ಶಿಡ್ಲಘಟ್ಟ: ರೇಷ್ಮೆ ನಗರಿ ಎನ್ನುವ ಖ್ಯಾತಿ ಹೊಂದಿರುವ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. 12 ಎಕರೆಯಲ್ಲಿ ₹185 ಕೋಟಿ ವೆಚ್ಚದಲ್ಲಿ ಈ ಮಾರುಕಟ್ಟೆ ನಿರ್ಮಾಣವಾಗುತ್ತಿದೆ.
ಈ ಮಾರುಕಟ್ಟೆಯೇ ಹೇಳುವಂತೆ ಶಿಡ್ಲಘಟ್ಟವು ರೇಷ್ಮೆಗೆ ಪ್ರಸಿದ್ಧಿ. ಹೀಗೆ ಒಂದು ಕಡೆ ಮಾರುಕಟ್ಟೆ ನಿರ್ಮಾಣವಾಗುತ್ತಿದ್ದರೆ ಮತ್ತೊಂದು ಕಡೆ ಮಾರುಕಟ್ಟೆಗೆ ರೇಷ್ಮೆಗೂಡಿನ ಆವಕ ಕುಸಿಯುತ್ತಿದೆ.
ಹೈಟೆಕ್ ಮಾರುಕಟ್ಟೆ ರೇಷ್ಮೆ ಬೆಳೆಗಾರರ ಬಹುದಿನದ ಬೇಡಿಕೆ. ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಘೋಷಣೆಯಾಗಿದೆ. ಇದೀಗ ಕಾಮಗಾರಿ ಆರಂಭವಾಗಲಿದೆ ಎಂದು ಮಾಹಿತಿ ಇದೆ.
ಕಳೆದ ಹತ್ತು ವರ್ಷಗಳ ರೇಷ್ಮೆ ಗೂಡಿನ ಆವಕದ ಪ್ರಮಾಣ ಪರಿಶೀಲಿಸಿದಾಗ ಕಳೆದ ಸಾಲಿನಲ್ಲಿ ಅತ್ಯಂತ ಕಡಿಮೆ ರೇಷ್ಮೆ ಗೂಡು ಮಾರುಕಟ್ಟೆಗೆ ಬಂದಿರುವುದು ತಿಳಿಯುತ್ತದೆ. ಆದರೆ, ತಾಲ್ಲೂಕಿನಾದ್ಯಂತ ಬೆಳೆದಿರುವ ಹಿಪ್ಪುನೇರಳೆ ಸೊಪ್ಪಿನ ಬೆಳೆಯ ಪ್ರಮಾಣವನ್ನು ಪರಿಗಣನೆಗೆ ತೆಗೆದುಕೊಂಡಾಗ ಅಷ್ಟೊಂದು ವ್ಯತ್ಯಾಸಗಳು ಕಾಣಿಸುವುದಿಲ್ಲ. ಹಾಗಾದರೆ ತಾಲ್ಲೂಕಿನಲ್ಲಿ ಉತ್ಪಾದನೆಯಾಗುತ್ತಿರುವ ರೇಷ್ಮೆ ಗೂಡು ಎಲ್ಲಿಗೆ ಹೋಗುತ್ತಿದೆ ಎಂಬ ಪ್ರಶ್ನೆ ಕಾಡುತ್ತದೆ.
ಗೂಡಿನ ವಹಿವಾಟು ಮಾರುಕಟ್ಟೆಗಿಂತ ಹೊರಭಾಗಗಳಲ್ಲಿ ನಡೆಯುತ್ತಿದೆಯೇ ಎನ್ನುವ ಅನುಮಾನ ಮೂಡಿಸಿದೆ.
