ಚಿಕ್ಕಬಳ್ಳಾಪುರ: ಪಿ.ಎಂ ಕುಸುಮ್–ಬಿ (ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ತಾನ್ ಮಹಾ ಅಭಿಯಾನ್) ಕಾಂಪೊನೆಂಟ್ ‘ಸಿ’ ಸೌರವಿದ್ಯುತ್ ಯೋಜನೆಯ ಉದ್ಘಾಟನೆಗೆ ಗೌರಿಬಿದನೂರಿನಲ್ಲಿ ಕ್ಷಣಗಣನೆ ಆರಂಭವಾಗಿದೆ.
ಗೌರಿಬಿದನೂರು ತಾಲ್ಲೂಕಿನ ಹನುಮೇನಹಳ್ಳಿ ಬಳಿಯ ಸೌರವಿದ್ಯುತ್ ಘಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಘಟಕ ಉದ್ಘಾಟಿಸುವರು.
ಈ ಮೂಲಕ ರಾಜ್ಯದಲ್ಲಿ ಕುಸುಮ್ ಯೋಜನೆಯಡಿ ಸೌರ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡುವರು.
ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ವಿದ್ಯುತ್ ಉಪ ಕೇಂದ್ರ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಪಿ.ಎಂ ಕುಸುಮ್–ಬಿ ಕಾಂಪೊನೆಂಟ್ ‘ಸಿ’ ಸೌರವಿದ್ಯುತ್ ಯೋಜನೆಯು 13.3 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದಿಸಲಿದೆ. ಈ ಮೂಲಕ ತೊಂಡೇಬಾವಿ ಹಾಗೂ ಸುತ್ತಮುತ್ತಲಿನ ಎರಡು ಸಾವಿರ ರೈತರಿಗೆ ಅನುಕೂಲವಾಗಲಿದೆ.
ರಾಜ್ಯದಲ್ಲಿ ಕಾರ್ಯಾರಂಭ ಮಾಡುತ್ತಿರುವ ಮೊದಲ ಯೋಜನೆ ಇದಾಗಿದೆ.
ಕೃಷಿ ಪಂಪ್ಸೆಟ್ಗಳಿಗೆ ನಿರಂತರ 7 ತಾಸು ವಿದ್ಯುತ್ ಪೂರೈಸುವ ಉದ್ದೇಶದಿಂದ ‘ಪಿಎಂ –ಕುಸುಮ್ (ಸಿ)’ ಯೋಜನೆ ಜಾರಿಗೊಳಿಸಲಾಗುತ್ತಿದೆ. ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಿ ಸ್ಥಳೀಯ ಗ್ರಿಡ್ಗಳಿಗೆ ಪೂರೈಕೆ ಮಾಡಲಾಗುತ್ತದೆ.
ಜಿಲ್ಲೆಯಲ್ಲಿ ಒಟ್ಟು 18 ಸ್ಥಳಗಳಲ್ಲಿ ಸೌರ ವಿದ್ಯುತ್ ಘಟಕಗಳಿಗೆ ಯೋಜಿಸಲಾಗಿದೆ. ಈ ಎಲ್ಲ ವಿದ್ಯುತ್ ಘಟಕಗಳು ಪೂರ್ಣಗೊಂಡು ಕಾರ್ಯಾರಂಭ ಮಾಡಿದರೆ 136 ಮೆಗಾ ವಾಟ್ ಸೌರವಿದ್ಯುತ್ ಉತ್ಪಾದನೆ ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.