಅಲ್ಲಾಬಕಾಶ್, ನಜೀರ್, ಅಮೀರ್ ಖಾನ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.