ADVERTISEMENT

ದೇವರ ಕಾಣುವ ಮಾಧ್ಯಮ ಗುರು: ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 6:16 IST
Last Updated 29 ಸೆಪ್ಟೆಂಬರ್ 2025, 6:16 IST
<div class="paragraphs"><p> ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್ ಮತ್ತು ಭಾರತ ಸರ್ಕಾರದ ಮಾಜಿ ವಿತ್ತ ಕಾರ್ಯದರ್ಶಿ, ಹಸ್ಮುಕ್ ಅಧಿಯಾ ಪಾಲ್ಗೊಂಡಿದ್ದರು.</p></div>

ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್ ಮತ್ತು ಭಾರತ ಸರ್ಕಾರದ ಮಾಜಿ ವಿತ್ತ ಕಾರ್ಯದರ್ಶಿ, ಹಸ್ಮುಕ್ ಅಧಿಯಾ ಪಾಲ್ಗೊಂಡಿದ್ದರು.

   

ಚಿಕ್ಕಬಳ್ಳಾಪುರ: ಭಕ್ತರು ನೇರವಾಗಿ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಆಗುವುದಿಲ್ಲ. ಗುರುವಿನ ಮಾಧ್ಯಮದಿಂದ ದೇವರನ್ನು ಕಾಣಲು ಸಾಧ್ಯ. ಈ ಪರಂಪರೆಯನ್ನು ನಾವು ಮುದ್ದೇನಹಳ್ಳಿಯಲ್ಲಿ ನೋಡುತ್ತಿದ್ದೇವೆ ಎಂದು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ತಿಳಿಸಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಹೋಮ, ಅತಿರುದ್ರ ಮಹಾಯಜ್ಞ ಮತ್ತು ದುರ್ಗಾ ಪೂಜೆಯ 7ನೇ ದಿನವಾದ ಭಾನುವಾರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

ಗುರು ಮತ್ತು ಭಕ್ತನ ಸಂಬಂಧ ನಮ್ಮ ದೇಶದ ಶ್ರೇಷ್ಠ ಪರಂಪರೆಯಾಗಿದೆ. ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸಿ, ಬೆಳೆಸುವುದು ಸಹ ಮೂಲಭೂತ ಕರ್ತವ್ಯ ಎಂದು ಹೇಳಿದರು.

ಹಣ, ವಿದ್ಯೆ ಸಂಪತ್ತು ಏನೇ ಇದ್ದರೂ ಮನುಷ್ಯನಿಗೆ ಅಂತರಿಕ ಶಾಂತಿ, ನೆಮ್ಮದಿ ಇರುವುದಿಲ್ಲ. ಆದರೆ ಸತ್ಯಸಾಯಿ ಗ್ರಾಮಕ್ಕೆ ಬಂದಾಗ ಇದೆಲ್ಲವೂ ಸಿಗುತ್ತದೆ. ತುಂಬಾ ವ್ಯವಸ್ಥಿತವಾಗಿ ಎಲ್ಲ ರೀತಿಯ ಸೇವೆಗಳನ್ನು ನೀಡುತ್ತಿದ್ದಾರೆ. ಇಲ್ಲಿಗೆ ಬಂದಾಗ ತೃಪ್ತಿ ಮತ್ತು ಸಂತೋಷವನ್ನು ಅನುಭವಿಸುತ್ತೀರಿ. ಅಧ್ಯಾತ್ಮ ಅನುಭವಕ್ಕೆ ಒಡ್ಡಿಕೊಂಡಾಗ ತೃಪ್ತರಾಗುತ್ತೀರಿ ಎಂದು ಹೇಳಿದರು.

ಸತ್ಯ ಸಾಯಿ ಸಂಸ್ಥೆಯು ಕೋಟ್ಯಂತರ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಶಿಕ್ಷಣ ನೀಡಿದೆ. ಆರೋಗ್ಯ ಸೇವೆಗಳ ಮೂಲಕ ಸಮಾಜಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಿದೆ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿದ್ದು ಹೆಮ್ಮರವಾಗಿ ಬೆಳೆದಿದೆ ಎಂದು ಪ್ರಶಂಸಿಸಿದರು.

ಸದ್ಗುರು ಮಧುಸೂದನ ಸಾಯಿ ಮಾತನಾಡಿ, ಸತ್ಯ ಸಾಯಿ ಬಾಬಾ ಅವರ 100ನೇ ಜನ್ಮದಿನದ ವೇಳೆಗೆ ದೇಶದಲ್ಲಿ 100 ಸ್ವಾಸ್ಥ್ಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದೇವೆ. ಒಟ್ಟಾರೆಯಾಗಿ ದೇಶದಲ್ಲಿ 6 ಸಾವಿರ ಸಾಯಿ ಸ್ವಾಸ್ಥ್ಯ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವಿದೆ ಎಂದರು.

