
ಚಿಂತಾಮಣಿ: ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದ ಸಂಕೀರ್ಣದಲ್ಲಿ ಮಾರ್ಚ್ 14ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗುವುದು ಎಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ವಿ. ಕಾಂತರಾಜು ತಿಳಿಸಿದರು.
ನ್ಯಾಯಾಲಯದ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಸಾರ್ವಜನಿಕರು ಮತ್ತು ಕಕ್ಷಿದಾರರು ತಮ್ಮ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ’ ಎಂದು ಹೇಳಿದರು.
ಲೋಕ ಅದಾಲತ್ನಲ್ಲಿ ಚೆಕ್ ಬೌನ್ಸ್, ವಿವಾಹ ಹಾಗೂ ಕೌಟುಂಬಿಕ ವಿವಾದ, ಆಸ್ತಿ ವಿಭಜನೆ ಪ್ರಕರಣ, ಜನನ ಮತ್ತು ಮರಣ ನೋಂದಣಿಗೆ ಸಂಬಂಧಿಸಿದ ಪ್ರಕರಣ, ರಸ್ತೆ ಸುರಕ್ಷತಾ ಲಘು ಪ್ರಕರಣಗಳು ಸೇರಿದಂತೆ ಇತರೆ ರಾಜಿ ಆಗಬಲ್ಲ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು ಎಂದರು.
ಮಧ್ಯಸ್ಥಿಕೆದಾರರು ಎರಡೂ ಕಡೆಯ ಕಕ್ಷಿದಾರರನ್ನು ಮನವೊಲಿಸಿ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಗೊಳಿಸಲು ಶ್ರಮಿಸಬೇಕು ಎಂದು ವಕೀಲರು ಮತ್ತು ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆಯಿಂದ ಪೋಕ್ಸೊ ಪ್ರಕರಣಗಳು ಹೆಚ್ಚುತ್ತಿವೆ. 15-16 ವರ್ಷದ ಬಾಲಕಿಯರು ಗರ್ಭಿಣಿಯರಾಗುತ್ತಿರುವುದು ಗಂಭೀರ ವಿಚಾರ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ. ಗೀತಾಂಜಲಿ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಹರ್ಷಿತ, ಸಹಾಯಕ ಅಭಿಯೋಜಕಿ ಎನ್. ಅನುರಾಧ, ಬಿ.ಶ್ರೀನಿವಾಸ, ಜಿ. ಶಿವಾನಂದ, ಶ್ರೀನಾಥ, ಕೆ.ಎನ್. ಮಂಜುನಾಥ, ಎಂ.ಎಸ್. ಚೌಡಪ್ಪ, ರಾಜಾರಾಂ, ಮಂಜುನಾಥರೆಡ್ಡಿ, ಮುರಳೀಧರ್, ನಾರಾಯಣಸ್ವಾಮಿ ಹಾಗೂ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.