
ಚಿಂತಾಮಣಿ: ತಾಲ್ಲೂಕಿನ ಕೋಟಗಲ್ ಗ್ರಾಮ ಪಂಚಾಯಿತಿಗೆ ಸೇರಿದ ನರಸಾಪುರದ ಬಳಿ ಇರುವ ಚೌಡೇಶ್ವರಿ ಕನಿಕಲಮ್ಮ ಬಂಗಾರು ಬೆಟ್ಟದಲ್ಲಿ ಕ್ವಾರಿ ನಡೆಸಲು ಅನುಮತಿ ನೀಡಿರುವುದನ್ನು ವಿರೋಧಿಸಿ ಜನರು ಪ್ರತಿಭಟನೆ ನಡೆಸಿದರು.
ನರಸಾಪುರ ಶ್ರೀನಿವಾಸರೆಡ್ಡಿ ಮಾತನಾಡಿ, ಚೌಡೇಶ್ವರಿ ಕನಿಕಲಮ್ಮ ಬೆಟ್ಟ ಮುಜರಾಯಿ ಇಲಾಖೆಗೆ ಸೇರಿದ್ದು ಬೆಟ್ಟದ ಸುತ್ತಲು ಕೆರೆ, ಉತ್ತಮ ಪರಿಸರಇದೆ. ರೈತರು ಕುರಿ, ಮೇಕೆ, ದನಕರುಗಳನ್ನು ಮೇಯಿಸಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ಪ್ರಕೃತಿ ಮಡಿಲಲ್ಲಿ ಎರಡು ಕ್ವಾರಿ ನಡೆಸಲು ಅನುಮತಿ ನೀಡಿರುವುದಕ್ಕೆ ಆತಂಕಕ್ಕೀಡಾಗಿದ್ದೇವೆ ಎಂದರು.
ಬಹುತೇಕ ಮಂದಿ ತೀರ ಹಿಂದುಳಿದ ಸಮುದಾಯಗಳನ್ನು ಹೊಂದಿರುವ ಗ್ರಾಮಗಳಾಗಿವೆ. ಕ್ವಾರಿಗಳನ್ನು ನಡೆಸಲಿ ಆದರೆ ನಮ್ಮ ಗ್ರಾಮಗಳ ಜನರು ವಾಸ ಮಾಡಲು ಬೇರೆ ಕಡೆ ಯೋಗ್ಯವಾದ ಜಮೀನು ಮನೆಗಳನ್ನು ಕೊಟ್ಟು ಸರ್ಕಾರ ಕ್ವಾರಿಗಳನ್ನು ನಡೆಸಿಕೊಳ್ಳಲಿ ಎಂದು ಒತ್ತಾಯಿಸಿದರು.
ಮುಜರಾಯಿ ಇಲಾಖೆಗೆ ಸೇರಿದ ಗುಡಿಯನ್ನು ಸರ್ಕಾರ ಅಭಿವೃದ್ಧಿಪಡಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ನ್ಯಾಯ ದೊರಕಿಸಿ ದೇವಾಲಯವನ್ನು ಉಳಿಸಬೇಕು ಎಂದು ಮನವಿ ಮಾಡಿದರು.
ಪ್ರತಿ ವರ್ಷ ದೀಪೋತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ನರಸಾಪುರ, ಕೋಟಗಲ್, ಸುಜ್ಜನಹಳ್ಳಿ, ಕುರರ್ಮಾಲಹಳ್ಳಿ, ಅನಕಲ್, ಕೆ.ರಾಗುಟ್ಟಹಳ್ಳಿ, ದೊಡ್ಡಿಹಳ್ಳಿ, ಜಗತನಹಳ್ಳಿ ಗ್ರಾಮಸ್ಥರು ಭಾನುವಾರ ನಡೆದ ದೀಪೋತ್ಸವದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.