ADVERTISEMENT

ಶಿಡ್ಲಘಟ್ಟ: ಮೈನಾ ಹಕ್ಕಿಗಳ ನಿಗೂಢ ಸಾವು, ಕಾಗೆಗಳ ಕಣ್ಮರೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 1:16 IST
Last Updated 18 ಫೆಬ್ರುವರಿ 2022, 1:16 IST
ಶಿಡ್ಲಘಟ್ಟ ತಾಲ್ಲೂಕಿನ ರಾಯಪ್ಪನಹಳ್ಳಿಯಲ್ಲಿ ಮೃತಪಟ್ಟಿರುವ ಮೈನಾ ಹಕ್ಕಿಗಳು
ಶಿಡ್ಲಘಟ್ಟ ತಾಲ್ಲೂಕಿನ ರಾಯಪ್ಪನಹಳ್ಳಿಯಲ್ಲಿ ಮೃತಪಟ್ಟಿರುವ ಮೈನಾ ಹಕ್ಕಿಗಳು   

ಶಿಡ್ಲಘಟ್ಟ: ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಪ್ಪನಹಳ್ಳಿಯಲ್ಲಿ ಸುಮಾರು ಮೂರು ನಾಲ್ಕು ಕಡೆ ಏಳೆಂಟು ಮೈನಾ ಹಕ್ಕಿಗಳು ನಿಗೂಢವಾಗಿ ಸಾವನ್ನಪ್ಪಿವೆ.

ಹತ್ತಿರದಲ್ಲಿ ಯಾವುದೇ ವಿದ್ಯುತ್ ತಂತಿಗಳಿಲ್ಲ, ಹಕ್ಕಿಗಳನ್ನು ಬೇಟೆಯಾಡಿರುವ ಕುರುಹುಗಳಾಗಲೀ ಇಲ್ಲ. ಆಕಸ್ಮಾತ್ ಯಾವುದಾದರೂ ವೈರಸ್ ರೋಗದಿಂದ ಇವು ಮೃತಪಟ್ಟಿವೆಯಾ, ಇವುಗಳಿಗೆ ಅಕಸ್ಮಾತ್ ವೈರಸ್ ತಗುಲಿದ್ದರೆ, ಅದು ಮನುಷ್ಯರಿಗೆ ಹರಡಬಹುದಾ ಎಂಬುದನ್ನು ತಜ್ಞರು ತಿಳಿಯಪಡಿಸಬೇಕಿದೆ. ಕೇವಲ ಮೈನಾ (ಗೊರವಂಕ) ಹಕ್ಕಿಗಳೇ ಏಕೆ ಸಾಯುತ್ತಿವೆ ಎಂಬುದನ್ನು ಸಹ ತಿಳಿಯಬೇಕಿದೆ.

ರಾಯಪ್ಪನಹಳ್ಳಿಯಲ್ಲಿ ಗ್ರಾಮದ ಸತ್ತಿ ರೆಡ್ಡಿ ಅವರು ಈ ಹಕ್ಕಿಗಳು ಸತ್ತಿರುವುದನ್ನು ಕಂಡು ಒಂದೆರಡು ಕಡೆ ಮಣ್ಣು ಮುಚ್ಚಿದ್ದಾರೆ. ಅವರು ಈ ಹಕ್ಕಿಗಳ ನಿಗೂಢ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿರುವುದಲ್ಲದೆ, ಕಳೆದ ಒಂದೆರಡು ತಿಂಗಳಿನಿಂದ ಈ ಭಾಗದಲ್ಲಿ ಶೇ 80 ರಷ್ಟು ಕಾಗೆಗಳು ಕಣ್ಮರೆಯಾಗಿವೆ ಎಂಬ ಮತ್ತೊಂದು ಆತಂಕದ ಸಂಗತಿಯನ್ನು ಸಹ ತಿಳಿಸಿದ್ದಾರೆ.

ADVERTISEMENT

ಈ ಬಗ್ಗೆ ಪಶುವೈದ್ಯಕೀಯ ಸಹಾಯಕ ನಿರ್ದೇಶಕ ಡಾ.ಬಿ.ಕೆ.ರಮೇಶ್ ಅವರನ್ನು ಕೇಳಿದಾಗ ಅವರು, ‘ಹಕ್ಕಿಗಳು ಮೃತಪಟ್ಟಿರುವ ಚಿತ್ರಗಳನ್ನು ಗಮನಿಸಿದಾಗ ಅವು ತೋಟಗಳ ಪಕ್ಕದಲ್ಲಿ ಸತ್ತಿವೆ. ಬಹುಶಃ ಕೀಟನಾಶಕಗಳ ಸೇವನೆಯಿಂದ ಸತ್ತಿರಬಹುದು ಎನ್ನಿಸುತ್ತದೆ. ವೈರಲ್ ಇನ್ ಫ್ಲುಯೆನ್ಜಾಕಾಯಿಲೆಯಿಂದಲೂ ಸತ್ತಿರಬಹುದು. ಈ ವೈರಲ್ಕಾಯಿಲೆ ಮನುಷ್ಯರಿಗೆ ಹರಡುವುದಿಲ್ಲ. ಹೆಬ್ಬಾಳದ ಬಳಿ ಇರುವ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ನಾಳೆ ಮೂರು ಮೃತಪಟ್ಟಿರುವ ಹಕ್ಕಿಗಳನ್ನು ಕಳಿಸಿ ಅಲ್ಲಿಂದ ವರದಿಯನ್ನು ಪಡೆಯಲಾಗುವುದು. ಕಣ್ಮರೆಯಾಗಿರುವ ಕಾಗೆಗಳ ಬಗ್ಗೆಯೂ ನಮ್ಮ ಇಲಾಖೆಯ ವೈದ್ಯರು ಸ್ಥಳೀಯರೊಂದಿಗೆ ಮಾತನಾಡಿ ಮಾಹಿತಿ ಪಡೆಯುವರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.