ADVERTISEMENT

ಇಂದು ವಿಶ್ವ ಛಾಯಾಗ್ರಹಣ ದಿನ: ಛಾಯಾಗ್ರಹಣಕ್ಕೆ ವೈವಿಧ್ಯಮಯ ತಾಣಗಳು

ಡಿ.ಜಿ.ಮಲ್ಲಿಕಾರ್ಜುನ
Published 19 ಆಗಸ್ಟ್ 2021, 3:01 IST
Last Updated 19 ಆಗಸ್ಟ್ 2021, 3:01 IST
ಭೋಗನಂದೀಶ್ವರ ದೇವಸ್ಥಾನದ ಸುಂದರ ಕಂಬಗಳ ಸಾಲು
ಭೋಗನಂದೀಶ್ವರ ದೇವಸ್ಥಾನದ ಸುಂದರ ಕಂಬಗಳ ಸಾಲು   

ಶಿಡ್ಲಘಟ್ಟ: ಇಂದು ವಿಶ್ವ ಛಾಯಾಗ್ರಹಣ ದಿನ. ಛಾಯಾಗ್ರಹಣಕ್ಕಿರುವ ಸಾಮರ್ಥ್ಯವನ್ನು ‘ಒಂದು ಚಿತ್ರ ಸಾವಿರ ಪದಗಳಿಗೆ ಸಮ’, ‘ಪದಗಳಲ್ಲಿ ವರ್ಣಿಸಲಸಾಧ್ಯವಾದ ಅದೆಷ್ಟೋ ಮಾತುಗಳನ್ನು ಕೇವಲ ಒಂದು ಚಿತ್ರ ಬಿಡಿಸಿಡುತ್ತದೆ’ ಎಂಬಂಥ ಮಾತುಗಳು ತಿಳಿಸುತ್ತದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಛಾಯಾಚಿತ್ರದ ಮೂಲಕ ಸಕಾರಾತ್ಮಕವಾಗಿ ಪರಿವರ್ತಿಸುವ ಅನೇಕ ತಾಣಗಳಿವೆ. ಐತಿಹಾಸಿಕ ಮತ್ತು ಪ್ರವಾಸಿ ಸ್ಥಳಗಳು ಹಲವಾರು ಇವೆ. ಈ ಸ್ಥಳಗಳಿಗೆ ಪದೇ ಪದೇ ಭೇಟಿ ನೀಡಿದಾಗಲೆಲ್ಲ, ಅಚ್ಚರಿ ಎನ್ನಿಸುವಂತೆ ವಿಭಿನ್ನವಾದ ಛಾಯಾಚಿತ್ರಗಳನ್ನು ಕ್ಲಿಕ್ಕಿಸಬಹುದಾಗಿದೆ. ಪ್ರತಿ ಬಾರಿ ಭೇಟಿ ನೀಡಿದಾಗಲೂ ಹೊಸ ಚಿತ್ರಗಳು ಸೃಷ್ಟಿಯಾಗುತ್ತವೆ.

ರಮಣೀಯ ನಂದಿಬೆಟ್ಟ, ಶಿಲ್ಪಕಲೆಯ ಐತಿಹಾಸಿಕ ಭೋಗನಂದೀಶ್ವರ ದೇವಾಲಯ, ಕೈಲಾಸಗಿರಿ, ಕೈವಾರ, ಮುರುಗಮಲ್ಲ, ಮುಕ್ತೀಶ್ವರ, ಗುಮ್ಮನಾಯಕನಪಾಳ್ಯ ಕೋಟೆ, ವೆಂಕಟಾಪುರದ ಪಾರಂಪರಿಕ ವೃಕ್ಷ, ವಿದುರಾಶ್ವತ್ಥ, ವೀರಸೌಧ, ಹೊಸೂರು, ಗುಡಿಬಂಡೆ ಕೋಟೆ ಮುಂತಾದ ಪ್ರವಾಸಿಗರ ನೆಚ್ಚಿನ ಸ್ಥಳಗಳಿವೆ.

ADVERTISEMENT

ಹಲವಾರು ಪ್ರಬೇಧದ ಹಕ್ಕಿಗಳನ್ನು ವೀಕ್ಷಿಸಲು ಮತ್ತು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಹಲವು ಪಕ್ಷಿವೀಕ್ಷಕರಿಗೆ ಈಗಲೂ ನಂದಿಬೆಟ್ಟವು ಸೂಕ್ತ ತಾಣವಾಗಿದೆ. ಟಿಕೆಲ್ಸ್ ಬ್ಲೂ ಫೈಕ್ಯಾಚರ್, ವೈಟ್‌ಐ, ಸೂರಕ್ಕಿ. ಮೈನಾಗಳು, ಬುಲ್‌ಬುಲ್‌ಗಳು, ಥ್ರಷ್‌ಗಳು, ಎತ್ತರದಲ್ಲಿ ಹಾರುವ ವಿವಿಧ ಹದ್ದುಗಳು ಇಲ್ಲಿ ಕಾಣಸಿಗುತ್ತವೆ.

ಬಯಲುಸೀಮೆ ಬರಪೀಡಿತ ಪ್ರದೇಶ ಎಂದು ಕರೆಸಿಕೊಂಡರೂ ಜಿಲ್ಲೆಯಲ್ಲಿನ ಕೆರೆಗಳು ಮತ್ತು ಕುರುಚಲು ಕಾಡುಗಳು ಪಕ್ಷಿ ಸಂಕುಲಕ್ಕೆ ಆಶ್ರಯತಾಣಗಳಾಗಿವೆ. ಅಪರೂಪದ ಅತಿಥಿಗಳ ರೂಪದಲ್ಲಿ ಹಲವಾರು ವಲಸೆ ಹಕ್ಕಿಗಳೂ ಬಂದು ಹೋಗುತ್ತವೆ. ಬಾಗೇಪಲ್ಲಿ ತಾಲ್ಲೂಕಿನ ವೀರಾಪುರ ಪ್ರದೇಶಕ್ಕೆ ಪ್ರತೀ ವರ್ಷ ಹಲವಾರು ಹಕ್ಕಿಗಳು ಬರುತ್ತವೆ. ನವೆಂಬರ್ ಡಿಸೆಂಬರ್ ಆಸುಪಾಸಿನಲ್ಲಿ ಬರುವ ಈ ಹಕ್ಕಿಗಳು ಮಾರ್ಚ್ ಏಪ್ರಿಲ್ ತಿಂಗಳವರೆಗೂ ತಂಗುತ್ತವೆ. ಸೈಬೀರಿಯನ್ ಕೊಕ್ಕರೆಗಳು, ಪೇಂಟೆಡ್ ಸ್ಟಾರ್ಕ್, ಸ್ಪೂನ್ ಬಿಲ್ ಮುಂತಾದ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಮರದ ರೆಂಬೆ, ಕೊಂಬೆಗಳ ಮೇಲೆ ಗೂಡು ಕಟ್ಟಿ ಮರಿಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.