ಬಾಳೆಹೊನ್ನೂರು: ನವರಾತ್ರಿಯ ಸಂದರ್ಭದಲ್ಲಿ ಜಗನ್ಮಾತೆಯ ಸನ್ನಿಧಿಯಲ್ಲಿ ಯಜ್ಞ ಯಾಗಾದಿಗಳನ್ನು ನಡೆಸುವುದರಿಂದ ಅನಂತ ಪುಣ್ಯ ಫಲಗಳು ಲಭಿಸಲಿದೆ ಎಂದು ಕೋಣಂದೂರಿನ ವೇದ ಬ್ರಹ್ಮ ರವೀಂದ್ರ ಶರ್ಮಾ ಹೇಳಿದರು.
ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ವತಿಯಿಂದ ಆಯೋಜಿಸಿರುವ 16ನೇ ವರ್ಷದ ದುರ್ಗಾದೇವಿ ನವರಾತ್ರಿ ಮಹೋತ್ಸವದಲ್ಲಿ ಭಾನುವಾರ ನಡೆದ ಚಂಡಿಕಾ ಹೋಮವನ್ನು ನೆರವೇರಿಸಿ ಮಾತನಾಡಿದ ಅವರು, ಚಂಡಿಕಾ ಹೋಮವು ದುರ್ಗಾದೇವಿಯ ಉಗ್ರ ರೂಪವಾದ ಚಂಡಿಕಾ ದೇವಿಗೆ ಸಮರ್ಪಿತವಾದ ಒಂದು ಶಕ್ತಿಶಾಲಿ ವೈದಿಕ ಆಚರಣೆಯಾಗಿದೆ. ಇದು ಜೀವನದ ಎಲ್ಲಾ ಅಡೆ–ತಡೆಗಳನ್ನು ನಿವಾರಿಸಲು, ನಕಾರಾತ್ಮಕ ಶಕ್ತಿಗಳು ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಸಾಧ್ಯವಿದೆ. ಈ ಯಾಗದಿಂದ ಉತ್ತಮ ಆರೋಗ್ಯ, ಸಮೃದ್ಧಿ, ಯಶಸ್ಸು ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಪಡೆಯಲು ಸಾಧ್ಯವಿದೆ. ಜೀವನದಲ್ಲಿ ದೈವಿಕ ಅನುಗ್ರಹವನ್ನು ಪಡೆಯಲು ಸಹ ಇದು ಪೂರಕವಾಗಿದೆ ಎಂದರು.
ನವರಾತ್ರಿಯ ಹಬ್ಬದ ಸಂದರ್ಭದಲ್ಲಿ ಚಂಡಿಕಾ ಹೋಮವನ್ನು ನಡೆಸುವುದು ಅತ್ಯಂತ ಮಂಗಳಕರವೆಂದು ವೇದ, ಪುರಾಣಗಳಲ್ಲಿ ತಿಳಿಸಲಾಗಿದೆ. ಲೋಕಕಲ್ಯಾಣಕ್ಕಾಗಿ ಈ ಹೋಮವನ್ನು ನಡೆಸಿದಾಗ ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಕಾರಾತ್ಮಕ ಶಕ್ತಿಯನ್ನು, ಮಹಾಲಕ್ಷ್ಮಿ ಸಂಪತ್ತು ಮತ್ತು ಯಶಸ್ವಿ ವೃತ್ತಿಯನ್ನು ಮತ್ತು ಶಿಕ್ಷಣಕ್ಕಾಗಿ ಸರಸ್ವತಿಯನ್ನು ಸೃಷ್ಟಿಸುತ್ತದೆ ಎಂದರು.
ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ಪ್ರಧಾನ ಅರ್ಚಕ ಸುಬ್ರಮಣ್ಯ ಭಟ್ ಧಾರ್ಮಿಕ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು. ಸಮಿತಿಯ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್, ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ, ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಪ್ರಮುಖರಾದ ಶಿವರಾಮಶೆಟ್ಟಿ, ಕೆ.ಟಿ.ವೆಂಕಟೇಶ್, ಎಚ್.ಡಿ.ಸತೀಶ್, ಚೈತನ್ಯ ವೆಂಕಿ, ಎಚ್.ಎಚ್.ಕೃಷ್ಣಮೂರ್ತಿ, ಡಿ.ಎನ್.ಸುಧಾಕರ್, ಬಿ.ಕೆ.ನಾಗರಾಜ್, ನಾರಾಯಣಶೆಟ್ಟಿ ತುಪ್ಪೂರು, ರೆನ್ನಿ ದೇವಯ್ಯ, ಬಿ.ಗಿರೀಶ್, ಈಶ್ವರ್ ಇಟ್ಟಿಗೆ, ನಟರಾಜ್ ಶೆಟ್ಟಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.