‘ಯಾವ ಬೆಳೆಗೂ ಸಿಗದ ಉತ್ತಮ ವ್ಯವಸ್ಥೆಯನ್ನು ರೇಷ್ಮೆ ಬೆಳೆಗಾರರು ಹೊಂದಿದ್ದಾರೆ. ಅತ್ಯಂತ ಪಾರದರ್ಶಕವಾಗಿ ರೈತರಿಗೆ, ಆಯಾ ದಿನವೇ ಗೂಡು ಮಾರಾಟದ ಹಣ ದೊರೆಯುತ್ತಿದೆ. ಬೆಳೆಗೆ ಸರ್ಕಾರಿ ಭದ್ರತೆ ಇರುವ ರೇಷ್ಮೆ ಗೂಡಿನ ಮಾರುಕಟ್ಟೆ ಉಳಿಸಿಕೊಳ್ಳಬೇಕು. ಖಾಸಗಿಯಾಗಿ ತಾವು ಬೆಳೆದ ರೇಷ್ಮೆ ಗೂಡನ್ನು ಮಾರಾಟ ಮಾಡಿಕೊಳ್ಳುವ ಮೂಲಕ ಈ ಅತ್ಯುತ್ತಮ ವ್ಯವಸ್ಥೆಯನ್ನು ಕಳೆದುಕೊಳ್ಳಬಾರದು’ ಎಂದು ರೇಷ್ಮೆಗೂಡು ಮಾರುಕಟ್ಟೆಯ ಸಹಾಯಕ ನಿರ್ದೇಶಕ ತಿಮ್ಮರಾಜು ತಿಳಿಸಿದರು.
‘ರೀಲರುಗಳು ಹಿಂದೆ ಇದ್ದ ರೇಷ್ಮೆ ವಿನಿಮಯ ಕೇಂದ್ರವನ್ನು ಕಳೆದುಕೊಂಡು ಈಗ ಪರಿತಪಿಸುತ್ತಿದ್ದಾರೆ’ ಎನ್ನುತ್ತಾರೆ.
ರೇಷ್ಮೆ ಬೆಳೆಗಾರರ ಸಮಸ್ಯೆಗಳು: ಕೂಲಿಯಾಳುಗಳ ಸಮಸ್ಯೆ ಹೆಚ್ಚಿದೆ. ಸೊಪ್ಪು ಕಟಾವು ಯಂತ್ರವನ್ನು ಇನ್ನೂ ನಮ್ಮ ವಿಜ್ಞಾನಿಗಳು ಕಂಡುಹಿಡಿಯಲಿಲ್ಲ. ರಸಗೊಬ್ಬರಗಳ ಬೆಲೆ ಹೆಚ್ಚಾಗಿವೆ. ಈಗಿನ ಖರ್ಚು ವೆಚ್ಚಗಳಿಗೆ ಹೋಲಿಸಿದಲ್ಲಿ ಒಂದು ಕೆ.ಜಿ. ಮಿಶ್ರತಳಿ ರೇಷ್ಮೆ ಗೂಡಿಗೆ ₹1,000 ಇರಬೇಕಿತ್ತು ಎನ್ನುತ್ತಾರೆ ರೇಷ್ಮೆ ಬೆಳೆಗಾರರು.
ಈಚೆಗೆ ತಾಲ್ಲೂಕಿನಲ್ಲಿ ಹೂವು, ದಾಳಿಂಬೆ ಅಥವಾ ತರಕಾರಿ ಬೆಳೆಯುವುದು ಹೆಚ್ಚಾಗುತ್ತಿದೆ. ಆ ರೀತಿಯ ಬೆಳೆ ಹಾಕಿದ್ದಲ್ಲಿ ಸುತ್ತಮುತ್ತ ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯಲಾಗದು. ಅವುಗಳಿಗೆ ಸಿಂಪಡಿಸುವ ಔಷಧಿಗಳು ಹಿಪ್ಪುನೇರಳೆಗೆ ಮಾರಕ. ಇಂತಹ ಸೊಪ್ಪನ್ನು ತಿಂದ ರೇಷ್ಮೆ ಹುಳುಗಳು ನಾಲ್ಕನೇ ಜ್ವರದ ನಂತರ ಹತ್ತು ಹದಿನೈದು ದಿನಗಳಾದರೂ ಗೂಡು ಕಟ್ಟದೆ ಬಿಸಾಡಬೇಕಾಗುತ್ತದೆ. ಆಗ ರೈತರ ಪರಿಶ್ರಮವೆಲ್ಲ ನೀರಿನಲ್ಲಿ ಹೋಮಮಾಡಿದಂತಾಗುವುದು ಎನ್ನುವುದು ಅನುಭವಿ ರೇಷ್ಮೆ ಬೆಳೆಗಾರರ ಮಾತು.
