ಚಿಕ್ಕಬಳ್ಳಾಪುರ: ನಗರದ ಜಿಲ್ಲಾ ಆಸ್ಪತ್ರೆ ಬಳಿಯ ಮನೆಯ ಮಹಡಿಯಲ್ಲಿದ್ದ ಪಾರಿವಾಳಗಳನ್ನು ಹಿಡಿಯುವ ವಿಚಾರದಲ್ಲಿ ಶನಿವಾರ ಘರ್ಷಣೆ ಉಂಟಾಗಿದೆ. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ವಿಚಾರ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳವರೆಗೂ ಮುಟ್ಟಿದೆ ಎನ್ನಲಾಗಿದೆ.
ಭಾಸ್ಕರ್ ಎಂಬುವರ ಪಕ್ಕದ ಮನೆಯವರು ಪಾರಿವಾಳಗಳನ್ನು ಸಾಕಿದ್ದರು. ಅವರು ಮನೆ ಖಾಲಿ ಮಾಡಿದರೂ ಪಾರಿವಾಳಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಈ ಪಾರಿವಾಳಗಳನ್ನು ಹಿಡಿಯಲು ದರ್ಗಾ ಮೊಹಲ್ಲಾದ ಕೆಲವು ಯುವಕರು ಆಗಾಗ್ಗೆ ಪ್ರಯತ್ನಿಸುತ್ತಿದ್ದರು.
ಶನಿವಾರ ಪಕ್ಕದ ಮನೆಯ ಮಹಡಿ ಹತ್ತಿ ಅಲ್ಲಿಂದ ಭಾಸ್ಕರ್ ಅವರ ಮನೆಯ ಮಹಡಿಗೆ ಬಂದು ಯುವಕನೊಬ್ಬ ಪಾರಿವಾಳ ಹಿಡಿಯಲು ಮುಂದಾಗಿದ್ದಾನೆ. ಈ ವೇಳೆ ಆತ ಬಿದಿದ್ದಾನೆ. ಭಾಸ್ಕರ್ ಈ ವಿಚಾರವಾಗಿ ಯುವಕನಿಗೆ ಬುದ್ಧಿ ಹೇಳಿದ್ದಾರೆ.
ಸ್ವಲ್ಪ ಸಮಯದ ನಂತರ ದರ್ಗಾ ಮೊಹಲ್ಲಾದ ಮಹಿಳೆಯರು, ಯುವಕರ ಗುಂಪು ಭಾಸ್ಕರ್ ಅವರ ಅಂಗಡಿಯ ಬಳಿ ಬಂದು ಜಗಳವಾಡಿದೆ. ಭಾಸ್ಕರ್ ಮತ್ತು ಅವರ ಸಹೋದರ ಮೇಲೆ ಹಲ್ಲೆ ನಡೆಸಿದೆ. ಭಾಸ್ಕರ್ ಈ ಸಂಬಂಧ ನಗರ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಎರಡೂ ಕಡೆಯವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.