ಚಿಕ್ಕಮಗಳೂರು: ಜಿಲ್ಲೆಯ ಬಾಳೂರು ಮೀಸಲು ಅರಣ್ಯದಲ್ಲಿ ‘ಮಾಫಿ ಪಾಸ್’ (ಖಾಸಗಿ ಜಮೀನಿನ ವೃಕ್ಷ ಕತ್ತರಿಗೆ ಸಮ್ಮತಿ) ಹೆಸರಿನಲ್ಲಿ ಗಡಿರೇಖೆಯ ಕಾಡು ಮರಗಳನ್ನು ಕತ್ತರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಏಳು ನೌಕರರನ್ನು ಅಮಾನತುಗೊಳಿಸಲಾಗಿದೆ.
ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪಂವಾರ್ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು ವಿಭಾಗದ ಪ್ರಭಾರ ಸರ್ವೆ ರೇಂಜರ್ ದಿನೇಶ್, ಫಾರೆಸ್ಟರ್ಗಳಾದ ಮಧುಸೂದನ್, ಶಿವರಾಜ ನಾಯಕ್, ಮೂಡಿಗೆರೆ ಉಪವಿಭಾಗದ ಅರಣ್ಯ ರಕ್ಷಕ ಸುರೇಶ್, ಕೊಪ್ಪ ವಿಭಾಗದ ಸೆಕ್ಷನ್ ಫಾರೆಸ್ಟರ್ ಯಾಸಿನ್ ಬಾಷಾ, ಅರಣ್ಯ ರಕ್ಷಕ ನವೀನ್ಕುಮಾರ್, ಸರ್ವೆ ಫಾರೆಸ್ಟರ್ ಅರುಣ್ಕುಮಾರ್ ಬಾರಂಗಿ ಅಮಾನತುಗೊಂಡವರು.
‘ಪ್ರಕರಣದ ನಿಷ್ಪಕ್ಷಪಾತ ತನಿಖೆ ನಿಟ್ಟಿನಲ್ಲಿ ಈ ಕ್ರಮ ವಹಿಸಲಾಗಿದೆ. ಇಲಾಖೆ ವಿಚಾರಣೆ ಕಾಯ್ದಿರಿಸಿ ಏಳು ಮಂದಿಯನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದ ಕುರಿತು ಕೂಲಂಕಷವಾಗಿ ವಿಚಾರಣೆ ನಡೆಸಲು ಸೂಚನೆ ನೀಡಿದ್ದೇನೆ’ ಎಂದು ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪಂವಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಏನಿದು ಪ್ರಕರಣ: ಬಾಳೂರು ಮೀಸಲು ಅರಣ್ಯ ಪ್ರದೇಶದಲ್ಲಿ ‘ಮಾಫಿ ಪಾಸ್’ ಹೆಸರಿನಲ್ಲಿ ಗಡಿರೇಖೆಯ ಸುಮಾರು 350ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದೆ ಎಂದು ಈಚೆಗೆ ದೂರು ದಾಖಲಾಗಿತ್ತು. ಅಕ್ರಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.