‘ರೇಷ್ಮೆ ಬೆಳೆಗಾರರು ಕೋಲಾರ ಪದ್ಧತಿಯೆಂದೇ ಹೆಸರಾದ ಸಾಲುಕಡ್ಡಿ ಪದ್ಧತಿಯಲ್ಲಿ ಒತ್ತೊತ್ತಾಗಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುತ್ತಾರೆ. ಮರಗಡ್ಡಿ ಬೇಸಾಯ ಪದ್ಧತಿ ಅಳವಡಿಸಿಕೊಳ್ಳುವಂತೆ ಹೇಳಿದರೂ ಕೆಲವರು ಮಾತ್ರ ಅಳವಡಿಸಿಕೊಂಡಿದ್ದಾರೆ. ರೈತರು ಒಂದೇ ರೀತಿಯಾಗಿ ಬೆಳೆಯದಿರುವುದರಿಂದ ಸೊಪ್ಪು ಕತ್ತರಿಸುವ ಯಂತ್ರಗಳನ್ನು ಸಿದ್ಧಪಡಿಸಲು ಕಷ್ಟವಾಗಿದೆ’ ಎನ್ನುತ್ತಾರೆ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ.
ಈಗಿನ ತಾಂತ್ರಿಕತೆ ಬಗ್ಗೆ ಆಗಾಗ್ಗೆ ಇಲಾಖೆಯಿಂದ ಮಾಹಿತಿ ನೀಡಲಾಗುತ್ತಿದೆ. ನುಸಿ ರೋಗದ ನಿವಾರಣೆಗೂ ಸೂಕ್ಷ್ಮ ಪೋಷಕಾಂಶಗಳಿರುವ ಔಷಧಿ ತಿಳಿಸುತ್ತಿದ್ದೇವೆ. ಈ ವರ್ಷದ ಫೆಬ್ರುವರಿಯಿಂದ ಸೆಪ್ಟೆಂಬರ್ ವರೆಗೂ 3,900 ಮಂದಿ ರೇಷ್ಮೆ ಬೆಳೆಗಾರರಿಗೆ ಹುಳು ಸಾಕಾಣಿಕೆಗೆ ಅಗತ್ಯವಿರುವ ಔಷಧಿಗಳನ್ನು ಉಚಿತವಾಗಿ ನೀಡಿದ್ದೇವೆ ಎಂದರು.
‘ಬೆಲೆ ಕುಸಿದಾಗ ಪ್ರೋತ್ಸಾಹ ಧನ ನೀಡಿ’
ರೇಷ್ಮೆಗೂಡಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಕಡಿಮೆ ಬೆಲೆಗೆ ಮಾರಾಟವಾದಾಗ ಪ್ರೋತ್ಸಾಹಧನ ನೀಡಬೇಕು. ಉತ್ತಮವಾದ ಬಿತ್ತನೆ ಗೂಡುಗಳನ್ನು ತಂದು ಅದರಿಂದ ಮೊಟ್ಟೆ ಮತ್ತು ಚಾಕಿ ಮಾಡಬೇಕು. ಈ ಸಾಕಾಣಿಕೆ ಕೇಂದ್ರಗಳ ನಿರ್ವಹಣೆಯ ಗುಣಮಟ್ಟವನ್ನುಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸಬೇಕು. ಮೂಲ ಸರಿಯಾಗಿದ್ದಲ್ಲಿ ರೇಷ್ಮೆ ಬೆಳೆಗಾರರಿಗೆ ತೊಂದರೆ ಆಗುವುದಿಲ್ಲ. ಬೂದಾಳ ರಾಮಾಂಜಿನಪ್ಪ ರೇಷ್ಮೆ ಬೆಳೆಗಾರ
ಕೈಗಾರಿಕೆ ಪಾಲಾಗಲಿದೆಯೇ ರೇಷ್ಮೆ ಜಮೀನು?
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ 2823 ಎಕರೆ ಪ್ರದೇಶವನ್ನು ಕೈಗಾರಿಕೆಗಳ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಅಧಿಸೂಚನೆ ಹೊರಡಿಸಿರುವ ವಿಚಾರ ಹೈಕೋರ್ಟ್ ಅಂಗಳದಲ್ಲಿ ಇದೆ. ಈ ಜಮೀನು ಸ್ವಾಧೀನಕ್ಕೆ ಮುಂದಾಗಿರುವ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಬೆಳೆಯಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.