ಪಂಚಾಯತಿ ಮಟ್ಟದಲ್ಲಿ ಆರೈಕೆ ಕೇಂದ್ರಗಳನ್ನು ತೆರೆಯಲಾಗುತ್ತದೆ. ತಾಲ್ಲೂಕು ಮಟ್ಟದಲ್ಲಿ ಸಾಯಿ ಆರೋಗ್ಯ ಕೇಂದ್ರವನ್ನು ತೆರೆಯುವ ಗುರಿ ಹೊಂದಿದ್ದೇವೆ. ಇದು 30 ರಿಂದ 40 ಹಾಸಿಗೆಗಳ ಸಾಮಾನ್ಯ ಆಸ್ಪತ್ರೆ ಆಗಿರುತ್ತದೆ. ನಂತರದ ಹಂತದಲ್ಲಿ ಸ್ಪೆಷಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಇರುತ್ತವೆ ಎಂದು ವಿವರಿಸಿದರು.

ಪ್ರಾಥಮಿಕ ಆರೋಗ್ಯ ಮಾದರಿಯನ್ನು ಉತ್ತೇಜಿಸಿದರೆ ಗರ್ಭಿಣಿ ಮತ್ತು ಶಿಶುಗಳ ಅಕಾಲಿಕ ಮರಣಗಳನ್ನು ಸುಲಭವಾಗಿ ತಡೆಯಬಹುದು. ಹಲವು ಕಾಯಿಲೆಗಳನ್ನು ಮುಂಚಿತವಾಗಿ ಪತ್ತೆ ಮಾಡುವುದರಿಂದ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತದೆ ಎಂದರು.

ಭಾರತದಲ್ಲಿ ಪ್ರತಿ ವರ್ಷ 25,000 ಕ್ಕೂ ಹೆಚ್ಚುತಾಯಂದಿರು ಮಗುವನ್ನು ಹೆರುವಾಗ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಗು ಅಥವಾ ತಾಯಿಯ ಸಾವನ್ನು ಸಂಪೂರ್ಣವಾಗಿ ತಪ್ಪಿಸಬಹುದು. ನಾವು ಅವರ ಸಮಸ್ಯೆಗಳನ್ನು ಸ್ವಲ್ಪ ಮೊದಲೇ ಕಂಡುಕೊಂಡು ಉತ್ತಮ ಆರೈಕೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ಗುರುಕುಲಂ ಶಿಕ್ಷಣ, ಆರೋಗ್ಯ ವಾಹಿನಿ ಮೊಬೈಲ್ ಆಸ್ಪತ್ರೆ ಹಾಗೂ ಸಾಯಿ ಸ್ವಾಸ್ಥ್ಯ ಆರೈಕೆ ಕೇಂದ್ರಕ್ಕೆ ಬೆಂಬಲ ನೀಡುತ್ತಿರುವ ‘ವೇದಾಂತ್ ಮೋಟಾರ್ಸ್’ ಕಂಪನಿಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಲಾಯಿತು.

ಕಂಪನಿಯ ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿವೇಕ್ ಸರಫ್ ಮತ್ತು ನಿರ್ದೇಶಕರಾದ ಸ್ಮಿತಾ ಸರಫ್ ಪ್ರಶಸ್ತಿ ಸ್ವೀಕರಿಸಿದರು.

ಧಾರ್ಮಿಕ ಕಾರ್ಯದ ಸಂಭ್ರಮ ನವರಾತ್ರಿಯ ಭಾಗವಾಗಿ ರಾಮತಾರಕ ಹೋಮ ಆಂಜನೇಯ ಹೋಮ ಸಾಯಿ ಗಾಯತ್ರಿ ಹೋಮ ಬೆಂಗಾಲಿ ಶೈಲಿಯಲ್ಲಿ ದುರ್ಗಾ ಪೂಜೆ ಮತ್ತು ಆರತಿ ನೆರವೇರಿತು. ಪೂರ್ಣಾಹುತಿ ಅಷ್ಟಾವಧಾನ ಸೇವಾ ಚತುರ್ವೇದ ಪಾರಾಯಣಂ ಸಂಗೀತ ಪಂಚವಾದ್ಯ ಹಾಗೂ ನಾದಸ್ವರದೊಂದಿಗೆ 7ನೇ ದಿನ ರುದ್ರಯಾಗ ಪೂರ್ಣಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.