ಚಿಕ್ಕಬಳ್ಳಾಪುರ: ನಂದಿಬೆಟ್ಟಕ್ಕೆ ಭಾನುವಾರ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದರು. ಇದರಿಂದ ಕಿಲೋಮೀಟರ್ಗಟ್ಟಲೆ ಸಂಚಾರ ದಟ್ಟಣೆ ಉಂಟಾಯಿತು. ನಿಯಂತ್ರಿಸಲು ಸಾಧ್ಯವಾಗದಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ ಕಾರಣ ಟಿಕೆಟ್ ಕೌಂಟರ್ಗಳ ಮುಂದೆ ದಟ್ಟಣೆ ಹೆಚ್ಚಿತ್ತು.
ಬೆಳ್ಳಂಬೆಳಗ್ಗೆ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ನಂದಿ ಬೆಟ್ಟಕ್ಕೆ ಬಂದ ಕಾರಣ ಬೆಟ್ಟದಲ್ಲಿ ಕಿ.ಮೀ ಗಟ್ಟಲೇ ವಾಹನಗಳು ನಿಂತಲ್ಲೇ ನಿಂತಿದ್ದವು. ಪ್ರವೇಶಕ್ಕೆ ಟಿಕೆಟ್ ವಿತರಿಸುವಲ್ಲಿ ಅವ್ಯವಸ್ಥೆ ಉಂಟಾಯಿತು. ಟಿಕೆಟ್ ಪಡೆಯಲು ಪ್ರವಾಸಿಗರು ಮುಗಿಬಿದ್ದರು.
ಸಾವಿರಾರು ಪ್ರವಾಸಿಗರಿಗೆ ಎರಡೇ ಕೌಂಟರ್ನಲ್ಲಿ ಮಾತ್ರ ಟಿಕೆಟ್ ವಿತರಿಸಲಾಯಿತು. ಮಳೆ ಲೆಕ್ಕಿಸದೆ ಟಿಕೆಟ್ಗಾಗಿ ಮಹಿಳೆಯರು, ಮಕ್ಕಳು, ಯುವ ಸಮುದಾಯ ಸಾಲುಗಟ್ಟಿತ್ತು. ಗಿರಿಧಾಮದಲ್ಲಿನ ಈ ಅವ್ಯವಸ್ಥೆ ಬಗ್ಗೆ ಪ್ರವಾಸಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಮತ್ತು ಭಾನುವಾರ ನಂದಿ ಗಿರಿಧಾಮ ಮತ್ತು ಈಶಾ ಯೋಗ ಕೇಂದ್ರಕ್ಕೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರಾಂತ್ಯದ ದಿನಗಳಲ್ಲಿ ಗಿರಿಧಾಮದಲ್ಲಿ ಸಂಚಾರ ದಟ್ಟಣೆ ಸಾಮಾನ್ಯ ಎನ್ನುವಂತೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.