
ಮಡಬೂರು (ನರಸಿಂಹರಾಜಪುರ): ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಬೂರು ಗ್ರಾಮದ ಎಕ್ಕಡಬೈಲು ಜಾನ್ ಪೌಲ್ ಎಂಬುವರ ಮನೆಯ ಸಮೀಪದಲ್ಲೇ 10 ಕಾಡಾನೆಗಳ ಹಿಂಡು ಮಂಗಳವಾರ ಬೆಳಿಗ್ಗೆ ಕಾಣಿಸಿಕೊಂಡಿದೆ.
ಮಂಗಳವಾರ ಬೆಳಿಗ್ಗೆ 9.30ರ ವೇಳೆಗೆ ಜಾನ್ ಪೌಲ್ ಅವರ ಮನೆಯ ನಾಯಿ ಬೊಗಳಿದ್ದು, ಮನೆಯವರು ನೋಡಿದಾಗ ಮನೆಯ ಪಕ್ಕದಿಂದ 100 ಅಡಿ ದೂರದ ಆರಂಬಳ್ಳಿ ಅರಣ್ಯದಲ್ಲಿ ಮರಿಗಳು ಸೇರಿ 10 ಕಾಡಾನೆಗಳು ಬೀಡು ಬಿಟ್ಟಿದ್ದವು. ಸಾಕಷ್ಟು ಸಮಯದವರೆಗೂ ಕಾಡಾನೆಗಳು ಜಾಗ ಬಿಟ್ಟು ಹೋಗದೆ ಇರುವುದರಿಂದ ಅರಣ್ಯ ಇಲಾಖೆ ಹಾಗೂ ಆನೆ ಕಾರ್ಯಾಪಡೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳ ಹಿಂಡನ್ನು ಸಾತ್ಕೋಳಿ, ಮುದುಕೂರು ಭಾಗದ ಅರಣ್ಯಕ್ಕೆ ಓಡಿಸಿದ್ದಾರೆ.
ಮಡಬೂರು ಗ್ರಾಮದ ಎಕ್ಕಡಬೈಲಿನಲ್ಲಿ 2024ರ ಡಿಸೆಂಬರ್ನಲ್ಲಿ ನಡೆದ ಆನೆ ದಾಳಿಯಲ್ಲಿ ಎಲಿಯಾಸ್ ಎಂಬುವರು ಮೃತಪಟ್ಟಿದ್ದರು. ಆರಂಬಳ್ಳಿ ಮೀಸಲು ಅರಣ್ಯದಿಂದ ಕಾಡಾನೆಗಳು ಈಚೆಗೆ ಬಾರದಂತೆ ಈಗಾಗಲೇ ಅರ್ಧ ಕಿ.ಮೀ.ಆನೆ ಕಂದಕ ಮಾಡಲಾಗಿದೆ. ಇನ್ನೂ 4 ರಿಂದ 5 ಕಿ.ಮೀ. ಆನೆ ಕಂದಕ ಮಾಡಿದರೆ ಆರಂಬಳ್ಳಿ ಮೀಸಲು ಅರಣ್ಯದಿಂದ ಕಾಡಾನೆಗಳು ಎಕ್ಕಡಬೈಲು, ಮಡಬೂರು ಕಾಲೋನಿಗ ಬರಲು ಸಾಧ್ಯವಿಲ್ಲ. ಹಾಗಾಗಿ ಅರಣ್ಯ ಇಲಾಖೆಯವರು ಗಮನ ನೀಡಿ ಆನೆ ಕಂದಕ ನಿರ್ಮಾಣ ಮುಂದುವರಿಸಬೇಕು ಎಂದು ಯಕ್ಕಡಬೈಲಿನ ಜಾನ್ ಪೌಲ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.