ಚಿಕ್ಕಮಗಳೂರು: ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರನ್ನು ಬಂಧಿಸಿ 1.01 ಕ್ವಿಂಟಲ್ ಗಾಂಜಾ, ಕಾರು, ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿಇಎನ್ (ಸೈಬರ್, ಎಕನಾಮಿಕ್ಸ್ ಆ್ಯಂಡ್ ನಾರ್ಕೊಟಿಕ್) ಅಪರಾಧ ಠಾಣೆ ಇನ್ಸ್ಪೆಕ್ಟರ್ ಎ.ಕೆ. ರಕ್ಷಿತ್ ನೇತೃತ್ವದ ತಂಡವು ಬೇಲೂರು ರಸ್ತೆಯಲ್ಲಿ ಕಾರು ತಡೆದು ತಪಾಸಣೆ ಮಾಡಿದೆ. ಗಾಂಜಾ ತುಂಬಿದ್ದ ಪ್ಲಾಸ್ಟಿಕ್ ಚೀಲಗಳು ಕಾರಿನಲ್ಲಿ ಪತ್ತೆಯಾಗಿವೆ. 1.01 ಕ್ವಿಂಟಲ್ ಮಾಲು ಪತ್ತೆಯಾಗಿದ್ದು, ಗಾಂಜಾ ಮೌಲ್ಯ ₹ 25 ಲಕ್ಷ ಎಂದು ಅಂದಾಜಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಿಂದ ಚಿಕ್ಕಮಗಳೂರಿಗೆ ಗಾಂಜಾವನ್ನು ಮಾರಾಟಕ್ಕೆ ಸಾಗಿಸುತ್ತಿದ್ದರು. ಮಾಹಿತಿ ಮೇರೆಗೆ ಜಾಡು ಪತ್ತೆ ಹಚ್ಚಿ ಮಾಲು ಸಮೇತ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾವನ್ನು ವಾಹನಗಳನ್ನು ಗೋವಾ, ಕರ್ನಾಟಕದ ವಿವಿಧೆಡೆಗಳಿಗೆ ವಾಹನಗಳಲ್ಲಿ ಸಾಗಣೆ ಮಾಡುತ್ತಿದ್ದರು. ಜಾಲದ ಸೂತ್ರಧಾರ ಮತ್ತು ಪ್ರಮುಖ ಆರೋಪಿಯು ಕಾರಾಗೃಹದಿಂದಲೇ ಚಟುವಟಿಕೆಗಳನ್ನು ನಿಭಾಯಿಸುತ್ತಿದ್ದು ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರಕು ಸಾಗಣೆ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಜಾಲವೊಂದನ್ನು ಮೇ 6ರಂದು ಭೇದಿಸಲಾಗಿತ್ತು. 30 ಕೆ.ಜಿ ಗಾಂಜಾ, ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿಯ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ತಂಡಕ್ಕೆ ಸಿಕ್ಕಿದ ಮಾಹಿತಿ ಮೇರೆಗೆ ಬೇಲೂರು ರಸ್ತೆಯಲ್ಲಿ ಕಾರು ತಡೆದು ಗಾಂಜಾ ಸಾಗಣೆ ಪತ್ತೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.