ಬಾಗೇಪಲ್ಲಿ: ಪಟ್ಟಣದ ಗೂಳೂರು ರಸ್ತೆಯಲ್ಲಿನ ಮೇಜರ್ ಸಂದೀಪ್ ಉನ್ನಿ ಕೃಷ್ಣನ್ ಅವರ ನಾಮಫಲಕ ಕಿತ್ತೆಸೆದಿರುವ ಮತ್ತು ದಲಿತರ ಮನೆಗೆ ಅಡ್ಡವಾಗಿ ನಿರ್ಮಿಸಲಾದ ಶೆಡೆ ತೆರವಿಗೆ ಒತ್ತಾಯಿಸಿ ಪುರಸಭೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅಭಿಮಾನಿಗಳ ಬಳಗದ ಮುಖಂಡ, ಗ್ರಾಮ ಪಂಚಾಯಿತಿ ಸದಸ್ಯ ಎಂ. ಹರೀಶ್ ಮಾತನಾಡಿ, ‘ಪಟ್ಟಣದ ಗೂಳೂರು ರಸ್ತೆಯಿಂದ ಕ್ರೀಡಾಂಗಣಕ್ಕೆ ಸಂಚರಿಸುವ ರಸ್ತೆಗೆ ಈ ಹಿಂದೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ ಎಂದು ನಾಮಕರಣ ಮಾಡಿ ನಾಮಫಲಕ ಹಾಕಲಾಗಿತ್ತು. ಈ ರಸ್ತೆ 30 ಅಡಿಗಳಷ್ಟು ಅಗಲ ಇತ್ತು. ಆದರೆ ಹಿಂದಿನ ಪುರಸಭೆ ಕೆಲ ಅಧಿಕಾರಿಗಳು ಬೇಜಾವ್ದಾರಿಯಿಂದ ಕೆಲವರಿಗೆ ಪರಭಾರೆ ಮಾಡಿದ್ದು, ಶೆಡ್ ಅನ್ನೂ ನಿರ್ಮಿಸಿದ್ದಾರೆ’ ಎಂದು ಆರೋಪಿಸಿದರು.
ಕೂಡಲೇ ಪುರಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, 30 ಅಡಿ ರಸ್ತೆ ಮಾಡಿಸಬೇಕು. ರಸ್ತೆ ಅತಿಕ್ರಮಣ ಮಾಡಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅಕ್ರಮವಾಗಿ ನಿರ್ಮಿಸಿರುವ ಶೆಡ್ ಅನ್ನು ಮುಚ್ಚಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ವೈ.ರವಿ ಆಗಮಿಸಿ, ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ಅಂತಿಮ ತೀರ್ಪು ಬರಬೇಕು. ಪ್ರತಿಭಟನೆ ವಾಪಸ್ ಪಡೆಯುವಂತೆ ಮನವೊಲಿಕೆ ಮಾಡಿದರು. ಇದರಿಂದ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್ ಪಡೆದರು.
ಪ್ರತಿಭಟನೆಯಲ್ಲಿ ಸಿಆರ್ಪಿಎಫ್ನ ನಿವೃತ್ತ ಯೋಧ ವೆಂಕಟೇಶ್, ದಲಿತ ಮುಖಂಡ ಮೂರ್ತಿ, ನಿವೃತ್ತ ಶಿಕ್ಷಕ ಹನುಮೇಶ್, ಗೋವಿಂದಪ್ಪ ಸೇರಿದಂತೆ ಸಾರ್ವಜನಿಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.