ADVERTISEMENT

ಇಂದು 30 ಸಾವಿರ ಜನರಿಗೆ ಲಸಿಕೆ ಗುರಿ; ಜಿಲ್ಲಾಧಿಕಾರಿ ಆರ್.ಲತಾ

ಜಿಲ್ಲೆಯ 232 ಕೇಂದ್ರಗಳಲ್ಲಿ ಲಸಿಕಾ ಮೇಳ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 4:45 IST
Last Updated 21 ಜೂನ್ 2021, 4:45 IST
ಆರ್.ಲತಾ
ಆರ್.ಲತಾ   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಒಟ್ಟು 232 ಲಸಿಕಾ ಕೇಂದ್ರಗಳಲ್ಲಿ ಜೂ.21 ರಂದು ಕೋವಿಡ್-19 ಲಸಿಕಾ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ 30 ಸಾವಿರ ಜನರಿಗೆ ಕೋವಿಡ್ ಲಸಿಕೆ ಹಾಕುವ ಗುರಿ ಇದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

ಜಿಲ್ಲಾ ಸರ್ಕಾರಿ ಆಸ್ಪತ್ರೆ, ಎಲ್ಲ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳು, ನಾಲ್ಕು ನಗರ ಆರೋಗ್ಯ ಕೇಂದ್ರಗಳು, ಎರಡು ಸಮುದಾಯ ಆರೋಗ್ಯ ಕೇಂದ್ರಗಳು, 57 ಪ್ರಾಥಮಿಕ ಆರೋಗ್ಯ ಕೇಂದ್ರಗಳು,ನಗರಸಭೆ, ಪುರಸಭೆಗಳು, 157 ಗ್ರಾಮ ಪಂಚಾಯಿತಿಗಳಲ್ಲಿ ಲಸಿಕಾ ಮೇಳ ನಡೆಯಲಿದೆ ಎಂದಿದ್ದಾರೆ.

ಕೊರೊನಾ ಸೋಂಕನ್ನು ಪೂರ್ಣವಾಗಿ ತೊಲಗಿಸಬೇಕಾದರೆ ಲಸಿಕೆ ಹಾಕುವುದೇ ಅಂತಿಮ ಅಸ್ತ್ರವಾಗಿದೆ. ಇದನ್ನು ಸರ್ಕಾರ ಮನಗಂಡು ಲಸಿಕೆ ಹಾಕುವುದನ್ನು ಮತ್ತಷ್ಟು ವೇಗಗೊಳಿಸಿದೆ. ಕೋವಿಡ್-19 ಲಸಿಕಾ ಮೇಳ ಆಯೊಜಿಸುವಂತೆ ಆದೇಶಿಸಿದೆ. ವಿವಿಧ ಆದ್ಯತಾ ಗುಂಪಿನವರಿಗೆ ಮೇಳ ಹಮ್ಮಿಕೊಳ್ಳಲಾಗಿದೆ.

ADVERTISEMENT

ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲಾಡಳಿತದ ಎಲ್ಲ ಅಧಿಕಾರಿ, ಸಿಬ್ಬಂದಿ ಉತ್ತಮ ಕೆಲಸ ಮಾಡಿ 30,000 ಲಸಿಕೆ ಹಾಕುವ ಗುರಿ ತಲುಪಬೇಕು. ಜನರು ಸಹ ಮೇಳವನ್ನು ಯಶಸ್ವಿಗೊಳಿಸುವ ಮೂಲಕ 7ನೇ ಅಂತರರಾಷ್ಟ್ರೀಯ ಯೋಗಾ ದಿನಾಚರಣೆ ಆಚರಿಸಬೇಕು ಎಂದು ಮನವಿಮಾಡಿದ್ದಾರೆ.

ಭಾರತದಲ್ಲಿ ಕೊರೊನಾ ಮೂರನೇ ಅಲೆ ಬರುತ್ತದೆ ಎಂದು ವಿಶ್ವಸಂಸ್ಥೆಯು ಅಭಿಪ್ರಾಯಪಟ್ಟಿದೆ. ಮಕ್ಕಳ ಮೇಲೆ ದುಷ್ಪರಿಣಾಮ ಬೀರುವುದರ ಬಗ್ಗೆ ಖಾತರಿ ಪಡಿಸಿಲ್ಲ. ಆದರೂ 3 ಅಲೆ ಬಂದರೆ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಹಿಂದಿನಂತೆ ಜಿಲ್ಲೆಯ ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದರ ಜೊತೆಗೆ ಲಸಿಕೆ ಹಾಕಿಸಿಕೊಳ್ಳುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕುಎಂದು ಹೇಳಿದ್ದಾರೆ.

ಜೂ.21 ರಿಂದ ಸರ್ಕಾರ ಕೆಲವು ಕೋವಿಡ್ ನಿಬಂಧನೆಗಳನ್ನು ಜಿಲ್ಲೆಯಲ್ಲಿ ಸಡಿಲಿಸಿದೆ. ಆದರೆ ಜನರು ನಿರ್ಲಕ್ಷ್ಯ ವಹಿಸಿದರೆ ಆಪತ್ತಿಗೆ ಒಳಗಾಗುವ ಸಂಭವ ಇದೆ. ಇಂತಹ ಅವಘಡಕ್ಕೆ ಜನರು ಅವಕಾಶ ಮಾಡಿಕೊಡಬೇಡಿ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.