
ಸಂತ್ರಸ್ತ ಯುವತಿ
ಶಿಡ್ಲಘಟ್ಟ: ಮಾಜಿ ಪ್ರಿಯಕರನ ಮನೆ ಮುಂದೆ ಸಂತ್ರಸ್ಥ ನವ ವಿವಾಹಿತೆಯೊಬ್ಬರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಪಲಿಚೇರ್ಲು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಅಂಬರೀಷ್ ಎಂಬ ಯುವಕನ ಮನೆ ಮುಂದೆ ಸಂತ್ರಸ್ಥೆ ಯುವತಿ, ತನ್ನ ತಂದೆ–ತಾಯಿ ಹಾಗೂ ಬಂಧುಗಳೊಂದಿಗೆ ಕಳೆದ ಮೂರು ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಅಂಬರೀಷ್ ಮನೆಗೆ ಬೀಗ ಹಾಕಿದ್ದು ಮನೆಯಲ್ಲಿ ಯಾರೂ ಇಲ್ಲ.
ಘಟನೆ ವಿವರ: 21 ವರ್ಷದ ಸಂತ್ರಸ್ಥ ಯುವತಿ ಮತ್ತು ಅಂಬರೀಷ್ (25) ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಕ್ಕಲಿಗ ಜಾತಿಗೆ ಸೇರಿದ ಯುವಕ, ಪರಿಶಿಷ್ಟ ಜಾತಿಗೆ ಸೇರಿದ ಯುವತಿ ಜಾತಿ ಬೇರೆ ಎನ್ನುವ ಕಾರಣಕ್ಕೆ ಮದುವೆ ಕಷ್ಟ ಎಂದು ಅರಿತು ಇಬ್ಬರು ಬೇರೆಯಾಗಲು ನಿರ್ಧರಿಸಿದ್ದರು. ಅದರಂತೆ ಯುವತಿ ತನ್ನದೆ ಜಾತಿ ಯುವಕನೊಂದಿಗೆ ವಿವಾಹವಾಗಿದ್ದರು.
ಮದುವೆಯಾದ ನಂತರ ಅಂಬರೀಷ್, ತಾನು ಈ ಹಿಂದೆ ಯುವತಿ ಜತೆ ಇದ್ದ ಖಾಸಗಿ ಫೋಟೊ ಮತ್ತು ವಿಡಿಯೊಗಳನ್ನು ಸ್ನೇಹಿತ ಸುನೀಲ್ ಎಂಬುವವರ ವಾಟ್ಸ್ಆ್ಯಪ್ಗೆ ಕಳುಹಿಸಿದ್ದ. ಸುನೀಲ್, ಯುವತಿ ಪತಿ ಮೊಬೈಲ್ಗೆ ಆ ಪೋಟೊಗಳನ್ನು ಕಳುಹಿಸಿದ್ದಾನೆ. ಇದರಿಂದಾಗಿ ನವ ವಿವಾಹಿತರ ದಾಂಪತ್ಯದಲ್ಲಿ ಬಿರುಕು ಮೂಡಿದೆ.
ನೊಂದ ಯುವತಿ ಇಷ್ಟೆಲ್ಲ ರಾದ್ದಾಂತ ಮತ್ತು ಸಂಸಾರ ಹಾಳಾಗಲು ಕಾರಣನಾದ ಅಂಬರೀಷ್ ಮನೆ ಮುಂದೆ ಕಳೆದ ಮೂರು ದಿನಗಳಿಂದಲೂ ಧರಣಿ ನಡೆಸುತ್ತಿದ್ದಾರೆ.
ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಸಂತ್ರಸ್ಥ ಯುವತಿ ದೂರು ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದು ಇನ್ನೂ ಪ್ರಕರಣ ದಾಖಲಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.